ಪ್ರತ್ಯೇಕ ರಾಜ್ಯ ವಿರೋಧಿಸಿ ಚಿಕ್ಕಮಗಳೂರು, ರಾಯಚೂರಿನಲ್ಲಿ ಕರವೇ ಪ್ರತಿಭಟನೆ
Recommended Video
ರಾಯಚೂರು, ಆಗಸ್ಟ್.02: ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯಕ್ಕೆ ಆಗ್ರಹಿಸಿ ನಡೆಯುತ್ತಿರುವ ಬಂದ್ ಗೆ ಬಿಸಿಲನಾಡು ರಾಯಚೂರಿನಲ್ಲಿ ಯಾವುದೇ ಪ್ರತಿಕ್ರಿಯೆ ಕಂಡು ಬಂದಿಲ್ಲ. ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟಕ್ಕೂ ನಮಗೂ ಯಾವುದೇ ಸಂಬಂಧವಿಲ್ಲದಂತೆ ಕಂಡು ಬರುತ್ತಿದೆ.
ಎಂದಿನಂತೆ ಜನ-ಜೀವನ ಸಾಗಿದ್ದು, ಅಂಗಡಿ ಮುಗ್ಗಟ್ಟು, ವ್ಯಾಪಾರ ವಹಿವಾಟು ಆರಂಭಿಸಿವೆ. ಅಷ್ಟೇ ಅಲ್ಲದೇ ಇಡೀ ಹೈದ್ರಾಬಾದ್ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಬೆಂಬಲ ಸಿಕ್ಕಿಲ್ಲ. ಇನ್ನು ಹೈದ್ರಾಬಾದ್ ಕರ್ನಾಟಕ ಭಾಗದಲ್ಲೇ ಎರಡನೇ ರಾಜಧಾನಿ ಮಾಡಬೇಕು ಹಾಗೂ ಸಮರ್ಪಕವಾಗಿ 371 ಜೆ ಕಲಂ ಜಾರಿಗೆ ಆಗ್ರಹಿಸಿ ನಗರದ ತಹಶೀಲ್ದಾರ್ ಕಚೇರಿ ಎದುರು ಧರಣಿ ನಡೆಸಲಾಯಿತು.
ನಮ್ಮ ಬೆಂಬಲ ಅಖಂಡ ಕರ್ನಾಟಕ್ಕಾಗಿ, ಪ್ರತ್ಯೇಕ ರಾಜ್ಯಕ್ಕೆ ಅಲ್ಲ: ಕರವೇ
ಹಾಗೆಯೇ ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಕರವೇ ಪ್ರತ್ಯೇಕ ರಾಜ್ಯದ ವಿರುದ್ಧ ಘೋಷಣೆ ಕೂಗುತ್ತ ನಗರದ ವಿವಿಧೆಡೆ ಮೆರವಣಿಗೆ ನಡೆಸಿತು. ಅಖಂಡ ಕರ್ನಾಟಕ ಉಳಿವಿಗಾಗಿ ಕನ್ನಡಪರ ಹೋರಾಟಗಾರರು ಆಗ್ರಹಿಸಿದರು.
ಕರವೇ ರಾಜ್ಯ ಸಂಚಾಲಕ ಬಸವರಾಜ ಪಡುಕೋಟೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಯಾವುದೇ ಕಾರಣಕ್ಕೂ ಪ್ರತ್ಯೇಕ ರಾಜ್ಯ ಬೇಡ:
ಚಿಕ್ಕಮಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬಂದ್ ವಿರೋಧಿಸಿ ಕರವೇ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಯಾವುದೇ ಕಾರಣಕ್ಕೂ ಪ್ರತ್ಯೇಕ ರಾಜ್ಯ ಬೇಡವೆಂದು ಘೋಷಣೆ ಕೂಗಲಾಯಿತು.
LIVE: ಉತ್ತರ ಕರ್ನಾಟಕ ಬಂದ್ ಕರೆ ವಾಪಸ್, ಸಾಂಕೇತಿಕ ಪ್ರತಿಭಟನೆ
ನಗರದ ಹನುಮಂತಪ್ಪ ವೃತ್ತದಿಂದ ಅಜಾದ್ ಪಾರ್ಕ್ ವರೆಗೆ ಭುವನೇಶ್ವರಿ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಕರವೇ ಕಾರ್ಯಕರ್ತರು ಹಾಗೂ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.