ಯಾರೂ ಜೆಡಿಎಸ್ ಬಿಡಲ್ಲ, ಬೇರೆಯವರೇ ನಮ್ಮಲ್ಲಿಗೆ ಬರ್ತಾರೆ: ಶರವಣ
ರಾಯಚೂರು, ಜನವರಿ 9: ಸಂಕ್ರಾಂತಿಯ ನಂತರ ಮುಂದಿನ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ವಿಧಾನಪರಿಷತ್ ಸದಸ್ಯ ಹಾಗೂ ರಾಯಚೂರು ಜಿಲ್ಲೆಯ ಜೆಡಿಎಸ್ ಜವಾಬ್ದಾರಿ ವಹಿಸಿರುವ ಟಿ.ಎ.ಶರವಣ ಮಂಗಳವಾರ ಹೇಳಿಕೆ ನೀಡಿದರು.
ಮತ್ತೆ ಆಪರೇಷನ್ ಕಮಲ : ಜೆಡಿಎಸ್, ಕಾಂಗ್ರೆಸ್ ನಾಯಕರು ಬಿಜೆಪಿಗೆ?
ಜೆಡಿಎಸ್ ನ ಹಾಲಿ ಶಾಸಕರಿಗೆ ಎಲ್ಲರಿಗೂ ಸ್ಪರ್ಧೆಗೆ ಪಕ್ಷದ ಟಿಕೆಟ್ ಖಚಿತ ಎಂದು ಹೇಳಿದ ಅವರು, ಪಕ್ಷದ ಯಾವುದೇ ಶಾಸಕರು ಜೆಡಿಎಸ್ ಬಿಡುವ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿಲ್ಲ ಎಂದರು. ಜೆಡಿಎಸ್ ಶಾಸಕರನ್ನು ಬಿಜೆಪಿಯು ತನ್ನೆಡೆಗೆ ಸೆಳೆದಿದೆ ಎಂಬ ಸುದ್ದಿಗೆ ಸಂಬಂಧಿಸಿದಂತೆ ಅವರು ಈ ಪ್ರತಿಕ್ರಿಯೆ ನೀಡಿದರು.
ಒಂದು ವೇಳೆ ಪಕ್ಷದ ಮುಖಂಡರಲ್ಲಿ ವೈಮನಸ್ಯ ಅಥವಾ ಅಸಮಾಧಾನ ಇದ್ದರೆ ಬಗೆಹರಿಸಲಾಗುವುದು. ಸಂಕ್ರಾಂತಿ ಹಬ್ಬದ ನಂತರ ಹೈದರಾಬಾದ್- ಕರ್ನಾಟಕ ಜಿಲ್ಲೆಗಳಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರವಾಸ ಕೈಗೊಳ್ಳಲಿದ್ದಾರೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಇನ್ನು ವಿವಿಧ ಪಕ್ಷಗಳ ಮುಖಂಡರು, ಈ ಹಿಂದೆ ಜನತಾ ಪಕ್ಷವಾಗಿದ್ದಾಗ ಜತೆಯಲ್ಲಿದ್ದವರು ಸಹ ಸಂಪರ್ಕದಲ್ಲಿದ್ದಾರೆ ಎಂದರು.