ರಾಯಚೂರು ಜಿಲ್ಲೆಗೆ ಸಿದ್ದರಾಮಯ್ಯ ಸರ್ಕಾರದ ಕೊಡುಗೆಗಳಾವುವು?
ರಾಯಚೂರು, ಡಿಸೆಂಬರ್ 15: ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನವಕರ್ನಾಟಕ ನಿರ್ಮಾಣ ಯಾತ್ರೆ ಇಂದು ರಾಯಚೂರು ತಲುಪಿದೆ. ರಾಯಚೂರು ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳನ್ನು ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ.
ಸಿದ್ದರಾಮಯ್ಯ ಅವರು ರಾಯಚೂರಿನ ಮಾನ್ವಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದು, ಬಹಿರಂಗ ಸಮಾವೇಶ ಉದ್ದೇಶಿಸಿ ಮಾತನಾಡಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರವು ರಾಯಚೂರು ಜಿಲ್ಲೆಯ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳ ಪಟ್ಟಿಯನ್ನು ಅಲ್ಲಿನ ಜನರ ಮುಂದಿಟ್ಟಿದ್ದಾರೆ.
ರಾಯಚೂರು ಜಿಲ್ಲೆ ಸಮಸ್ಯೆಗಳನ್ನು ನಿವಾರಿಸಿ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಹಲವು ಯೋಜನೆಗಳನ್ನು ಜಿಲ್ಲೆಗೆ ನೀಡಲಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.

ಹಾಗಿದ್ದರೆ ಕಾಂಗ್ರೆಸ್ ಸರ್ಕಾರ ರಾಯಚೂರು ಜಿಲ್ಲೆಗಳಿಗೆ ಕೊಟ್ಟಿರುವ ಕೊಡುಗೆಗಳು ಯಾವುದು ಇಲ್ಲಿದೆ ಪಟ್ಟಿ...
* ಇದುವರೆಗೆ 6576 ಕೃಷಿಹೊಂಡಗಳನ್ನು ರಾಯಚೂರು ಜಿಲ್ಲೆಯಲ್ಲಿ ನಿರ್ಮಿಸಲಾಗಿದೆ. ಒಟ್ಟು 148 ಶೆಡ್ ನೆಟ್ಗಳನ್ನು ನಿರ್ಮಾಣ ಮಾಡಲಾಗಿದೆ. ತಲಾ 75 ಲಕ್ಷ ರೂ. ವೆಚ್ಚದಲ್ಲಿ ಜಿಲ್ಲೆಯಲ್ಲಿ 11 ಕೃಷಿ ಯಂತ್ರೋಪಕರಣಗಳ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
* 2014 ರಿಂದ 2016 ರ ವರೆಗಿನ ಅವಧಿಯಲ್ಲಿ ಒಟ್ಟು 601.48 ಕೋಟಿ ರೂ.ವೆಚ್ಚದಲ್ಲಿ 484.89 ಕಿ.ಮೀ ಕಾಲುವೆಯ ಆಧುನೀಕರಣ ಮಾಡಿದ್ದು ಮೂಲಕ ಜಮೀನುಗಳಿಗೆ ತ್ವರಿತವಾಗಿ ನೀರನ್ನು ಹರಿಸಲು ಇದರಿಂದ ಸಾಧ್ಯವಾಗಿದೆ.
* ಕಂದಾಯ ಇಲಾಖೆಯ ಅಕ್ರಮ ಸಕ್ರಮ ಯೋಜನೆಯಡಿ ಸರಕಾರಿ ಜಮೀನುಗಳಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವ ನಿವೇಶನದ ನಿವಾಸಿಗಳನ್ನು ಗುರುತಿಸಿ ಅವರಿಂದ ದಂಡಶುಲ್ಕ ಭರಿಸಿಕೊಂಡು ಅವರ ಹೆಸರಿಗೆ ಪಟ್ಟಾ ವಿತರಿಸಲಾಗಿದೆ.
* ರಾಯಚೂರು ಜಿಲ್ಲೆಯಲ್ಲಿ 70,892 ರೈತರ 27,646.08 ಲಕ್ಷ ರೂಪಾಯಿಗಳ ಬೆಳೆಸಾಲ ಮನ್ನಾ ಮಾಡಲಾಗಿದೆ. ಇವರಲ್ಲಿ 7920 ಎಸ್ಸಿ, 11570 ಎಸ್ಟಿ ಹಾಗೂ 51402 ಸಾಮಾನ್ಯ ವರ್ಗದ ರೈತರಾಗಿದ್ದಾರೆ.

* ರಾಜ್ಯ ಸರಕಾರದ ರೈತ ಸಂಜೀವಿನಿ ಯೋಜನೆಯಡಿ 2013-14ನೇ ಸಾಲಿನಿಂದ 2016-17ನೇ ಸಾಲಿನವರೆಗೆ ರಾಯಚೂರಿನ 18 ಜನ ರೈತರಿಗೆ 10.90 ಲಕ್ಷ ರೂ. ಪರಿಹಾರ ಧನದ ರೂಪದಲ್ಲಿ ವಿತರಣೆ ಮಾಡಲಾಗಿದೆ.
* ಅನ್ನಭಾಗ್ಯ ಯೋಜನೆ ಅಡಿಯಲ್ಲಿ 3,10,443 ಬಿಪಿಎಲ್ ಕುಟುಂಬಗಳಿಗೆ ಪ್ರತಿಯೊಬ್ಬ ಸದಸ್ಯರಿಗೆ 7ಕೆಜಿ ಯಂತೆ ಅಕ್ಕಿ ವಿತರಿಸಲಾಗುತ್ತಿದೆ.
* 8952 ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆಯಡಿ ಜಿಲ್ಲೆಯಲ್ಲಿ ರೂ.1500 ರಂತೆ ಒಟ್ಟು 13.87 ಕೋಟಿ ರೂ. ನೆರವು ನೀಡಲಾಗಿದೆ.
* 64 ಮೈತ್ರಿ ಮತ್ತು 1161 ಮನಸ್ವೀನಿ ಫಲಾನುಭವಿಗಳಿಗೆ ಮಾಸಾಶನ ನೀಡಲಾಗುತ್ತಿದೆ ಮತ್ತು 1723 ಸರಕಾರಿ ಹಾಗೂ ಅನುದಾನಿತ ಶಾಲೆಗಳ 21,99,792 ಮಕ್ಕಳಿಗೆ ಕ್ಷೀರಭಾಗ್ಯ ಹಾಲು ನೀಡಲಾಗುತ್ತಿದೆ.
* ರಾಯಚೂರು ನಗರದಲ್ಲಿ ಎಸ್ಪಿ ಕಚೇರಿಯಿಂದ ಆರ್.ಟಿ.ಒ ಕಚೇರಿವರೆಗೆ 40 ಕೋಟಿ ರೂ.ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
* ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯಿಂದ 1720 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ನೀಡಲು ಮಾಡಸಿರವಾರ ಗ್ರಾಪಂ ವ್ಯಾಪ್ತಿಯಲ್ಲಿನ ಉದ್ಬಾಳ, ಗೋಮರ್ಸಿ ಗ್ರಾಮದಲ್ಲಿ 4 ಕೋಟಿ ರೂಪಾಯಿ ವೆಚ್ಚದಲ್ಲಿ ಏತನೀರಾವರಿ ಯೋಜನೆಯನ್ನು ರೂಪಿಸಲಾಗಿದೆ.
* ಸಿಂಧನೂರು ನಗರದಲ್ಲಿ 15 ಕೋಟಿ ರೂ.ವೆಚ್ಚದಲ್ಲಿ ದಿನದ 24 ಗಂಟೆಯೂ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದು ಅಲ್ಲಿ ಒಳಚರಂಡಿ ಮತ್ತು ಸಿಸಿ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
* 11.50 ಕೋಟಿ ರೂ. ವೆಚ್ಚದಲ್ಲಿ ರಾಯಚೂರು ಜಿಲ್ಲಾ ಹೊಸ ಕ್ರೀಡಾಂಗಣದ ಕಾಮಗಾರಿ ಪ್ರಗತಿಯಲ್ಲಿದೆ. 2.50ಕೋಟಿ ರೂ.ವೆಚ್ಚದಲ್ಲಿ ರಾಮಪುರ ಕೆರೆ ಆಧುನಿಕರಣ ಕಾಮಗಾರಿ ಪ್ರಗತಿಯಲ್ಲಿ, 5.35ಕೋಟಿ ವೆಚ್ಚದ ಅಂಬೇಡ್ಕರ್ ಮತ್ತು ಬಾಬುಜಗಜೀವನರಾಂ ಭವನ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.












Click it and Unblock the Notifications