ರಾಯಚೂರು; ಗಿಲ್ಲೇಸೂಗೂರು 3 ಪಕ್ಷಗಳ ಕೇಂದ್ರ ಬಿಂದು, ಏಕೆ?
ರಾಯಚೂರು, ಅಕ್ಟೋಬರ್, 09: ಮುಂದಿನ ವರ್ಷದ ಚುನಾವಣೆಗೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು ಈಗಿನಿಂದಲೇ ತಮ್ಮ ರಾಜಕೀಯ ಚಟುವಟಿಕೆಯನ್ನು ತೀವ್ರಗೊಳಿಸಿವೆ. ರಾಯಚೂರು ಜಿಲ್ಲೆಯ ಗಿಲ್ಲೇಸೂಗೂರು ಗ್ರಾಮ ಇದೀಗ ಮೂರು ಪಕ್ಷಗಳ ಬೃಹತ್ ಸಮಾವೇಶ ಕೇಂದ್ರವಾಗಿರುವುದು ಗಮನಾರ್ಹವಾಗಿದೆ.
ಗಾಣದಾಳ ಶ್ರೀ ಪಂಚಮುಖಿ ಸನ್ನಿಧಾನ ಹಾಗೂ ನಡೆದಾಡುವ ದೇವರೆಂದೇ ಕರೆಯುವ ಶ್ರೀ ರಾಘವೇಂದ್ರ ಸ್ವಾಮಿಗಳ ತಪಸ್ಸು ಕೇಂದ್ರವಾದ ಗಿಲ್ಲೇಸೂಗೂರು ಹೋಬಳಿ ವ್ಯಾಪ್ತಿಯಲ್ಲಿ ರಾಜಕೀಯ ಗರಿಗೆದರಿದೆ. ಸೆಪ್ಟೆಂಬರ್ 30ರಂದು ಜೆಡಿಎಸ್ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಸಮಾವೇಶವನ್ನು ಗಿಲ್ಲೇಸೂಗೂರಿನಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಆಗಮಿಸಬೇಕಾಗಿತ್ತು. ಆದರೆ ಹವಾಮಾನ ವೈಫರಿತ್ಯದಿಂದ ಕಾರ್ಯಕ್ರಮ ರದ್ದಾಯಿತು. ಆದರೂ ಕಾರ್ಯಕ್ರಮವನ್ನು ಮಳೆಯಲ್ಲಿಯೇ ಅದ್ಧೂರಿಯಾಗಿ ನಡೆಸುವ ಮೂಲಕ ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಚುನಾವಣಾ ಪೂರ್ವ ಸಮಾವೇಶಕ್ಕೆ ಚಾಲನೆ ನೀಡಲಾಯಿತು.

ಅ.11ರಂದು ಬಿಜೆಪಿ ಜನ ಸಂಕಲ್ಪ ಯಾತ್ರೆ; ಭಾರತೀಯ ಜನತಾ ಪಕ್ಷದ ಪ್ರತಿಷ್ಠಿತ ಮತ್ತು ರಾಜಕೀಯವಾಗಿ ಅತ್ಯಂತ ಪ್ರಾಮುಖ್ಯತೆ ಹೊಂದಿದ ಜನ ಸಂಕಲ್ಪ ಯಾತ್ರೆ ಅಕ್ಟೋಬರ್ 11ರಂದು ಗಿಲ್ಲೇಸೂಗೂರಿನಲ್ಲಿ ಆಯೋಜಿಸಲು ಸಿದ್ಧತೆ ನಡೆದಿದೆ. ಸಮಾವೇಶಕ್ಕೆ ರಾಷ್ಟ್ರೀಯ ಸಂಸದೀಯ ಮಂಡಳಿಯ ಸದಸ್ಯ ಬಿ. ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದ್ದಾರೆ.
ಯಡಿಯೂರಪ್ಪ ಅವರ ನೇತೃತ್ವದಲ್ಲಿ100 ಕ್ಷೇತ್ರಗಳಲ್ಲಿ ಜನ ಸಂಕಲ್ಪ ಯಾತ್ರೆ ನಡೆಯಲಿದ್ದು, ಈ ಸಂಕಲ್ಪ ಯಾತ್ರೆ ಉದ್ಘಾಟನೆಯನ್ನು ಗಿಲ್ಲೇಸೂಗೂರಿನಲ್ಲಿ ಮಾಡಲಾಗುತ್ತದೆ. ಆಡಳಿತರೂಢ ಬಿಜೆಪಿ ಪಕ್ಷದ ಜನ ಸಂಕಲ್ಪ ಯಾತ್ರೆ ಗಿಲ್ಲೇಸೂಗೂರಿನಿಂದಲೇ ಉದ್ಘಾಟನೆ ಆಗಲಿದ್ದು, ಗಿಲ್ಲೇಸೂಗೂರು ಗ್ರಾಮಕ್ಕೆ ಭಾರೀ ಮಹತ್ವ ಬರುವಂತೆ ಮಾಡಿದೆ.
ಅ. 22ಕ್ಕೆ ಭಾರತ್ ಜೋಡೋ ಜಿಲ್ಲೆಗೆ ಪ್ರವೇಶ; ಇನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಮಂತ್ರಾಲಯ ನಂತರ ಅಕ್ಟೋಬರ್ 22ಕ್ಕೆ ಜಿಲ್ಲೆಯನ್ನು ಪ್ರವೇಶ ಮಾಡಲಿದ್ದು, ಗಿಲ್ಲೇಸೂಗೂರಿನಿಂದ ಯಾತ್ರೆಯನ್ನು ಆರಂಭ ಮಾಡಲಿದೆ. ಗಿಲ್ಲೇಸೂಗೂರಿನಲ್ಲಿ ಅದ್ಧೂರಿಯಾಗಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಪಾದಯಾತ್ರೆಯನ್ನು ಸ್ವಾಗತಿಸಲಾಗುತ್ತದೆ. ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಒಂದು ಪ್ರಾದೇಶಿಕ ಪಕ್ಷ ಹೀಗೆ ಮೂರು ರಾಜಕೀಯ ಕಾರ್ಯಕ್ರಮಗಳು ಗಿಲ್ಲೇಸೂಗೂರಿನಲ್ಲಿ ಆಯೋಜಿಸುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ರಾಜಕೀಯವಾಗಿ ಭಾರೀ ಪ್ರತಿಷ್ಠಿತ ಕೇಂದ್ರವಾಗಿದೆ.

ಸಂಖ್ಯೆ 11ರ ಹಿಂದಿನ ರಾಜಕೀಯ ಉದ್ದೇಶ ಏನು?; ಬಿಜೆಪಿಯ ಕಾರ್ಯಕ್ರಮದ 11 ದಿನಗಳ ನಂತರ ಅಕ್ಟೋಬರ್ 22ಕ್ಕೆ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಸಮಾವೇಶ ನಡೆಸಲಾಗುತ್ತಿದೆ. ಸಂಖ್ಯಾಶಾಸ್ತ್ರದಲ್ಲಿ 11 ಅತ್ಯಂತ ಮಹತ್ವದ ಬೆಸ ಸಂಖ್ಯೆ ಆಗಿದೆ. 9 ಮತ್ತು 11 ಸಂಖ್ಯೆಗಳನ್ನು ಅದೃಷ್ಟ ಸಂಖ್ಯೆ ಎಂದು ಭಾವಿಸಲಾಗುತ್ತದೆ.
ಪಕ್ಷಗಳ ಕಾರ್ಯಕ್ರಮಗಳ ನಂತರ ಮತ್ತೊಂದು ಪಕ್ಷದ ಕಾರ್ಯಕ್ರಮ ನಿರ್ವಹಣೆಗೆ 11 ದಿನಗಳನ್ನೇ ಆಯ್ಕೆ ಮಾಡಿಕೊಂಡಿರುವುದು ಗಮನಾರ್ಹ ಸಂಗತಿ ಆಗಿದೆ. ಇದೆಲ್ಲ ಕಾಕತಾಳಿಯೋ ಅಥವಾ ಪೂರ್ವ ಸಿದ್ಧತೆಯೋ? ಎನ್ನುವ ಲೆಕ್ಕಚಾರ ಜನರಲ್ಲಿ ಕಾಡುತ್ತಿದೆ. ಮುಂಬರುವ ಚುನಾವಣೆಯಲ್ಲಿ ಯಾವ ರೀತಿಯ ಅದೃಷ್ಟ ತಂದುಕೊಡಲಿದೆ ಎನ್ನುವುದು ಕಾದು ನೋಡಬೇಕಾಗಿದೆ. ಆದರೆ ಪ್ರಸ್ತುತ ಈ ಕಾರ್ಯಕ್ರಮ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳ ತೀವ್ರತೆಗೆ ಮತ್ತು ಚುನಾವಣಾ ಬಿರುಸಿಗೆ ಪ್ರಮುಖ ವೇದಿಕೆ ಎನ್ನುವಂತೆ ಕಾಣುತ್ತಿದೆ.












Click it and Unblock the Notifications