ನೆನಗುದಿಗೆ ಬಿದ್ದ ಕಾಮಗಾರಿ, ಸಿಎಂ ಆದ್ಮೇಲೆ ರಾಯಚೂರು ಮರೆತ ಬೊಮ್ಮಾಯಿ
ರಾಯಚೂರು, ಜುಲೈ 6: ರಾಜ್ಯದ 23ನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ಅವರು 11 ತಿಂಗಳು ಕಳೆದರೂ ರಾಯಚೂರು ಜಿಲ್ಲೆಗೆ ಭೇಟಿ ನೀಡದ ಹಿನ್ನೆಲೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಮೋಕ್ಷವಿಲ್ಲದಂತಾಗಿದೆ.
ಅಧಿಕಾರ ವಹಿಸಿಕೊಂಡ ನಂತರ ಮುಖ್ಯಮಂತ್ರಿಗಳು, ಇತ್ತೀಚಿಗೆ ಪಕ್ಕದ ಯಾದಗಿರಿ ಜಿಲ್ಲೆಗೆ ಭೇಟಿ ನೀಡಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಹೋಗಿದ್ದಾರೆ. ಅಕ್ಕಪಕ್ಕದ ಜಿಲ್ಲೆಗಳಿಗೆಲ್ಲ ಭೇಟಿ ನೀಡಿ ಹೋಗಿರುವ ಮುಖ್ಯಮಂತ್ರಿ , ಜಿಲ್ಲೆಗೆ ಮಾತ್ರ ಭೇಟಿ ನೀಡದಿರುವುದು ವಿಪರ್ಯಾಸವಾಗಿದೆ. ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ತೊಲಗಿಸಲು ಜಿಲ್ಲಾಡಳಿತ ಹಲವು ಯೋಜನೆ ರೂಪಿಸಿಕೊಂಡಿದ್ದು , ಮುಖ್ಯಮಂತ್ರಿ ಭೇಟಿ ನೀಡದ ಪರಿಣಾಮ ಜಿಲ್ಲೆಯ ಅಭಿವೃದ್ಧಿ ವೇಗ ಸಿಗದ ಪರಿಣಾಮ ಜನರು ನಿರಾಶೆಗೊಂಡಿದ್ದಾರೆ. ಆದರೆ ಜಿಲ್ಲೆಗೆ ಮಾತ್ರ ಭೇಟಿ ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆಯೇ ಎಂದು ಜಿಲ್ಲೆಯ ಜನರಿಂದ ಅಸಮಾಧಾನದ ಮಾತುಗಳು ಕೇಳಿ ಬರುತ್ತಿವೆ.
ರಾಯಚೂರು ರಾಜಕಾರಣ: ವಾಟ್ಸಪ್ ಸ್ಟೇಟಸ್ಗಳಲ್ಲಿ ಸದ್ದು ಮಾಡುತ್ತಿದೆ ಈ ಪೋಸ್ಟ್
ಮುಖ್ಯಮಂತ್ರಿ ಮೊದಲನೇ ಬಾರಿಗೆ ಜಿಲ್ಲೆಗೆ ಏಪ್ರಿಲ್ 26 ರಂದು ಭೇಟಿ ನೀಡಲಿದ್ದಾರೆ ಎಂಬ ಸುದ್ದಿ ಜಿಲ್ಲೆಯಾದ್ಯಂತ ಹರದಾಡಿತ್ತು. ಹೀಗಾಗಿ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಹೊಸ ಕಾಮಗಾರಿಗಳಿಗೆ ಚಾಲನೆ ನೀಡಲು ಸಿದ್ಧತೆ ಕೈಗೊಳ್ಳಲಾಗಿತ್ತು. ಅಲ್ಲದೆ ಪೂರ್ಣಗೊಂಡ ಕಾಮಗಾರಿಗಳನ್ನು ಲೋಕಾರ್ಪಣೆಗೊಳಿಸಲು ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಕೈಗೊಂಡಿತ್ತು. ಆದರೆ ಮುಖ್ಯಮಂತ್ರಿಗಳು ಬಾರದ ಕಾರಣ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ.
ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಬಜೆಟ್ನಲ್ಲಿ ವಿಮಾನ ನಿಲ್ದಾಣ ಮಂಜೂರು ಮಾಡಿದ್ದರು. ಆದರೆ ಮಂಜೂರು ಮಾಡಿದ ವಿಮಾನ ನಿಲ್ದಾಣದ ನಿರ್ಮಾಣಕ್ಕೆ ಭೂಮಿ ಪೂಜೆ, ನವಲಿ ಜಲಾಶಯದ ನಿರ್ಮಾಣಕ್ಕೆ ಚಾಲನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನಿರ್ಮಿಸಿಸುವ ಅಂಗಡಿ ಕೇಂದ್ರಗಳು ಪೂರ್ಣಗೊಂಡಿದ್ದು ಲೋಕಾರ್ಪಣೆಗೆ ಮುಖ್ಯಮಂತ್ರಿಗಳು ಬರುವ ನಿರೀಕ್ಷೆಯಲ್ಲಿದ್ದಾರೆ.
ಬಿಜೆಪಿ ಶಾಸಕರ ವೈಮನಸ್ಸು ಸಿಎಂಗೆ ತಡೆಯಾಗಿದಿಯಾ?
ಜಿಲ್ಲೆಯಾದ್ಯಾಂತ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಮೋಕ್ಷ ಸಿಗಬೇಕಾಗಿದೆ. ಜಿಲ್ಲೆಯಲ್ಲಿಇರುವ ಇಬ್ಬರು ಬಿಜೆಪಿ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಒಂದಷ್ಟು ಖಾತೆಗಳು ಹಂಚಿಕೆಯಾಗದೆ ಮುಖ್ಯಮಂತ್ರಿ ಬಳಿ ಉಳಿದಿದ್ದು ಸಂಪುಟ ಪುನಾರಚನೆ ಮಾತುಗಳು ಕೇಳಿ ಬಂದಾಗಲೆಲ್ಲ ಜಿಲ್ಲೆಯ ಹೆಸರು ಕೇಳಿ ಬರುತ್ತದೆ. ಅಲ್ಲದೆ ಬಿಜೆಪಿ ಶಾಸಕರಾದ ಡಾ.ಶಿವರಾಜ ಪಾಟೀಲ್ ಹಾಗೂ ಕೆ.ಶಿವನಗೌಡ ನಾಯಕ ನಡುವಿನ ವೈಮನಸ್ಸು, ಮುಖ್ಯಮಂತ್ರಿ ಅವರನ್ನು ಜಿಲ್ಲೆಗೆ ಬರದಂತೆ ತಡೆದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಚುನಾವಣೆ ಸಮೀಪಿಸುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಮ್ಮ ಕ್ಷೇತ್ರಕ್ಕೆ ಬರಬೇಕು ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ, ಡಿಕೆ ಶಿವಕುಮಾರ್ ಕುಟುಂಬ ರಾಜಕಾರಣ ಮಾಡುತ್ತಿಲ್ಲವೇ? ಪ್ರಜ್ವಲ್ ರೇವಣ್ಣ
ಎಚ್ಡಿಕೆ,ಬಿಎಸ್ಐ ಸಿದ್ಧರಾಮಯ್ಯ ಭೇಟಿ
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿ ಸಿದ್ಧರಾಮಯ್ಯ ನಂತರ ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಎಚ್.ಡಿ.ಕುಮಾರಸ್ವಾಮಿ ಜಿಲ್ಲೆಗೆ ಭೇಟಿ ನೀಡಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಿದ್ದರು. ನಂತರ ಬಿ.ಎಸ್.ಯಡಿಯೂರಪ್ಪ ಸಿಎಂ ಆದ ನಂತರ ಜಿಲ್ಲೆಗೆ ಭೇಟಿ ನೀಡಿದ್ದರು. ಮಾಜಿ ಸಿಎಂ ಕುಮಾರಸ್ವಾಮಿ ಅವರು ಜಿಲ್ಲೆಯಲ್ಲೇ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು. ಬಿಎಸ್ವೈ ಅವರು ಮಸ್ಕಿ ಉಪ ಚುನಾವಣೆ ವೇಳೆಯಲ್ಲಿ ನಾಲ್ಕು ದಿನ ಠಿಕಾಣಿ ಹೂಡಿದ್ದನ್ನು ಮರೆಯುವಂತಿಲ್ಲ.
ಚುನಾವಣಾ ಪ್ರಚಾರಕ್ಕೆ ಬರ್ತಾರಾ?
ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು 11 ತಿಂಗಳು ಕಳೆದರೂ ರಾಯಚೂರು ಜಿಲ್ಲೆಗೆ ಏಕೆ ಭೇಟಿ ನೀಡಿಲ್ಲ ಎಂಬ ಪ್ರಶ್ನೆ ಜಿಲ್ಲೆಯ ಜನರಲ್ಲಿ ಕಾಡುತ್ತಿದೆ. ಮುಂದಿನ ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ತೆರೆಮರೆಯಲ್ಲಿ ಸಿದ್ಧತೆಗಳು ನಡೆಯುತ್ತಿವೆ. ಕೆಲವು ನಾಯಕರು ಬಿಜೆಪಿ ವರಿಷ್ಠರು ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಹಲವು ಲೆಕ್ಕಾಚಾರ ಮಾಡುತ್ತಿದ್ದು , ದಿನಕ್ಕೊಂದು ಬೆಳವಣಿಗೆಗೆ ಕಾರಣವಾಗುತ್ತಿದ್ದಾರೆ. ಇಷ್ಟೆಲ್ಲ ಗೊಂದಲಗಳ ನಡುವೆ ಮುಖ್ಯಮಂತ್ರಿ ಜಿಲ್ಲೆಗೆ ಬರುತ್ತಾರೆಯೇ? ಇಲ್ಲವೇ ಮುಂಬರುವ ಚುನಾವಣೆ ಪ್ರಚಾರಕ್ಕೆ ಬರುತ್ತಾರೆ ಎಂಬುದು ಜಿಲ್ಲೆಯ ಜನರ ಪ್ರಶ್ನೆಗಳಾಗಿ ಉಳಿದಿವೆ.
ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ
''ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗುತ್ತಿದ್ದು, ಕಲುಷಿತ ನೀರು ಕುಡಿದು 8 ಜನರು ಮೃತಪಟ್ಟರೂ ಜಿಲ್ಲೆಗೆ ಸಿಎಂ ಭೇಟಿ ನೀಡದಿರುವುದು ವಿಪರ್ಯಾಸವಾಗಿದೆ. ಜಿಲ್ಲೆಯ ಜನರು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರ ಮೇಲೆ ಇಟ್ಟಿರುವ ಭರವಸೆ ಸಂಪೂರ್ಣ ನಿರಾಶದಾಯಕವಾಗಿದ್ದು, ಕೂಡಲೆ ಜಿಲ್ಲೆಗೆ ಪ್ರವಾಸ ಕೈಗೊಂಡು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡದಿದ್ದರೆ ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯ ಜನರು ತಕ್ಕಪಾಠ ಕಲಿಸಲಿದ್ದಾರೆ'' ಎಂದು ರಾಯಚೂರು ಗ್ರಾಮೀಣ ಕ್ಷೇತ್ರದ ಸಾರ್ವಜನಿಕರಾದ ಚನ್ನಬಸವ, ಶಂಕರ ಆರೋಪಿಸಿದರು.
Recommended Video