ಟಿಪ್ಪು ಜಯಂತಿ ಬದಲು ಕಲಾಂ ಜಯಂತಿ ಆಚರಿಸಿ: ಶ್ರೀರಾಮುಲು
ರಾಯಚೂರು, ನವೆಂಬರ್ 01: ವಿವಾದಿತ ನಾಯಕ ಟಿಪ್ಪು ಸುಲ್ತಾನ್ ನ ಜಯಂತಿ ಆಚರಿಸಿ, ಹಿಂದುಗಳ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಬದಲು ಮಹಾನ್ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರ ಜಯಂತಿ ಆಚರಿಸಿ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು.
ರಾಯಚೂರಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಿದ ನಂತರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ಟಿಪ್ಪು ಸುಲ್ತಾನನ್ನು ಪಠ್ಯದಿಂದ ಕೈಬಿಡುವ ವಿಷಯದ ಬಗ್ಗೆ ಮಾತನಾಡಿದರು.
ಪಠ್ಯ ಪುಸ್ತಕದಲ್ಲಿ ಟಿಪ್ಪು ಅಧ್ಯಾಯಕ್ಕೆ ಕತ್ತರಿ; ಏನಿದು ವಿವಾದ?
ಸದ್ಯಕ್ಕೆ ಟಿಪ್ಪು ಸುಲ್ತಾನನ ಜಯಂತಿ ಆಚರಣೆಯನ್ನು ಮಾತ್ರ ಕೈಬಿಡಲಾಗಿದೆ. ಆದರೆ ಟಿಪ್ಪು ಸುಲ್ತಾನನ ಕುರಿತ ಪಾಠಗಳನ್ನು ಕೈಬಿಡುವ ಕುರಿತಂತೆ ಇನ್ನೂ ಸರ್ಕಾರ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಈ ಕುರಿತು ಸಮಿತಿಯೊಂದನ್ನು ರಚಿಸಲಾಗಿದ್ದು, ಸಮಿತಿ ವರದಿಯನ್ನು ಆಧರಿಸಿ ನಿರ್ಧಾರ ಕೈಗೊಳ್ಳುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು ಎಂದು ಶ್ರಿರಾಮುಲು ಹೇಳಿದರು.
ಟಿಪ್ಪು ಸುಲ್ತಾನನಿಗೆ ಸಂಬಂದಧಿಸಿದ ಪಾಠಗಳನ್ನು ಪಠ್ಯದಿಂದ ಕೈಬಿಡುವ ಬಗ್ಗೆ ಕರ್ನಾಟಕ ಸರ್ಕಾರ ಚಿಂತನೆ ನಡೆಸುತ್ತಿದ್ದು, ಈ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿದೆ.