ರಾಯಚೂರು ಸಾಹಿತ್ಯ ಸಮ್ಮೇಳನದಲ್ಲಿ ಹೆಗಡೆ ವಿರುದ್ಧ ಸಾಹಿತಿ ಧ್ವನಿ
ರಾಯಚೂರು, ಜನವರಿ 19 : ಸಾಹಿತ್ಯ ಬರೆಯುವವರಿಗೆ ಬೇರೆ ಕೆಲಸ ಇಲ್ಲವೆ? ಸೈಟ್, ಸನ್ಮಾನ, ಹಾರ ಹಾಕಿಸಿಕೊಳ್ಳಲು ಸಾಹಿತ್ಯ ಬರೆಯುತ್ತಿದ್ದಾರಾ? ಪ್ರಪಂಚದಲ್ಲಿ ಏನೂ ಕೆಲಸ ಇಲ್ಲದವರು ಸಾಹಿತ್ಯ ಬರೆಯುತ್ತಾರಾ? ಎಂದು ಪ್ರಶ್ನಿಸುವ ಮೂಲಕ ಸಾಹಿತಿ ಡಾ.ಎಲ್.ಹನುಮಂತಯ್ಯ ಅವರು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಶುಕ್ರವಾರ ಇಲ್ಲಿ ವಾಗ್ದಾಳಿ ನಡೆಸಿದರು.
ಮಾನ್ವಿ ತಾಲೂಕಿನ ಪೋತ್ನಾಳದಲ್ಲಿ ರಾಯಚೂರು ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಸಾಹಿತಿಗಳ ಮೇಲೆ ನಡೆಯುತ್ತಿರುವ ಇಂಥ ದಾಳಿ ಮುಕ್ತ ಸಮಾಜದಲ್ಲಿ ನಡೆಯಲು ಸಾಧ್ಯವಿಲ್ಲ. ಆರೋಗ್ಯಪೂರ್ಣ ಸಮಾಜದಲ್ಲಿ ನಡೆಯಲು ಸಾಧ್ಯವಿಲ್ಲ ಎಂದರು.
ಸಮಾಜವು ಫ್ಯಾಸಿಸ್ಟ್ ವ್ಯವಸ್ಥೆ ಕಡೆಗೆ ಸಾಗುತ್ತಿರುವಾಗ ಇಂಥ ದಾಳಿಗಳು ಆಗಲು ಸಾಧ್ಯ. ಅಂಥ ಪರಿಸ್ಥಿತಿಯತ್ತ ಕನ್ನಡನಾಡು ಹೆಜ್ಜೆ ಹಾಕುತ್ತಿದೆಯೇ ಎಂಬ ಆತಂಕವಿದೆ. ಕನ್ನಡ ಸಾಹಿತ್ಯ-ಸಂಸ್ಕೃತಿಯ ಅಭಿಮಾನ ಇಲ್ಲದವರು ಮಾತ್ರ ಸೈಟಿನ ಸಲುವಾಗಿ ಸಾಹಿತ್ಯ ಬರೆಯುತ್ತಾರೆ ಎಂಬ ಮಾತನಾಡಲು ಸಾಧ್ಯ ಎಂದು ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ತನ್ನ ಇಷ್ಟ, ಸುಖ, ಸಂತೋಷಕ್ಕೆ ಬರೆಯುವುದು ಸಾಹಿತ್ಯವಲ್ಲ. ಸಮಾಜದ ಪ್ರತಿಬಿಂಬ, ಮನುಷ್ಯನ ಜೀವನದ ಕೈಗನ್ನಡಿ ಸಾಹಿತ್ಯ. ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಸಹ ಇಂಥ ಮಾತನಾಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಮ್ಮೇಳನಾಧ್ಯಕ್ಷ ಡಾ.ರಾಜಶೇಖರ ನೀರಮಾನ್ವಿ, ಲೇಖಕಿ ಡಾ.ಎಂ.ಎಸ್.ಆಶಾದೇವಿ, ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜು, ಶಾಸಕ ಹಂಪಯ್ಯ ನಾಯಕ ಮತ್ತಿತರರು ಭಾಗಿಯಾಗಿದ್ದರು.












Click it and Unblock the Notifications