ಆಂಧ್ರದ ಆದೋನಿ, ಕೋಸಗಿ ಕೂಲಿ ಕಾರ್ಮಿಕರ ಉಚಿತ ಪ್ರಯಾಣ; ರೈಲ್ವೆಗೆ ನಷ್ಟದ ಭೀತಿ
ರಾಯಚೂರು ಫೆಬ್ರವರಿ 26: ಆಂಧ್ರದ ಕೋಸಗಿ ಹಾಗೂ ಆದೋನಿ ಮೂಲಕ ಜಿಲ್ಲೆಗೆ ಆಗಮಿಸುತ್ತಿರುವ ಕೂಲಿ ಕಾರ್ಮಿಕರು ರೈಲಿನಲ್ಲಿ ಟಿಕೆಟ್ಯಿಲ್ಲದೆ ಪ್ರಯಾಣಿಸುತ್ತಿದ್ದು ಕಡಿವಾಣ ಹಾಕದ್ದರಿಂದ ರೈಲ್ವೆ ಇಲಾಖೆಗೆ ಭಾರಿ ನಷ್ಟವಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಆಂಧ್ರ ಪ್ರದೇಶದ ಕೋಸಗಿ, ಅದೋನಿ, ತುಂಗಭದ್ರಾ ಪ್ರದೇಶದ ಭಾಗದಲ್ಲಿ ಕಿತ್ತು ತಿನ್ನುವ ಬಡತನ ಇದೆ. ಇನ್ನೊಂದೆಡೆ ಬರಗಾಲದಿಂದ ರೈತರು, ಕೂಲಿ ಕಾರ್ಮಿಕರು ಹೆಚ್ಚಿನ ಕೂಲಿ ದೊರೆಯುವ ಆಸೆಗಾಗಿ ಬೆಳಗ್ಗೆ ನಿತ್ಯವೂ ಸಾವಿರಾರು ಕೂಲಿ ಕಾರ್ಮಿಕರು ನಾಂದೇಡ್ ಎಕ್ಸ್ಪ್ರಸ್ ರೈಲು ಮೂಲಕ ರಾಯಚೂರು ಜಿಲ್ಲಾಕೇಂದ್ರಕ್ಕೆ ಬರುತ್ತಿರುವುದು ಗೋಚರಿಸಿದೆ.

ದಿನವೆಲ್ಲ ನಗರ ಮತ್ತಿತರೆಡೆ ಸಂಜೆಯವರೆಗೆ ಕೆಲಸ 6 ಗಂಟೆಗೆ ಹಿಂತಿರುಗುವುದು ಸಾಮಾನ್ಯವಾಗಿದೆ. ಆಂಧ್ರದಿಂದ ಬರುವ ಕೂಲಿಕಾರ್ಮಿಕರು ಟಿಕೆಟ್ ಪಡೆಯದೆ ಪ್ರಯಾಣ ಮಾಡುತ್ತಿರುವುದು ಕಾನೂನು ಬಾಹಿರವಾದರೂ ಹಣ ಉಳಿಸಲು ಟಿಕೆಟ್ ಪಡೆಯುತ್ತಿಲ್ಲ.
ಕೋಸಗಿಯಿಂದ ರೈಲ್ವೆ ಪ್ರಯಾಣಕ್ಕೆ ಕೇವಲ 20 ರೂ.ಇದ್ದರೂ ಕೂಲಿ ಕಾರ್ಮಿಕರು ಮಾತ್ರ ಟಿಕೆಟ್ ಪಡೆಯದೆ ಸಂಚಾರ ಮಾಡಿದರೂ ರೈಲ್ವೆ ಇಲಾಖೆ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ ಎನ್ನಲಾಗಿದೆ. ಕೂಲಿ ಕಾರ್ಮಿಕರಿಗೆ ಸರಕಾರದಿಂದ ಕಾರ್ಮಿಕ ಪಾಸ್ ಇದ್ದರೂ ಜಿಲ್ಲೆಯಲ್ಲಿ ಅನ್ವಯವಾಗುತ್ತಿಲ್ಲ. ಒಂದು ತಿಂಗಳ ಪಾಸ್ಗೆ ಸರಕಾರದಿಂದ 180 ರೂ.ಇದೆ.
ಆದರೆ ಯಾರೂ ಪಾಸ್ ಪಡೆಯದೇ ಸಂಚರಿಸುತ್ತಿರುವುದು ಬಯಲಾಗಿದೆ. ಟಿಕೆಟ್ ಇಲ್ಲದೆ ಪ್ರಯಾಣ ಮಾಡುವ ಕೂಲಿ ಕಾರ್ಮಿಕರು ನಿಲ್ದಾಣ ಬರುತ್ತಿದ್ದಂತೆ ಚಲಿಸುವ ರೈಲುನಿಂದ ಇಳಿಯುವ ಸಾಹಸ ಮಾಡಿ ಪ್ರಾಣಕ್ಕೆ ಕುತ್ತು ತಂದುಕೊಂಡಿರುವ ಉದಾಹರಣೆಗಳು ಇವೆ.ನಿರಂತರ ದುರ್ಘಟನೆಗಳು ನಡೆದರೂ ರೈಲ್ವೆ ಇಲಾಖೆಯ ಮೇಲಧಿಕಾರಿಗಳು ತಲೆ ಕೆಡಿಸಿಕೊಂಡಿಲ್ಲ.
ಟಿಕೆಟ್ ಇಲ್ಲದೆ ಆಂಧ್ರದಿಂದ ಜಿಲ್ಲೆಗೆ ಬರುವ ಕೂಲಿ ಕಾರ್ಮಿಕರಿಗೆ ರೈಲ್ವೆ ಇಲಾಖೆ ಟಿಸಿಗಳು ದಂಡ ವಿಧಿಸಿದರೂ ಕಾರ್ಮಿಕರ ಉಚಿತ ಪ್ರಯಾಣ ನಿಂತಿಲ್ಲ.ನಿತ್ಯ ಬೆಳಗ್ಗೆ, ಸಂಜೆ ಪ್ರಯಾಣ ಸೇರಿ ದಿನಕ್ಕೆ 40 ಸಾವಿರ ರೂ. ಗೂ ಹೆಚ್ಚು ಇಲಾಖೆಗೆ ನಷ್ಟವಾದರೆ, ತಿಂಗಳಿಗೆ 12.40 ಲಕ್ಷ ರೂ. ನಷ್ಟವಾಗುತ್ತಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮುಂಬಯಿ ರೈಲ್ವೆ ಇಲಾಖೆ ಆಡಳಿತ ಮಂಡಳಿ 2020ರ ಜೂನ್ನಿಂದ ಇಲ್ಲಿಯತನಕ ಟಿಕೆಟ್ ಇಲ್ಲದೆ 43,526 ಪ್ರಯಾಣಿಕರನ್ನು ಪತ್ತೆ ಹಚ್ಚಿ ಮುಂದಿನ ಕ್ರಮಕ್ಕೆ ಶಿಫಾರಸು ಮಾಡಿದೆ. ಮುಂಬಯಿ ಉಪನಗರಗಳ ರೈಲು ನಿಲ್ದಾಣ ಹಾಗೂ ಎಕ್ಸ್ಪ್ರೆಸ್ ಟರ್ಮಿನಲ್ಗಳಲ್ಲಿಕಾರ್ಯಾಚರಣೆ ನಡೆಸಿ ಸೂಕ್ತ ಕ್ರಮ ಕೈಗೊಂಡಿದೆ. ರಾಯಚೂರು ರೈಲ್ವೆ ಇಲಾಖೆಯೂ ಕ್ರಮಕ್ಕೆ ಮುಂದಾಗಲಿ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಜಿಲ್ಲೆಗೆ ಆಂಧ್ರದಿಂದ ಕೂಲಿ ಕಾರ್ಮಿಕರು ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ರಾಯಚೂರು ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಕ್ರಮವಹಿಸಲು ಸೂಚನೆ ನೀಡಿರುವೆ. ಕಾರ್ಮಿಕರಿಗೆ ಜಾಗೃತಿ ಮೂಡಿಸಿ ಕಾರ್ಮಿಕ ಪಾಸ್ ನೀಡಲು ಆದೇಶ ನೀಡಿರುವೆ ಎಂದು ರಾಜಾ ರಾಯಚೂರು ಸಂಸದ ಅಮರೇಶ್ವರ ನಾಯಕ ಹೇಳಿದರು.
ಸಾವಿರರು ಸಂಖ್ಯೆಯ ಕೂಲಿ ಕಾರ್ಮಿಕರು ಟಿಕೆಟ್ ಪಡೆಯದೆ ರೈಲು ಪ್ರಯಾಣ ಮಾಡುತ್ತಿರುವ ವಿಷಯವನ್ನು ದಕ್ಷಿಣ ಮಧ್ಯ ರೈಲ್ವೆ ಇಲಾಖೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.ಜತೆಗೆ ಕಾರ್ಮಿಕರಿಗೆ ಕಾರ್ಮಿಕ ಪಾಸ್ ಪಡೆಯಲು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ರಾಯಚೂರು ರೈಲ್ವೆ ನಿಲ್ದಾಣ ಸ್ಟೇಷನ್ ಮಾಸ್ಟರ್ ಅಶೋಕ್ ಕುಮಾರ ಮೀನಾ ಹೇಳಿದರು.












Click it and Unblock the Notifications