ಜೈಲಿಗೆ ಹೋಗಿ ಬಂದ ಅಮಿತ್ ಶಾ ಉಪದೇಶ ಮಾಡ್ತಾರೆ: ಪರಮೇಶ್ವರ್
ರಾಯಚೂರು, ಜನವರಿ 12: "ಜೈಲಿಗೆ ಹೋಗಿ ಬಂದವರು ಉಪದೇಶ ಮಾಡುತ್ತಾರೆ. ಪಕ್ಕದಲ್ಲಿ ಕುಳಿತುಕೊಂಡಿರುವ ಜೈಲಿಗೆ ಹೋಗಿ ಬಂದವರು ಉಪದೇಶ ಕೇಳುತ್ತಾರೆ," ಹೀಗಂಥ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರಿಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ್ ಟಾಂಗ್ ನೀಡಿದ್ದಾರೆ.
ರಾಯಚೂರಿನ ದೇವದುರ್ಗದಲ್ಲಿ ಮಾತನಾಡಿದ ಅವರು, "ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೂರು ತಿಂಗಳು ಜೈಲಿಗೆ ಹೋಗಿ ಬಂದಿದ್ದಾರೆ. ಬಿ.ಎಸ್.ಯಡಿಯೂರಪ್ಪ ಕೂಡ ಜೈಲಿಗೆ ಹೋಗಿ ಬಂದಿದ್ದಾರೆ. ಇಬ್ಬರು ಸೇರಿ ಭ್ರಷ್ಟಾಚಾರದ ಕುರಿತು ಮಾತಾಡುತ್ತಾರೆ. ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಉಪದೇಶ ಮಾಡುತ್ತಾರೆ. ನೀವ್ಯಾಕೆ ಜೈಲಿಗೆ ಹೋಗಿದ್ರಿ?" ಎಂದು ಅಮಿತ್ ಶಾ ಮತ್ತು ಬಿಎಸ್ ಯಡಿಯೂರಪ್ಪನವರನ್ನು ಪರಮೇಶ್ವರ್ ಪ್ರಶ್ನಿಸಿದ್ದಾರೆ.
"ಸನ್ಯಾಸಿ, ಸ್ವಾಮೀಜಿ ಎಂದರೆ ಅರಿಷಡ್ವರ್ಗಗಳನ್ನು ಮೀರಿದವರು. ಆದರೆ ಇವರು ಮೀರಿದ್ದಾರೋ ಇಲ್ಲವೋ ಗೊತ್ತಿಲ್ಲ," ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.
"ಯೋಗಿ ಉತ್ತರ ಪ್ರದೇಶದಲ್ಲಿ ಕೆಲಸ ಮಾಡಲಿ. ಕರ್ನಾಟಕಕ್ಕೆ ಬಂದು ಉಪದೇಶ ಕೊಡುವುದು ಬೇಡ. ನಾವು ದೇವಸ್ಥಾನಕ್ಕೆ ಹೋದರೆ ಸಾಫ್ಟ್ ಹಿಂದುತ್ವ ಎನ್ನುತ್ತಾರೆ. ನಿಮ್ಮ ಹಾಗೆ ನಮ್ಮ ಹಿಂದುತ್ವ ಅಲ್ಲ. ಎಲ್ಲರನ್ನೂ ಕರೆದುಕೊಂಡು ಹೋಗುವುದು ನಮ್ಮ ಹಿಂದುತ್ವ," ಎಂದು ಪರಮೇಶ್ವರ್ ತಿರುಗೇಟು ನೀಡಿದರು.
"ದಲಿತ ಬಾಲಕಿ ದಾನಮ್ಮ, ಧನ್ಯಶ್ರೀ ಸಾವಿನ ಬಗ್ಗೆ ಬಿಜೆಪಿಯವರು ಮಾತಾಡಲ್ಲ. ಕರಾವಳಿಯಲ್ಲಿ ಯಾವುದೋ ಕಾರಣಕ್ಕೂ ಸತ್ತರೂ ಹಿಂದುತ್ವ ಎನ್ನುತ್ತಾರೆ. ನಮ್ಮದು ಸಮಬಾಳು-ಸಮಪಾಲು ಸಿದ್ಧಾಂತ. ಬಸವಣ್ಣ, ಅಂಬೇಡ್ಕರ್ ಸಿದ್ಧಾಂತದಲ್ಲಿ ನಾವು ನಡೆಯುತ್ತಿದ್ದೇವೆ," ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.
"ನೋಟ್ ಬ್ಯಾನ್, ಜಿಎಸ್ಟಿಯಿಂದ ಜನರಿಗೆ ಸಮಸ್ಯೆ ಉಂಟಾಗಿದೆ. ಆದರೆ ಕೇಂದ್ರ ಸರಕಾರ ಬಡವರು, ರೈತರ ನೆರವಿಗೆ ಬಂದಿಲ್ಲ. ಅಚ್ಛೇ ದಿನ್ ಆಯೇಗಾ ಎಂದು ಎದೆಯುಬ್ಬಿಸಿ ಎದೆಯುಬ್ಬುಸಿ ಮಾತಾಡಿದರು. 56 ಇಂಚು ಎದೆ ಇದೆಯಂತೆ," ಎಂದು ಪ್ರಧಾನಿ ಮೋದಿಯನ್ನು ಲೇವಡಿ ಮಾಡಿದರು.