ದಿಲೀಪ್ ರಾಜ್ ಸರ್ ಭಿಕ್ಷೆಯಿಂದಲೇ ನಮ್ಮ ಹೊಟ್ಟೆ ತುಂಬ್ತಿದೆ: ‘ಸರಿಗಮಪ’ ವೇದಿಕೆಯಲ್ಲಿ ಕಣ್ಣೀರಿಟ್ಟ ಹಾಸ್ಯ ಕಲಾವಿದರು
ಕನ್ನಡ ಕಿರುತೆರೆ ಹಾಗೂ ಚಿತ್ರರಂಗದ ಖ್ಯಾತ ನಟ, ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಇಡೀ ಮನರಂಜನಾ ಲೋಕಕ್ಕೆ ದೊಡ್ಡ ಆಘಾತ ತಂದಿದೆ. ಇತ್ತೀಚೆಗಷ್ಟೇ ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ನೆಚ್ಚಿನ ನಟನಿಗೆ ಜೀ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ 'ಸರಿಗಮಪ ಲಿಟಲ್ ಚಾಂಪ್ಸ್' ವೇದಿಕೆಯಲ್ಲಿ ವಿಶೇಷ ನುಡಿನಮನ ಸಲ್ಲಿಸಲಾಗಿದೆ. 'ದಿಲೀಪ ನುಡಿ ನಮನʼ ಹೆಸರಿನ ಈ ವಿಶೇಷ ಸಂಚಿಕೆಯಲ್ಲಿ ಪಾಲ್ಗೊಂಡಿದ್ದ ಸ್ಯಾಂಡಲ್ವುಡ್ ಹಾಗೂ ಕಿರುತೆರೆಯ ಹಲವು ಕಲಾವಿದರು, ತಮಗೆ ಆಸರೆಯಾಗಿದ್ದ ದಿಲೀಪ್ ರಾಜ್ ಅವರನ್ನು ನೆನೆದು ವೇದಿಕೆಯಲ್ಲೇ ಕಣ್ಣೀರು ಹಾಕಿದ್ದಾರೆ.
"ಅವರು ಕೊಟ್ಟ ಬದುಕಿನ ಭಿಕ್ಷೆ ಇದು"
ಈ ಭಾವುಕ ಕ್ಷಣಗಳ ಪ್ರೋಮೋ ಒಂದನ್ನು ಜೀ ಕನ್ನಡ ವಾಹಿನಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಇದು ಇಂಟರ್ನೆಟ್ನಲ್ಲಿ ವೈರಲ್ ಆಗುತ್ತಿದೆ. ವೇದಿಕೆಯಲ್ಲಿ ದಿಲೀಪ್ ರಾಜ್ ಅವರ ಭಾವಚಿತ್ರದ ಮುಂದೆ ನಿಂತು ಮಾತನಾಡಿದ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ, "ಇಂದು ನಾವು ಹೊಟ್ಟೆತುಂಬ ಊಟ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ದಿಲೀಪ್ ಸರ್ ಕೊಟ್ಟ ಭಿಕ್ಷೆಯೇ ಕಾರಣ" ಎಂದು ಕಣ್ಣೀರಿಟ್ಟಿದ್ದಾರೆ.

ಮತ್ತೊಬ್ಬ ಜನಪ್ರಿಯ ಹಾಸ್ಯ ನಟ ಹುಲಿ ಕಾರ್ತಿಕ್ ಮಾತನಾಡಿ, "ನಮ್ಮ ದೇಹ ಮಾತ್ರ ಇಲ್ಲಿ ದುಡಿಯುತ್ತಿದೆ ಅಷ್ಟೇ. ಆ ಪುಣ್ಯಾತ್ಮ (ದಿಲೀಪ್ ರಾಜ್) ಹಾಕಿದ ಭಿಕ್ಷೆಯಿಂದ ನಾವಿಂದು ಈ ಮಟ್ಟಕ್ಕೆ ಬೆಳೆದಿದ್ದೇವೆ" ಎಂದು ಭಾವುಕರಾಗಿದ್ದಾರೆ. ಇನ್ನು ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಗಪ್ಪ ಹಾಗೂ ಸುಶ್ಮಿತಾ ದಂಪತಿ ಕೂಡ ತಮಗೆ ಲೈಫ್ ಕೊಟ್ಟ ನಟನನ್ನು ಸ್ಮರಿಸಿದ್ದು, "ನನಗೆ 'ಜಗ್ಗಪ್ಪ' ಎಂದು ಹೆಸರಿಟ್ಟು ಗುರುತಿಸಿದ್ದೇ ದಿಲೀಪ್ ಸರ್" ಎಂದು ಹಳೇ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಮತ್ತೊಬ್ಬ ಕಲಾವಿದರಂತೂ, "ದಿಲೀಪ್ ಸರ್ ಅಂದು ನನಗೆ ಬಣ್ಣ ಹಚ್ಚುವ ಅವಕಾಶ ಕೊಡದೇ ಹೋಗಿದ್ದರೆ, ನಾನಿಂದು ಜೀವನಕ್ಕಾಗಿ ಆಟೋ ಓಡಿಸಿಕೊಂಡು ಇರಬೇಕಾಗುತ್ತಿತ್ತು" ಎಂದು ತಮ್ಮ ಬದುಕಿಗೆ ಆಸರೆಯಾದ ಆಲದಮರವನ್ನು ನೆನೆದಿದ್ದಾರೆ.
ಬಾಯ್ಫ್ರೆಂಡ್ನಿಂದ ಹಿಟ್ಲರ್ ಕಲ್ಯಾಣದವರೆಗೆ
ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ದಿಲೀಪ್ ರಾಜ್ ಅವರು ಸವೆಸಿದ ಹಾದಿ ಮತ್ತು ನೀಡಿದ ಕೊಡುಗೆ ಅಪಾರ. 2005ರಲ್ಲಿ ತೆರೆಕಂಡ 'ಬಾಯ್ಫ್ರೆಂಡ್' ಚಿತ್ರದ ಮೂಲಕ ದಿಲೀಪ್ ರಾಜ್ ನಾಯಕ ನಟನಾಗಿ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಿದರು. 2007ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಸೂಪರ್ ಹಿಟ್ 'ಮಿಲನ' ಚಿತ್ರದಲ್ಲಿ ದಿಲೀಪ್ ನಟಿಸಿದ ನೆಗೆಟಿವ್ ಶೇಡ್ ಪಾತ್ರ ಅವರಿಗೆ ಭಾರಿ ಜನಪ್ರಿಯತೆ ತಂದುಕೊಟ್ಟಿತು. ಆ ಬಳಿಕ ಅವರು ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಮಿಂಚಿದರು.
ಡಾರ್ಲಿಂಗ್ ಕೃಷ್ಣ ನಿರ್ದೇಶನದಲ್ಲಿ ಮೂಡಿಬಂದು, ಇತ್ತೀಚೆಗಷ್ಟೇ (ಮಾರ್ಚ್ 16) ಬಿಡುಗಡೆಯಾಗಿದ್ದ 'ಲವ್ ಮಾಕ್ಟೇಲ್ 3' ಸಿನಿಮಾದಲ್ಲಿ ದಿಲೀಪ್ ರಾಜ್ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ಭಾರಿ ಯಶಸ್ಸು ಕಂಡಿದ್ದರು. ಜೀ ಕನ್ನಡದ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯ ಎಜೆ (ಅಭಿನವ್ ಜಗನ್ನಾಥ್) ಪಾತ್ರ ಅವರ ವೃತ್ತಿಜೀವನದಲ್ಲೇ ಅತ್ಯಂತ ದೊಡ್ಡ ಬ್ರೇಕ್ ನೀಡಿ, ಪ್ರತಿ ಮನೆಯ ಸದಸ್ಯನನ್ನಾಗಿ ಮಾಡಿತು.
ನಟನೆಯ ಜೊತೆಗೆ 'ಪಾರು' ಹಾಗೂ 'ನಾ ನಿನ್ನ ಬಿಡಲಾರೆ' ನಂತಹ ಯಶಸ್ವಿ ಸೀರಿಯಲ್ಗಳನ್ನು ಇವರು ನಿರ್ಮಿಸಿದ್ದರು. ಅನೇಕ ಉದಯೋನ್ಮುಖ ನಟ-ನಟಿಯರಿಗೆ, ಹಾಸ್ಯ ಕಲಾವಿದರಿಗೆ ತಮ್ಮ ನಿರ್ಮಾಣ ಸಂಸ್ಥೆಯ ಮೂಲಕ ಬದುಕು ನೀಡಿ ಆಸರೆಯಾಗಿದ್ದ ದಿಲೀಪ್ ರಾಜ್ ಅವರಿಗೆ 'ಸರಿಗಮಪ' ವೇದಿಕೆ ಭಾವಪೂರ್ಣ ನಮನ ಸಲ್ಲಿಸಿದೆ. ಈ ವಿಶೇಷ 'ದಿಲೀಪ ನುಡಿ ನಮನ' ಸಂಚಿಕೆಯು ಭಾನುವಾರ ರಾತ್ರಿ 7:30ಕ್ಕೆ ಪ್ರಸಾರವಾಗಲಿದೆ.













Click it and Unblock the Notifications