ಸಂಬಂಧದಲ್ಲಿ ಈ ರೀತಿ ಆಗುತ್ತಿದೆ ಅಂದ್ರೆ ಮುರಿದು ಹೋಗಿತ್ತಿದೆ ಎಂದರ್ಥ, ಎಚ್ಚೆತ್ತುಕೊಳ್ಳೋದು ಅನಿವಾರ್ಯ
ಇತ್ತೀಚಿನ ದಿನಗಳಲ್ಲಿ, ಸಂಬಂಧಗಳು ಹೆಚ್ಚು ಕಾಲ ಉಳಿದರೆ ಅದೇ ಅದೃಷ್ಟ ಅನ್ನುವಂತಾಗಿದೆ. ಲವ್ ಮಾರೇಜ್ ಆಗಿರಲಿ, ಅರೇಂಜ್ ಮ್ಯಾರೇಜ್ ಆಗಿರಲಿ, ಲಿವ್ ಇನ್ ರಿಲೇಶನೇ ಆಗಿರಲಿ ಒಂದು ನಿರ್ದಿಷ್ಟ ಹಂತದ ನಂತರ ಮುರಿದು ಬೀಳುವುದನ್ನು ನೋಡುತ್ತಿರುತ್ತೇವೆ. ಮದುವೆಯಾದ ಕೆಲವೇ ಸಮಯದಲ್ಲಿ ಡಿವೋರ್ಸ್ಗಾಗಿ ಕೋರ್ಟ್ ಮೆಟ್ಟಿಲು ಹತ್ತುವ ಅದೆಷ್ಟೋ ಕೇಸ್ಗಳು ನಮ್ಮ ಮುಂದೆಯೇ ನಡೆಯುತ್ತವೆ. ಆ ಸಂದರ್ಭದಲ್ಲಿ ಪತಿ, ಪತ್ನಿ ಬೇರೆಯಾಗುವುದಕ್ಕೆ ನೀಡುವ ಕಾರಣಗಳು ಕ್ಷುಲ್ಲಕ ಎಂದೆನಿಸಬಹುದು. ಆದರೆ ಇಬ್ಬರೂ ಸಂಬಂಧ ಕೊನೆ ಮಾಡುವ ಹಂತಕ್ಕೆ ಮಾನಸಿಕವಾಗಿ ಸಿದ್ದರಾಗಿಯೇ ಬಂದು ನಿಂತಿರುತ್ತಾರೆ.
ಹಾಗಂತ ಯಾವುದೇ ಸಂಬಂಧವು ಇದ್ದಕ್ಕಿದ್ದಂತೆ ಕೊನೆಗೊಳ್ಳುವುದಿಲ್ಲ. ಅದಕ್ಕೊಂದು ಕಾರಣ ಇದ್ದೇ ಇರುತ್ತದೆ. ಸಂಬಂಧಗಳಲ್ಲಿ ಬಿರುಕು ಮೂಡುತ್ತಿದೆ ಎನ್ನುವಾಗ ಸಂಗಾತಿಗಳ ವರ್ತನೆಯಲ್ಲಿ ಬದಲಾವಣೆಗಳಾಗುತ್ತವೆ. ಈ ಬದಲಾವಣೆಗಳನ್ನು ಸರಿಯಾಗಿ ಗುರುತಿಸಿಕೊಂಡಾಗ ಸಂಬಂಧವನ್ನು ಉಳಿಸುವ ಪ್ರಯತ್ನ ಮಾಡಬಹುದು. ಸಂಬಂಧದಲ್ಲಿ ಏರುಪೇರಾಗುತ್ತದೆ ಎನ್ನುವಾಗ ಕೆಲವೊಂದು ಘಟನೆಗಳು ಘಟಿಸಬಹುದು. ಆಗ ಎಚ್ಚೆತ್ತುಕೊಳ್ಳುವುದು ಅನಿವಾರ್ಯವಾಗುವುದು. ಹಾಗೆಯೇ ಬಿಟ್ಟು ಬಿಟ್ಟರೆ ಕೊನೆಗೊಂದು ದಿನ ಕುಳಿತು ಚಿಂತಿಸುವುದು ಬಿಟ್ಟರೆ ಬೇರೇನೂ ಉಳಿಯುವುದಿಲ್ಲ.

ಸಂಬಂಧ ಮುರಿದು ಹೋಗುತ್ತಿದೆ ಎನ್ನುವುದನ್ನು ಸೂಚಿಸುವ ಚಿಹ್ನೆಗಳು :
ಭಾವನಾತ್ಮಕ ಅಂತರ
ಭಾವನಾತ್ಮಕ ಅಂತರ ಹೆಚ್ಚಾದಾಗ, ಸಂಬಂಧ ಮುರಿದು ಬೀಳುವ ಹಂತಕ್ಕೆ ತಲುಪಬಹುದು. ದಿನ ನಿತ್ಯದ ಮಾತುಕತೆಗಳು, ಸುಖ ದುಃಖಗಳನ್ನು ಹಂಚಿಕೊಳ್ಳುವುದು. ಈ ದಿನ ಹೇಗಿತ್ತು, ಊಟ, ತಿಂಡಿಯ ಬಗ್ಗೆ ವಿಚಾರಣೆ, ಸಣ್ಣ ಸಣ್ಣ ವಿಚಾರಗಳ ವಿನಿಮಯ ನೋಡುವುದಕ್ಕೆ ಕೇಳುವುದಕ್ಕೆ ಸಾಮಾನ್ಯವಾಗಿರಬಹುದು. ಆದರೆ ಇದು ಸಂಬಂಧದಲ್ಲಿ ದೊಡ್ಡ ಪರಿಣಾಮ ಉಂಟು ಮಾಡುವುದು. ಈ ಮಾತಕತೆ ಕಡಿಮೆಯಾಯಿತು ಎಂದರೆ ಸಂಬಂಧದಲ್ಲಿನ ಅಂತರ ಹೆಚ್ಚಾಗುವುದು.
ವಿನಾ ಕಾರಣ ಜಗಳ
ಸಂಬಂಧದಲ್ಲಿ ಸಣ್ಣ ಸಣ್ಣ ಭಿನ್ನಾಭಿಪ್ರಾಯ, ಮನಸ್ತಾಪ ಸಹಜ. ಆದರೆ ವಿನಾ ಕಾರಣ ಅಥವಾ ಪ್ರಾಮುಖ್ಯತೆಯೇ ಇಲ್ಲದ ವಿಷಯಗಳಿಗೆ ಜಗಳ ಸಂಬಂಧ ಹದಗೆಡುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಅಲ್ಲದೆ ಇಲ್ಲಿ ಜಗಳದ ನಂತರ, ಪರಿಹರಿಸಿಕೊಳ್ಳುವುದು ಇಬ್ಬರಿಗೂ ಬೇಕಿರುವುದಿಲ್ಲ, ಯಾರು ಮೊದಲು ಮಾತನಾಡಬೇಕು ಎನ್ನುವ ವಿಚಾರದಲ್ಲಿ ತಮ್ಮ ಅಹಂ ಮೊದಲಾಗುತ್ತದೆ. "ನಾನು ಸಾರಿ ಹೇಳುವುದೇ ಇಲ್ಲ" ಎನ್ನು ಹಠ ಸಂಬಂಧದ ಕೊಂಡಿಯನ್ನು ಸಡಿಲು ಮಾಡುತ್ತದೆ.
ಒಟ್ಟಿಗೆ ಸಮಯ ಕಳೆಯದಾಗ
ಒಟ್ಟಿಗೆ ಸಮಯ ಕಳೆಯುವುದು, ಸಂಗಾತಿಗಾಗಿ ದಿನದಲ್ಲಿ ಸ್ವಲ್ಪ ಸಮಯವನ್ನು ಮೀಸಲಿಡುವುದು ಬಹಳ ಮುಖ್ಯ. ಸದಾ ಕೆಲಸ, ಸ್ನೇಹಿತರು ಎಂದು ಸಂಗಾತಿಗೆ ಸಮಯವೇ ನೀಡದಿದ್ದರೇ ಅದು ಸಮಸ್ಯೆಗೆ ಆಹ್ವಾನವೇ. ಇಲ್ಲಿ ದೈಹಿಕವಾಗಿ ಇಬ್ಬರೂ ಜೊತೆಗಿದ್ದರೂ ಮಾನಸಿಕವಾಗಿ ದೂರವಾಗುತ್ತಾ ಬರುತ್ತಾರೆ. ಕೊನೆಗೊಂದು ದಿನ ಪರಸ್ಪರರ ಬಗ್ಗೆ ಭಾವನೆಗಳೇ ಸತ್ತು ಹೋಗುತ್ತವೆ.
ಪ್ರಣಯ ಸಂಬಂಧದ ಕೊರತೆ
ದೀರ್ಘಕಾಲೀನ ಸಂಬಂಧಕ್ಕೆ ಪ್ರಣಯ ಅತ್ಯಗತ್ಯ. ಕೈ ಹಿಡಿಯುವುದು, ಅಪ್ಪಿಕೊಳ್ಳುವುದು ಮತ್ತು ದೈಹಿಕ ಅನ್ಯೋನ್ಯತೆ ಪ್ರೀತಿಯಲ್ಲಿ ಬಹಳ ಅಗತ್ಯ. ಆದರೆ, ಈ ವಿಷಯಗಳು ಇದ್ದಕ್ಕಿದ್ದಂತೆ ಕಡಿಮೆಯಾಗುತ್ತಿದೆ ಎಂದರೆ ಎಚ್ಚೆತ್ತುಕೊಳ್ಳಬೇಕಾಗಿರುವುದು ಅನಿವಾರ್ಯ. ಅದು ಸಂಬಂಧ ಮುರಿದು ಬೀಳುತ್ತಿರುವುದರ ಬಹು ಮುಖ್ಯ ಸಂಕೇತವಾಗಿರಬಹುದು.
ಗೌರವದ ಕೊರತೆ
ಪ್ರೀತಿಗಿಂತ ಗೌರವ ಇನ್ನೂ ಮುಖ್ಯ. ನಿಮ್ಮ ಸಂಬಂಧದಲ್ಲಿ ಪ್ರೀತಿ ಇದ್ದರೂ ಗೌರವವಿಲ್ಲದಿದ್ದರೆ, ಅದು ಬಿರುಕು ಬಿಡಬಹುದು. ಆರೋಗ್ಯಕರ ಸಂಬಂಧದಲ್ಲಿ ಗೌರವವು ನಿರ್ಣಾಯಕವಾಗಿದೆ. ಸಂಗಾತಿಗಳು ಪರಸ್ಪರರ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಕ್ಷುಲ್ಲಕ ವಿಷಯಗಳಿಗೆ ಪರಸ್ಪರ ಕೀಳಾಗಿ ನೋಡುವುದು ತಪ್ಪು, ಅದು ನಿಮ್ಮ ಸಂಬಂಧವನ್ನು ಹಾಳುಮಾಡಬಹುದು.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications