ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ಪ್ರವಾಹ ತಡೆಗೆ ಕ್ರಮ: ಬೆಸ್ಕಾಂಗೆ ಮಹೇಶ್ವರ್ ರಾವ್ ಖಡಕ್ ಸೂಚನೆ
ಬೆಂಗಳೂರಿನಲ್ಲಿ ಗಾಳಿ ಆಂಜನೇಯ ದೇವಸ್ಥಾನದ ಬಳಿ ವೃಷಭಾವತಿ ವ್ಯಾಲಿಯಲ್ಲಿ 66 ಕೆ.ವಿ. ಸಾಮರ್ಥ್ಯದ ಬೆಸ್ಕಾಂ ವಿದ್ಯುತ್ ಲೈನ್ ಹಾದು ಹೋಗುತ್ತಿದ್ದು, ಅದನ್ನು ಮೇಲ್ಭಾಗಕ್ಕೆ ಸ್ಥಳಾಂತರಿಸಲು ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಬೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು. ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಮಾತಮಾಡಿದ ಅವರು, ವೃಷಭಾವತಿ ವ್ಯಾಲಿಯಲ್ಲಿ ಬೆಸ್ಕಾಂ ವಿದ್ಯುತ್ ಲೈನ್ ಅಡ್ಡಲಾಗಿರುವುದರಿಂದ ಮಳೆನೀರಿನ ಹರಿವಿನ ಮಟ್ಟ ಹೆಚ್ಚಾದಾಗ ತ್ಯಾಜ್ಯ ಅಡ್ಡಿಯಾಗಿ ನಿಂತು ನೀರು ಹಿಮ್ಮುಖವಾಗಿ ಹರಿಯುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಂಬಂಧ ಕೂಡಲೇ ವಿದ್ಯುತ್ ಲೈನ್ ಅನ್ನು ಮೇಲ್ಭಾಗಕ್ಕೆ ಸ್ಥಳಾಂತರಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದಾರೆ.
ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ರಸ್ತೆಯ ಭಾಗ ಜಲಾವೃತವಾಗುವುದನ್ನು ತಪ್ಪಿಸುವ ಸಲುವಾಗಿ ತಾತ್ಕಾಲಿಕವಾಗಿ ಕ್ಯಾಚ್ಮೆಂಟ್ ಪಿಟ್ ನಿರ್ಮಿಸಿ ಪಂಪ್ ವ್ಯವಸ್ಥೆ ಕಲ್ಪಿಸಬೇಕು. ಮಳೆಗಾಲದ ವೇಳೆ ಪಂಪ್ ಮೂಲಕ ನೀರನ್ನು ವ್ಯಾಲಿಗೆ ಹರಿಸುವ ವ್ಯವಸ್ಥೆ ಮಾಡಿ, ರಸ್ತೆ ಮೇಲೆ ಯಾವುದೇ ರೀತಿಯ ಜಲಾವೃತವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನ ನೀಡಿದ್ದಾರೆ. ಮುಂದುವರಿದು ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನದ ಮೇಲ್ಸೇತುವೆ ರಸ್ತೆಗೆ ಈಗಾಗಲೇ ಡಾಂಬರೀಕರಣ ಕಾರ್ಯ ಪೂರ್ಣಗೊಂಡಿದ್ದು, ಎಸ್ಐಪಿ ಅನುದಾನದಡಿ ಎಲ್ಲೆಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆಯೋ, ಆ ಕಾಮಗಾರಿಗಳು ಹಾಗೂ ಡಾಂಬರೀಕರಣ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ನಿರ್ದೇಶನ ನೀಡಿದ್ದಾರೆ.

ನಾಗರಭಾವಿ ಮುಖ್ಯರಸ್ತೆ ಪರಿವೀಕ್ಷಣೆ
ಇನ್ನು ಗೋವಿಂದರಾಜನಗರ ವಿಭಾಗದ ವಿಜಯನಗರ ಟೆಲಿಫೋನ್ ಎಕ್ಸ್ಚೇಂಜ್ನಿಂದ ಶೋಭ ಆಸ್ಪತ್ರೆ ಹಾಗೂ ಮೂಡಲಪಾಳ್ಯ ಮಾರ್ಗವಾಗಿ ನಾಗರಭಾವಿ ವೃತ್ತದವರೆಗೆ 3.8 ಕಿ.ಮೀ. ಉದ್ದದ ರಸ್ತೆಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ರಸ್ತೆ ಕಿರಿದಾಗಿರುವುದರಿಂದ ವಾಹನ ಸಂಚಾರವನ್ನು ನಿರ್ಬಂಧಿಸಿ ಹಂತ ಹಂತವಾಗಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ಮೊದಲ ಹಂತದಲ್ಲಿ 250 ಮೀ. ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದು, ಅದನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲು ಸೂಚನೆ ನೀಡಿದ್ದಾರೆ.
ನ್ಯೂ ಬಿಇಎಲ್ ರಸ್ತೆ ಪರಿಶೀಲನೆ
ನ್ಯೂ ಬಿಇಎಲ್ ರಸ್ತೆಯಲ್ಲಿ ಜಲಮಂಡಳಿಯ ಪೈಪ್ಲೈನ್ ಕಾಮಗಾರಿ ಪೂರ್ಣಗೊಂಡಿದ್ದು, ಪುನಶ್ಚೇತನ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳಲು ಜಲಮಂಡಳಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೆ, ಪಾದಚಾರಿ ಮಾರ್ಗದಲ್ಲಿದ್ದ ಪೈಪ್ಗಳನ್ನು ಕೂಡಲೇ ತೆರವುಗೊಳಿಸಲು ಸೂಚಿಸಿದರು. ಬಳಿಕ ಪಾದಚಾರಿ ಮಾರ್ಗವನ್ನು ಪರಿಶೀಲಿಸಿ, ಸೈಡ್ ಡ್ರೇನ್ಗಳಲ್ಲಿ ಹೂಳೆತ್ತುವ ಕಾರ್ಯವನ್ನು ವೀಕ್ಷಿಸಿದರು. ಚರಂಡಿಗಳಲ್ಲಿ ಸಂಪೂರ್ಣವಾಗಿ ಹೂಳೆತ್ತಿ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.
ಅಲ್ಲದೆ, ದುರಸ್ತಿಯ ಅಗತ್ಯವಿರುವ ಪಾದಚಾರಿ ಮಾರ್ಗಗಳನ್ನು ಸರಿಪಡಿಸುವುದರ ಜೊತೆಗೆ ಸ್ವಚ್ಛತೆ ಕಾಪಾಡಬೇಕು. ಪಾದಚಾರಿ ಮಾರ್ಗದಲ್ಲಿರುವ ತ್ಯಾಜ್ಯ ಹಾಗೂ ಮರದ ಅವಶೇಷಗಳನ್ನು ತೆರವುಗೊಳಿಸಲು ಸೂಚಿಸಿದರು. ಇದೇ ವೇಳೆ ಟೀ ಅಂಗಡಿಯ ಮುಂಭಾಗ ಟೀ ಕಪ್ ಗಳನ್ನು ಬಿಸಾಡಿರುವುದನ್ನು ಗಮನಿಸಿ, ಅಂಗಡಿ ಮಾಲೀಕರಿಗೆ ದಂಡ ವಿಧಿಸಲು ಸೂಚನೆ ನೀಡಿದರು.
ಮುಖ್ಯ ಆಯುಕ್ತರು ನೀಡಿದ ಪ್ರಮುಖ ಸೂಚನೆಗಳು
* ವಿಜಯನಗರ ಮೆಟ್ರೋ ನಿಲ್ದಾಣದ ಬಳಿಯಿರುವ ಬುಲೇ ಪಾರ್ಕ್ನ್ನು ಪರಿಶೀಲಿಸಿ, ಸಮರ್ಪಕ ನಿರ್ವಹಣೆ ಮಾಡಲು ಸೂಚನೆ ನೀಡಿದರು.
* ಮೈಸೂರು ರಸ್ತೆ-ಕೆಂಗೇರಿ ಬಳಿಯ ಪ್ರವಾಹಪೀಡಿತ ಪ್ರದೇಶದಲ್ಲಿ ಜಲಮಂಡಳಿ ಹಾಗೂ ನಗರ ಪಾಲಿಕೆ ಅಧಿಕಾರಿಗಳು ಸಮನ್ವಯದಿಂದ ಯೋಜನೆ ರೂಪಿಸಿ ಸಮಸ್ಯೆ ಬಗೆಹರಿಸಲು ಸೂಚನೆ ನೀಡಿದರು.
* ಆರ್.ಆರ್. ನಗರದ ಬಿಇಎಂಎಲ್ ಲೇಔಟ್ ಬಳಿಯ ಒಣತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಭೇಟಿ ನೀಡಿ, ಟ್ರಾನ್ಸ್ಫರ್ ಸ್ಟೇಷನ್ ನಿರ್ಮಿಸಲು ಸೂಚನೆ ನೀಡಿದರು.












Click it and Unblock the Notifications