ಕಾರ್ನಲ್ಲಿ ಬೆಂಕಿ: ಸುಟ್ಟು ಕರಕಲಾದ ಎನ್ಸಿಪಿ ಮುಖಂಡ
ಪುಣೆ, ಅಕ್ಟೋಬರ್ 14: ಮಹಾರಾಷ್ಟ್ರದ ನಾಸಿಕ್ನ ಎನ್ಸಿಪಿ ಮುಖಂಡರೊಬ್ಬರು ಕಾರ್ನಲ್ಲಿ ಉಂಟಾದ ಬೆಂಕಿ ಅವಘಡದಲ್ಲಿ ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ಮಂಗಳವಾರ ಸಂಜೆ ನಡೆದಿದೆ.
ಎನ್ಸಿಪಿ ಮುಖಂಡ ಸಂಜಯ್ ಶಿಂಧೆ ಅವರು ಮುಂಬೈ-ಆಗ್ರಾ ಹೆದ್ದಾರಿಯಲ್ಲಿ ತಮ್ಮ ಕಾರ್ನಲ್ಲಿ ಪ್ರಯಾಣಿಸುತ್ತಿದ್ದರು. ಪಿಂಪಲ್ಗಾವನ್ ಬಸ್ವಂತ್ ಟೋಲ್ ಪ್ಲಾಜಾ ಸಮೀಪ ಕಾರ್ನಲ್ಲಿ ವೈರಿಂಗ್ನಲ್ಲಿ ಉಂಟಾದ ಸಮಸ್ಯೆಯಿಂದ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿದೆ.
ತನಗೆ ಬೆಂಕಿ ಹಚ್ಚಿದ ವ್ಯಕ್ತಿಯನ್ನು ತನ್ನೊಂದಿಗೇ ದಹಿಸಿದ ಮಹಿಳೆ
ಶಾರ್ಟ್ ಸರ್ಕ್ಯೂಟ್ನಿಂದ ಉಂಟಾದ ಕಿಡಿ ಏಕಾಏಕಿ ದೊಡ್ಡ ಜ್ವಾಲೆಗಳನ್ನು ಸೃಷ್ಟಿಸಿದೆ. ಕಾರ್ನಲ್ಲಿ ಇರಿಸಿದ್ದ ಹ್ಯಾಂಡ್ ಸ್ಯಾನಿಟೈಸರ್ ಬೆಂಕಿ ವೇಗವಾಗಿ ಆವರಿಸಲು ಕಾರಣವಾಗಿದೆ. ಬೆಂಕಿ ಜೋರಾದಂತೆ ಕಾರ್ನ ಸೆಂಟ್ರಲ್ ಲಾಕ್ ವ್ಯವಸ್ಥೆಯು ಸಕ್ರಿಯಗೊಂಡು ಎಲ್ಲ ಬಾಗಿಲುಗಳೂ ಜಾಮ್ ಆಗಿವೆ.
ಬಾಗಿಲು ತೆರೆಯಲಾಗದೆ ಒಳಗೆ ಸಿಕ್ಕಿಕೊಂಡ ಶಿಂಧೆ, ಕಿಟಕಿ ಒಡೆದು ಪಾರಾಗಲು ಪ್ರಯತ್ನಿಸಿದ್ದಾರೆ. ಆದರೆ ಆಗಲೇ ತೀವ್ರಗೊಂಡಿದ್ದ ಬೆಂಕಿ ಅವರನ್ನು ಸಜೀವವಾಗಿ ದಹಿಸಿದೆ. ಕಾರ್ನಲ್ಲಿ ಬೆಂಕಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಿ ಶಿಂಧೆ ಅವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಅಗ್ನಿಶಾಮಕ ದಳಕ್ಕೂ ಕರೆ ಮಾಡಿದ್ದಾರೆ. ಆದರೆ ಶಿಂಧೆ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ ಬಳಿಕವೇ ಅದರಲ್ಲಿ ಇದ್ದ ವ್ಯಕ್ತಿ ಸಂಜಯ್ ಶಿಂಧೆ ಎನ್ನುವುದು ಗೊತ್ತಾಗಿದೆ.
ಭುವನೇಶ್ವರ: ರಾಜಭವನದ ಬಳಿ ಪೆಟ್ರೋಲ್ ಬಂಕ್ನಲ್ಲಿ ಬೆಂಕಿ, 8 ಮಂದಿಗೆ ಗಾಯ
ಶಿಂಧೆ ಅವರು ನಾಸಿಕ್ನಲ್ಲಿ ದ್ರಾಕ್ಷಿ ಹಣ್ಣು ರಫ್ತುದಾರರಾಗಿದ್ದಾರೆ. ನಾಸಿಕ್ ವೈನ್ ಉದ್ಯಮಕ್ಕೆ ಹೆಸರುವಾಸಿ. ತಮ್ಮ ದ್ರಾಕ್ಷಿ ತೋಟಕ್ಕೆ ಕೀಟನಾಶಕ ಖರೀದಿಸಲು ಅವರು ಪಿಂಪಲ್ಗಾವನ್ಗೆ ತೆರಳುತ್ತಿದ್ದರು.