16 ಕೆಜಿ ಚಿನ್ನದ ಸೀರೆಯನ್ನುಟ್ಟ ಮಹಾಲಕ್ಷ್ಮಿ; ಅದ್ಬುತ ದೃಶ್ಯ ಕಣ್ತುಂಬಿಕೊಂಡ ಭಕ್ತರು
ಪುಣೆ ಅಕ್ಟೋಬರ್ 15: ಇಂದು ವಿಶ್ವವಿಖ್ಯಾತಿ ದಸರಾ ಹಬ್ಬದ ಆಚರಣೆಯ ಕೊನೆಯ ದಿನ. ದೇಶಾದ್ಯಂತ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ನವರಾತ್ರಿ ಹಬ್ಬದ ಸಂದರ್ಭದಲ್ಲಿ ಪುಣೆಯ ಮಹಾಲಕ್ಷ್ಮಿ ಹೊಸ ಸೀರೆಯನ್ನುಟ್ಟು ಕಂಗೊಳಿಸಿದ್ದಾಳೆ. ಈ ಮಹಾಲಕ್ಷ್ಮಿಯ ವಿಶೇಷ ಅಲಂಕಾರವನ್ನು ನೋಡಲು ಜನ ಮುಗಿಬಿದ್ದಿದ್ದಾರೆ. ಅಷ್ಟಕ್ಕೂ ಮಹಾಲಕ್ಷ್ಮಿಗೆ ಉಡಿಸಿದ ಈ ಸೀರೆ ಕಾಂಚಿವರಂ ಸಾರಿಯಲ್ಲ, ಬನಾರಸ್ ಸಾರಿಯೂ ಅಲ್ಲ. ಬದಲಿಗೆ ದುಬಾರಿ ಬೆಲೆಯ ಚಿನ್ನದ ಸೀರೆ.
ಹೌದು.. ಮಹಾರಾಷ್ಟ್ರದ ಪುಣೆಯಲ್ಲಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿರುವ ದೇವಿಯ ಪ್ರತಿಮೆಗೆ ಇಂದು ವಿಜಯದಶಮಿಯ ಪ್ರಯುಕ್ತ ಚಿನ್ನದ ಸೀರೆಯನ್ನು ಉಡಿಸಲಾಗಿದೆ. ಚಿನ್ನದ ಸೀರೆಯನ್ನುಟ್ಟ ಮಹಾಲಕ್ಷ್ಮಿಯನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ದೇವಸ್ಥಾನಕ್ಕೆ ಹರಿದು ಬರುತ್ತಿದೆ. ನವರಾತ್ರಿ ಪ್ರಯುಕ್ತ ಪ್ರತಿನಿತ್ಯ ವಿವಿಧ ಅಲಂಕಾರದಲ್ಲಿ ಕಂಗೊಳಿಸುವ ಈ ಮಹಾಲಕ್ಷ್ಮಿಗೆ ಅಧಿಕ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಬೇಡಿದ ವರವನ್ನು ನೀಡುವ ದೇವಿಗೆ ಹಲವಾರು ಜನ ಹಲವಾರು ಹರಕೆಯನ್ನು ಹೊತ್ತುಕೊಳ್ಳುತ್ತಾರೆ. ಅದು ಈಡೇರಿದರೆ ಹರಕೆ ತೀರಿಸುವ ಪದ್ಧತಿ ಪೂರ್ವ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹೀಗೆ ಹರಕೆ ಹೊತ್ತುಕೊಂಡ ಭಕ್ತರು ಮಹಾಲಕ್ಷ್ಮಿಗೆ 16 ಕೆಜಿ ಚಿನ್ನದ ಸೀರೆಯನ್ನು ಅರ್ಪಿಸಿದ್ದಾರೆ.
5 ಕೋಟಿ ರು. ಮೌಲ್ಯದ ನೋಟುಗಳನ್ನು ಬಳಸಿ ದೇವಾಲಯ ಅಲಂಕಾರ!
ಮಹಾಲಕ್ಷ್ಮಿ ದೇವಸ್ಥಾನದ ಕಾರ್ಯಕರ್ತ ದೀಪಕ್ ವನಾರ್ಸೆ ಈ ಬಗ್ಗೆ ಮಾತನಾಡಿ, "ವಿಶೇಷವಾಗಿ ಮಹಾಲಕ್ಷ್ಮಿಯನ್ನು ಎರಡು ಸಂದರ್ಭದಲ್ಲಿ ಅತ್ಯಂತ ವಿಜೃಂಭಣೆಯಿಂದ ಪೂಜಿಸಲಾಗುತ್ತದೆ. ಮೊದಲನೆಯದು ವಿಜಯದಶಮಿ ಮತ್ತು ಎರಡನೆಯದು ಲಕ್ಷ್ಮಿ ಪೂಜೆ. ಈ ಎರಡು ಸಂದರ್ಭದಲ್ಲಿ ಚಿನ್ನದ ಸೀರೆಯನ್ನು ಮಹಾಲಕ್ಷ್ಮಿಗೆ ಉಡಿಸಿ ಅಲಂಕಾರ ಮಾಡಲಾಗುತ್ತದೆ. 11 ವರ್ಷಗಳ ಹಿಂದೆ ಭಕ್ತರು ಚಿನ್ನದ ಸೀರೆಯೊಂದನ್ನು ಉಡುಗೊರೆಯಾಗಿ ನೀಡಿದ್ದರು. ಈ ಚಿನ್ನದ ಸೀರೆಯು 16 ಕೆಜಿ ತೂಗುತ್ತದೆ " ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ವಿಜಯದಶಮಿಯ ವಿಶೇಷ ಸಂದರ್ಭದಲ್ಲಿ ದೇವಸ್ಥಾನಗಳನ್ನು ವಿಶೇಷವಾಗಿ ಅಲಂಕರಿಸಲಾಗಿದೆ. ವಾಸ್ತವವಾಗಿ, ಈ ಎಲ್ಲಾ ದೇವಸ್ಥಾನಗಳಲ್ಲಿ ಪುಣೆಯ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತನ್ನದೇ ಆದ ಸ್ಥಾನವಿದೆ. ವಿಜಯದಶಮಿಯ ವಿಶೇಷ ಸಂದರ್ಭದಲ್ಲಿ ಅಂದರೆ ದಸರಾದಲ್ಲಿ, ದೇವತೆ ತಾಯಿಗೆ ಚಿನ್ನದ ಸೀರೆಯನ್ನು ಧರಿಸುತ್ತಾರೆ.
ಈ ಸಂಪ್ರದಾಯ ಈಗಲ್ಲ ಕಳೆದ 11 ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ. 16 ಕೆಜಿ ಚಿನ್ನದ ಸೀರೆಯನ್ನು ಭಕ್ತರು ದೇವಿಗೆ ಅರ್ಪಿಸಿದ್ದಾರೆ. ಆ ದಿನದಿಂದ ವಿಜಯದಶಮಿ ಮತ್ತು ಲಕ್ಷ್ಮಿ ಪೂಜೆಯಂದು, ವಿಶೇಷವಾಗಿ ದೇವತೆಗೆ ಈ ವಿಶೇಷ ಸೀರೆ ಧರಿಸುತ್ತಾರೆ ಎಂದು ಹೇಳಲಾಗಿದೆ. ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಕಾರ್ಯಕರ್ತ ದೀಪಕ್ ವನಾರ್ಸೆ ಈ ದಿನ, ತಾಯಿಯ ವಿಶೇಷ ಅಲಂಕಾರವನ್ನು ಮಾಡಲಾಗುತ್ತದೆ ಮತ್ತು ಈ ದಿನ ದೇವಸ್ಥಾನವು ಭಕ್ತರಿಂದ ತುಂಬಿರುತ್ತದೆ ಎಂದು ಹೇಳುತ್ತಾರೆ.
ನೆಲ್ಲೂರಿನಲ್ಲಿ ಕರೆನ್ಸಿ ಅಲಂಕಾರ: ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿರುವ ಕನ್ಯಕಾ ಪರಮೇಶ್ವರಿ ದೇವಾಲಯವನ್ನು ಕರೆನ್ಸಿ ನೋಟುಗಳಿಂದ ಮಾಡಿದ ಹೂವುಗಳಿಂದ ಈ ನವರಾತ್ರಿ ಮಹೋತ್ಸವದ ಹಿನ್ನೆಲೆ ಸಿಂಗಾರ ಮಾಡಲಾಗಿದೆ. ಈ ದೇವಾಲಯದಲ್ಲಿ ವರ್ಷದ ಬೇರೆ ಬೇರೆ ಸಮಯದಲ್ಲಿ ಬೇರೆ ಬೇರೆ ದೇವರುಗಳನ್ನು ಪೂಜಿಸಲಾಗುತ್ತದೆ. ನವರಾತ್ರಿಯ ಈ ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲ ಧನಲಕ್ಷ್ಮೀಯನ್ನು ಪೂಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ನೋಟುಗಳನ್ನು ಹೂವುಗಳಂತೆ ಜೋಡಿಸಿಕೊಂಡು ಅಲಂಕಾರ ಮಾಡಲಾಗಿದೆ.
ಒಟ್ಟು ದೇವಾಲಯ ಪೂರ್ತಿ ಐದು ಕೋಟಿ ಹದಿನಾರು ಲಕ್ಷ ರೂಪಾಯಿ ಮೌಲ್ಯದ ನೋಟುಗಳಿಂದ ಅಲಂಕಾರ ಮಾಡಲಾಗಿದೆ. ಎರಡು ಸಾವಿರ ರೂಪಾಯಿಯ ನೋಟು, ಐನ್ನೂರು ರೂಪಾಯಿಯ ನೋಟು, ಇನ್ನೂರು ರೂಪಾಯಿಯ ನೋಟು, ನೂರು ರೂಪಾಯಿಯ ನೋಟು, ಐವತ್ತು ರೂಪಾಯಿಯ ನೋಟು, ಹತ್ತು ರೂಪಾಯಿಯ ನೋಟುಗಳನ್ನು ಬಳಸಿ ಈ ಅಲಂಕಾರವನ್ನು ವರ್ಣರಂಜಿತವಾಗಿ ಮಾಡಲಾಗಿದೆ. ಹಳೆಯ ದೇವಾಲಯವಾಗ ಕನ್ಯಕಾ ಪರಮೇಶ್ವರಿ ದೇವಾಲಯವನ್ನು ನಾಲ್ಕು ವರ್ಷಗಳ ಹಿಂದೆ ಸುಮಾರು 11 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ. ಆ ಬಳಿಕ ಪ್ರತಿ ವರ್ಷವೂ ನವರಾತ್ರಿಯನ್ನು ಬಹಳ ವಿಜೃಂಭಣೆಯಿಂದ ಆಯೋಜನೆ ಮಾಡಲಾಗುತ್ತಿದೆ.