ಎಫ್ ಟಿಐಐ ವಿದ್ಯಾರ್ಥಿಗಳಿಂದ ಅನಿರ್ದಿಷ್ಟಾವಧಿ ಉಪವಾಸ
ಪುಣೆ, ಸೆಪ್ಟೆಂಬರ್, 11 : ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ(ಎಫ್ಟಿಐಐ)ನ ನಿರ್ದೇಶಕ ಗಜೇಂದ್ರ ಚೌಹಾಣ್ ರನ್ನು ವಜಾಗೊಳಿಸಬೇಕೆಂದು ವಿದ್ಯಾರ್ಥಿಗಳು ಕೈಗೊಂಡ ಹೋರಾಟ ಇದೀಗ ಅನಿರ್ದಿಷ್ಟಾವಧಿ ಉಪವಾಸಕ್ಕೆ ತಿರುಗಿದೆ.
ಗಜೇಂದ್ರ ಚೌಹಾಣ್ ಅವರನ್ನು ಅಧಿಕಾರದಿಂದ ತೆರವುಗೊಳಿಸಬೇಕೆಂದು ತೀವ್ರವಾಗಿ ಪಟ್ಟು ಹಿಡಿದ ಎಫ್ ಟಿಐಐ ವಿದ್ಯಾರ್ಥಿಗಳು ಉಪವಾಸ ಸತ್ಯಾಗ್ರಹ ಮಾಡಲು ಮುಂದಾಗಿದ್ದು,ಗುರುವಾರದಿಂದ ಮೂರು ವಿದ್ಯಾರ್ಥಿಗಳು ಉಪವಾಸ ಆರಂಭಿಸಿದ್ದಾರೆ.[ಪುಣೆಯಲ್ಲಿ ರಾಹುಲ್ ಗಾಂಧಿ ಜತೆ ಕಾಣಿಸಿಕೊಂಡ ರಮ್ಯಾ!]
ಎಫ್ಟಿಐಐ ಸಂಸ್ಥೆಯ ಹಿರಾಲ್ ಸವಾದ್, ಅಲೋಲ್ ಅರೋರ ಮತ್ತು ಹಿಮಾಂಶು ಶೇಖರ್ ಎಂಬುವವರು ಉಪವಾಸ ಕೈಗೊಂಡ ವಿದ್ಯಾರ್ಥಿಗಳು. ಇವರು ಅಸ್ವಸ್ಥರಾದಲ್ಲಿ ಮತ್ತೆ ಮೂವರು ಉಪವಾಸಕ್ಕೆ ಕೂರುತ್ತಾರೆ. ಹೀಗೆ ಉಪವಾಸ ನಿರಂತರವಾಗಿ ಮುಂದುವರೆಯಲಿದೆ ಎಂದು ಎಫ್ ಟಿಟಿಐ ವಿದ್ಯಾರ್ಥಿಗಳ ಸಂಘದ ಪ್ರತಿನಿಧಿ ರಂಜಿತ್ ನಾಯರ್ ಹೇಳಿದ್ದಾರೆ.
ಮೂರು ತಿಂಗಳಿಂದ ಪ್ರತಿಭಟನೆ ಕೈಗೊಂಡ ವಿದ್ಯಾರ್ಥಿಗಳು ಪರಿಹಾರ ಕಲ್ಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ವಿದ್ಯಾರ್ಥಿಗಳು ಈ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ತೀರ್ಮಾನ ತೆಗೆದುಕೊಂಡಿದ್ದಾರೆ.[ಎಫ್ ಟಿಐಐ ವಿದ್ಯಾರ್ಥಿಗಳ ಹೋರಾಟಕ್ಕೆ ರಾಹುಲ್ ಬಲ]
ಈ ಉಪವಾಸದ ಮೂಲಕ ಎಫ್ಟಿಐಐ ಮಂಡಳಿಯ ಈಗಿನ ಸದಸ್ಯರ ನೇಮಕಾತಿಯನ್ನು ರದ್ದುಗೊಳಿಸಿ, ಹೊಸಬರನ್ನು ಪಾರದರ್ಶಕವಾಗಿ ನೇಮಕ ಮಾಡಬೇಕು. ಜೂನ್ 12 ರಿಂದ ನಡೆಯದ ತರಗತಿಗಳು ಯಥಾವತ್ತಾಗಿ ನಡೆಯಲು ಅನುವು ಮಾಡಿಕೊಡಬೇಕು ಎಂದೂ ಸಂಸ್ಥೆಯ ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
ಕಳೆದ ಕೆಲವು ತಿಂಗಳಿಂದ ನಡೆಯುತ್ತಿದ್ದ ಎಫ್ ಟಿಐಐ ವಿದ್ಯಾರ್ಥಿಗಳ ಹೋರಾಟಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇನ್ನಿತರ ಗಣ್ಯರು ಬೆಂಬಲ ಸೂಚಿಸಿದ್ದರು. ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸುವುದಾಗಿ ಭರವಸೆ ನೀಡಿದ್ದರು