ಗೌರಿ ಹತ್ಯೆ ಆರೋಪಿಗಳಿಗೆ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಜಾಮೀನು
ಪುಣೆ, ಡಿಸೆಂಬರ್ 14: ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾಗಿರುವ ಅಮೋಲ್ ಕಾಳೆ, ರಾಜೀವ್ ಬಂಗೇರಾ, ಅಮಿತ್ ದಿಗ್ವೇಕರ್ ಅವರುಗಳಿಗೆ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಜಾಮೀನು ದೊರೆತಿದೆ.
ಪುಣೆಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ 90 ದಿನಗಳಾದರೂ ಮೂವರ ಮೇಲೆ ಚಾರ್ಜ್ಶೀಟ್ ಸಲ್ಲಿಸಲು ವಿಫಲವಾದ ಕಾರಣ ನ್ಯಾಯಾಧೀಶರು ಜಾಮೀನು ಸಲ್ಲಿಸಿದ್ದಾರೆ.
ರಾಜೀವ್ ಬಂಗೇರಾ, ಅಮಿತ್ ದಿಗ್ವೇಕರ್ ನ್ಯಾಯಾಂಗ ಬಂಧನದಲ್ಲಿದ್ದರೆ ಅಮಿತ್ ಅಮೋಲ್ ಕಾಳೆಯು ಗೋವಿಂದ ಪಾನ್ಸರೆ ಹತ್ಯೆ ತನಿಖೆ ನಡೆಸುತ್ತಿರುವ ಎಸ್ಐಟಿ ವಶದಲ್ಲಿ ಇದ್ದಾನೆ. ಆದರೆ ಈ ಮೂವರಿಗೂ ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣದಲ್ಲಿ ಕೆಳ ಹಂತದ ನ್ಯಾಯಾಲಯದಲ್ಲಿ ಜಾಮೀನು ಮಂಜೂರಾಗಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿದ್ದ ಅಮೋಲ್ ಕಾಳೆಯನ್ನು ನರೇಂದ್ರ ದಾಬೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧವಿರುವ ಶಂಕೆಯ ಮೇಲೆ ಸೆಪ್ಟೆಂಬರ್ನಲ್ಲಿ ಸಿಬಿಐ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ಎಫ್ಐಆರ್ ದಾಖಲಿಸಿತ್ತು. ಆದರೆ 90 ದಿನವಾದರೂ ಚಾರ್ಜ್ಶೀಟ್ ಸಲ್ಲಿಸಿರಲಿಲ್ಲ.
ವಿಚಾರವಾದಿ ನರೇಂದ್ರ ದಾಬೋಲ್ಕರ್ ಅವರು 2013ರ ಆಗಸ್ಟ್ 20 ರಂದು ಪುಣೆಯಲ್ಲಿ ಹತ್ಯೆ ಆಗಿದ್ದರು. ಗೌರಿ ಹತ್ಯೆ ಮಾಡಿದ ತಂಡವೇ ಈ ಹತ್ಯೆಯನ್ನೂ ಮಾಡಿದೆ ಎನ್ನಲಾಗಿತ್ತು.












Click it and Unblock the Notifications