ಪುಣೆ ಅಪಘಾತ: ಮೈಸೂರಿನ ಯುವಕರು ಸಾವು
ಪುಣೆ, ಮಾ.9: ಮಹಾರಾಷ್ಟ್ರದ ಯಾತ್ರಾ ಸ್ಥಳ ಶಿರಡಿ ಸಾಯಿಬಾಬಾ ಸನ್ನಿಧಿಗೆ ತೆರಳಿದ್ದ ಮೈಸೂರು ಮೂಲದ ಯುವಕರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.
ಶಿರಡಿಯಲ್ಲಿ ಸಾಯಿಬಾಬಾ ದರ್ಶನ ಪಡೆದುಕೊಂಡು ಭಾನುವಾರ ಮುಂಜಾನೆ ಬೆಂಗಳೂರಿನ ಕಡೆಗೆ ಈ ಯುವಕರು ಹೊರಟ್ಟಿದ್ದರು. ಐವರು ಯುವಕರಿದ್ದ ಮಾರುತಿ ಸ್ವಿಫ್ಟ್ ಕಾರು ಬೆಂಗಳೂರು-ಪುಣೆ ಹೆದ್ದಾರಿಯಲ್ಲಿ ಎದುರಿಗೆ ಬರುತ್ತಿದ್ದ ಪೆಟ್ರೋಲ್ ಟ್ಯಾಂಕರ್ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಗೊಂಡವರ ಪರಿಸ್ಥಿತಿ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.

ಮೃತಪಟ್ಟವರನ್ನು ಮೈಸೂರಿನ ಸಿದ್ದಾರ್ಥ ಬಡಾವಣೆಯ ವಿಶ್ವ(28), ಮನೋಜ್(28) ಹಾಗೂ ಬೆಂಗಳೂರಿನ ಗಣೇಶ್ (30) ಎಂದು ಗುರುತಿಸಲಾಗಿದೆ. ಈ ಮೂವರ ಜತೆಗಿದ್ದ ಇನ್ನಿಬ್ಬರು ಆಸ್ಪತ್ರೆಯಲ್ಲಿದ್ದಾರೆ. ಇವರ ಜತೆಗೆ ಇನ್ನೂ ಮೂವರು ಕೂಡಾ ಶಿರಡಿಗೆ ಒಟ್ಟಿಗೆ ತೆರಳಿದ್ದರು ಎಂದು ತಿಳಿದು ಬಂದಿದೆ.
ಕಳೆದ ಗುರುವಾರ ಎರಡು ಕಾರಿನಲ್ಲಿ ಒಟ್ಟು ಎಂಟು ಜನ ತೆರಳಿದ್ದರು.ಈ ಪೈಕಿ ಮಾರುತಿ ಸ್ವಿಫ್ಟ್ ಕಾರಿನಲ್ಲಿದ್ದ ಮೂವರು ಮೃತಪಟ್ಟು, ಇಬ್ಬರು ಆಸ್ಪತ್ರೆ ಸೇರಿದ್ದರೆ, ಇನ್ನೊಂದು ಕಾರಿನಲ್ಲಿದ್ದ ಮೂವರು ಅಪಾಯದಿಂದ ಪಾರಾಗಿದ್ದಾರೆ. ಮೈಸೂರಿನಲ್ಲಿರುವ ಮೃತರ ಪೋಷಕರಿಗೆ ವಿಷಯ ತಿಳಿಸಲಾಗಿದ್ದು, ಪುಣೆಯತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.












Click it and Unblock the Notifications