ಭಾರತ್ ಬಂದ್; ಪುಣೆಯಲ್ಲಿ ಎಪಿಎಂಸಿಯಲ್ಲಿ ವಹಿವಾಟು ಎಂದಿನಂತೆ
ಪುಣೆ, ಡಿಸೆಂಬರ್ 08 : ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ನೀತಿಗಳ ವಿರುದ್ಧ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದೆ. ರೈತರು ಮಂಗಳವಾರ ಭಾರತ್ ಬಂದ್ಗೆ ಕರೆ ನೀಡಿದ್ದಾರೆ. ಹಲವಾರು ಸಂಘಟನೆಗಳು, ರಾಜಕೀಯ ಪಕ್ಷಗಳು ಬಂದ್ಗೆ ಬೆಂಬಲ ನೀಡಿವೆ.
ಮಂಗಳವಾರ ಬೆಳಗ್ಗೆ 11 ರಿಂದ 3 ಗಂಟೆಯ ತನಕ ಬಂದ್ ನಡೆಯಲಿದೆ. ವಿವಿಧ ರಾಜ್ಯಗಳಲ್ಲಿ ರೈತರು, ವಿವಿಧ ಸಂಘಟನೆಗಳು ಬೆಳಗ್ಗೆಯಿಂದಲೇ ಪ್ರತಿಭಟನೆ ಆರಂಭಿಸಿದ್ದಾರೆ. ರಸ್ತೆ ತಡೆಯನ್ನು ನಡೆಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಹಾರಾಷ್ಟ್ರದ ಪುಣೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ಎಂದಿನಂತೆ ನಡೆದಿದೆ. "ನಾವು ಬಂದ್ಗೆ ಬೆಂಬಲ ನೀಡುತ್ತಿದ್ದೇವೆ" ಎಂದು ವ್ಯಾಪಾರಿಗಳು ಹೇಳಿದ್ದಾರೆ. ಆದರೆ, ಎಪಿಎಂಸಿಗೆ ಬಂದ ಹಣ್ಣು ಮತ್ತು ತರಕಾರಿಗಳನ್ನು ಕೊಂಡುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.

"ಬೇರೆ ರಾಜ್ಯಗಳಿಂದ ಆಗಮಿಸುವ ಉತ್ಪನ್ನಗಳನ್ನು ಕೊಳ್ಳಲು ಎಪಿಎಂಸಿಯನ್ನು ತೆರೆಯಲಾಗಿದೆ. ಅದನ್ನು ಕೊಂಡುಕೊಂಡು ಸಂಗ್ರಹ ಮಾಡಲಾಗುತ್ತದೆ. ಅವುಗಳ ವ್ಯಾಪಾರ ನಾಳೆ ನಡೆಯಲಿದೆ" ಎಂದು ವ್ಯಾಪಾರಿಗಳು ಹೇಳಿದ್ದಾರೆ. ಎಪಿಎಂಸಿ ಬಾಗಿಲು ತೆರೆದಿದ್ದರೂ ಸಹ ಜನರ ಸಂಚಾರ ಕಡಿಮೆ ಇದೆ.
ಸ್ವಾಭಿಮಾನಿ ಸಂಘಟನೆ ಸದಸ್ಯರು ಮಹಾರಾಷ್ಟ್ರದಲ್ಲಿ ಭಾರತ್ ಅಂಗವಾಗಿ ರೈಲುಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದು ರೈಲು ಸಂಚಾರಕ್ಕೆ ಅವಕಾಶವನ್ನು ಮಾಡಿಕೊಟ್ಟರು.

ದೆಹಲಿ-ಹರ್ಯಾಣ, ಉತ್ತರ ಪ್ರದೇಶ-ದೆಹಲಿ ಗಡಿಯಲ್ಲಿ ಸಾವಿರಾರು ರೈತರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ರೈತರ ಜೊತೆ ಕೇಂದ್ರ ಸರ್ಕಾರ ನಡೆಸಿದ 5 ಸುತ್ತಿನ ಮಾತುಕತೆ ವಿಫಲವಾಗಿದೆ. ಡಿಸೆಂಬರ್ 9ರಂದು 6ನೇ ಸುತ್ತಿನ ಮಾತುಕತೆಗೆ ದಿನಾಂಕ ನಿಗದಿಯಾಗಿದೆ.












Click it and Unblock the Notifications