ಐಟಿ ಅಧಿಕಾರಿಗಳಿಂದ ಅನುರಾಗ್ ಕಶ್ಯಪ್, ತಾಪ್ಸಿ ಪನ್ನು ವಿಚಾರಣೆ
ಪುಣೆ, ಮಾರ್ಚ್ 3: ಬಿಜೆಪಿ ಸರ್ಕಾರದ ಕಟು ಟೀಕಾಕಾರರಾದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಮತ್ತು ನಟಿ ತಾಪ್ಸಿ ಪನ್ನು ಅವರ ವಿರುದ್ಧ ತೆರಿಗೆ ವಂಚನೆ ಆರೋಪದಲ್ಲಿ ನಡೆದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಬಳಿಕ ಅವರನ್ನು ಪುಣೆಯಲ್ಲಿ ವಿಚಾರಣೆಗೆ ಒಳಪಡಿಸಲಾಗಿದೆ.
ಮುಂಬೈ ಮತ್ತು ಪುಣೆಗಳಲ್ಲಿನ ಸುಮಾರು 30 ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅನುರಾಗ್ ಕಶ್ಯಪ್, ನಿರ್ಮಾಪಕರಾದ ವಿಕಾಸ್ ಬಾಹ್ಲ್ ಮತ್ತು ಮಧು ಮಾಂಟೆನಾ ಸಹ ಮಾಲೀಕತ್ವದಲ್ಲಿ ಸ್ಥಾಪನೆಯಾಗಿದ್ದ ಮತ್ತು ಪ್ರಸ್ತುತ ಅಸ್ತಿತ್ವದಲ್ಲಿಲ್ಲದ ಫ್ಯಾಂಟಂ ಫಿಲಂಸ್ನ ಕಚೇರಿ ಮತ್ತು ಹಾಗೂ ಪ್ರತಿಭಾನ್ವೇಷಣಾ ಸಂಸ್ಥೆಗಳ ಮೇಲೆಯೂ ದಾಳಿ ನಡೆಸಲಾಗಿದೆ.
ಟ್ಯಾಲೆಂಟ್ ಏಜೆನ್ಸಿಗಳಾದ ಎಕ್ಸೀಡ್ ಎಂಟರ್ಟೈನ್ಮೆಂಟ್ ಮತ್ತು ಕ್ವಾನ್ ಕಚೇರಿಗಳಲ್ಲಿಯೂ ಪರಿಶೀಲನೆ ನಡೆಸಲಾಗಿದೆ. ಎಕ್ಸೀಡ್ ಸಂಸ್ಥೆಯನ್ನು ಹಲವು ವರ್ಷಗಳಿಂದ ಸೈಫ್ ಅಲಿ ಖಾನ್ ನಿಭಾಯಿಸುತ್ತಿದ್ದಾರೆ.

'ತಮಗೆ ದೊರೆತ ಮಾಹಿತಿಗಳ ಆಧಾರದಲ್ಲಿ ಆದಾಯ ತೆರಿಗೆ ಇಲಾಖೆಯು ಕೆಲವರನ್ನು ವಿಚಾರಣೆಗೆ ಒಳಪಡಿಸಿದೆ. ಈ ಪ್ರಕರಣ ಬಳಿಕ ನ್ಯಾಯಾಲಯಕ್ಕೆ ಹೋಗಲಿದೆ' ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಅವರ ಮೇಲಿನ ಐಟಿ ದಾಳಿಗಳ ಹಿಂದೆ ಅವರ ರಾಜಕೀಯ ದೃಷ್ಟಿಕೋನಗಳಿಗೆ ಸಂಬಂಧವಿದೆ ಎಂಬ ಆರೋಪವನ್ನು ಅವರು ಅಲ್ಲಗಳೆದಿದ್ದಾರೆ.
ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ಅವರ ಸ್ಥಳಗಳ ಮೇಲೆ ಐಟಿ ದಾಳಿ ನಡೆಸಲಾಗಿದೆ. ಅವರಿಬ್ಬರೂ ಮೋದಿ ಸರ್ಕಾರದ ವಿರುದ್ಧ ಧ್ವನಿಗಳನ್ನು ಎತ್ತಿದ್ದರು. ತಮ್ಮ ವಿರುದ್ಧ ಎತ್ತುವ ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನವಾಗಿ ಐಟಿ ದಾಳಿ ನಡೆಸಲಾಗಿದೆ ಎಂದು ಎನ್ಸಿಪಿ ಆರೋಪಿಸಿದೆ.












Click it and Unblock the Notifications