ಸಂಸತ್ತಿನಲ್ಲಿ ಕಳ್ಳತನ!: ತೇಜಸ್ವಿ ಯಾದವ್ ವಿಡಿಯೋ ಟ್ವೀಟ್
ಪಾಟ್ನಾ, ಡಿಸೆಂಬರ್ 05: ಸಂಸತ್ತಿನಲ್ಲಿ ಕಳ್ಳತನ ನಡೆದಿದೆ ಎಂದು ಆರೋಪ ಮಾಡಿ ಬಿಹಾರದ ತೇಜಸ್ವಿ ಯಾದವ್ ಟ್ವೀಟ್ ಒಂದನ್ನು ಮಾಡಿದ್ದಾರೆ. ಭಾರತೀಯ ಸಂವಿಧಾನದ ಪೀಠಿಕೆಯಲ್ಲಿನ 'ಸಮಾಜವಾದಿ' ಎಂಬ ಪದವನ್ನು ಬದಲಾಯಿಸುವ ಕೇಂದ್ರದ ಪ್ರಸ್ತಾಪವನ್ನು ಟೀಕೆ ಮಾಡಿರುವ ತೇಜಸ್ವಿ ಯಾದವ್ 'ಕಳ್ಳತನ' ಎಂದು ಆರೋಪ ಮಾಡಿದ್ದಾರೆ.
"ಭಾರತೀಯ ಸಂವಿಧಾನದ ಪೀಠಿಕೆಯಿಂದ ಸಮಾಜವಾದಿ ಪದವನ್ನು ತೆಗೆದುಹಾಕುವ ಮಸೂದೆಯನ್ನು ನಿನ್ನೆ ಸಂಸತ್ತಿನಲ್ಲಿ ಮಂಡಿಸಿದಾಗ ಬಿಜೆಪಿ ಸರ್ಕಾರದ ಕಳ್ಳತನ ಸಿಕ್ಕಿಬಿದ್ದಿದೆ," ಎಂದು ತೇಜಸ್ವಿ ಯಾದವ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಪಕ್ಷದ ಸಂಸದರು ಮಸೂದೆಯನ್ನು ವಿರೋಧಿಸಿದರು ಮತ್ತು ಅದು ಅಂಗೀಕಾರವಾಗದಂತೆ ನೋಡಿಕೊಂಡರು ಎಂದು ಆರ್ಜೆಡಿ ನಾಯಕ ಹೇಳಿದರು.
ತೇಜಸ್ವಿ ಯಾದವ್ ಉಲ್ಲೇಖಿಸಿರುವ ಸಂವಿಧಾನ (ತಿದ್ದುಪಡಿ) ಮಸೂದೆಯನ್ನು ಬಿಜೆಪಿ ಸಂಸದ ಕೆಜೆ ಅಲ್ಫೋನ್ಸ್ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿದರು. ಖಾಸಗಿ ಸದಸ್ಯರ ಈ ಮಸೂದೆಯು ಪೀಠಿಕೆಯಲ್ಲಿನ ಸಮಾಜವಾದಿ ಪದವನ್ನು ಬದಲಾಯಿಸಲು ಪ್ರಸ್ತಾಪ ಮಾಡುತ್ತದೆ.

ತೇಜಸ್ವಿ ಯಾದವ್ ಟ್ವೀಟ್ನಲ್ಲಿ ಏನಿದೆ?
"ಕೇಂದ್ರದ ಬಿಜೆಪಿ ಸರಕಾರ ಸಂವಿಧಾನ ಬದಲಿಸುವ ಕಳ್ಳತನ ನಿನ್ನೆ ಸಂಸತ್ತಿನಲ್ಲಿ ಸಿಕ್ಕಿಬಿದ್ದಿದೆ. ಸಂವಿಧಾನ ತಿದ್ದುಪಡಿ ವಿಧೇಯಕ ಮಂಡಿಸಿ ಬಿಜೆಪಿ ಸರ್ಕಾರ ಸಂವಿಧಾನದ ಆತ್ಮವಾದ ಪೀಠಿಕೆಯಿಂದ ಸಮಾಜವಾದಿ ಎಂಬ ಪದವನ್ನು ತೆಗೆದು ಹಾಕುವ ಯತ್ನ ಮಾಡಿದೆ, ಆದರೆ ನಮ್ಮ ಎಚ್ಚೆತ್ತ ಸದಸ್ಯರು ಇದಕ್ಕೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿ, ಪ್ರತಿಭಟಿಸಿದ್ದಾರೆ. ಅದರಿಂದಾಗಿ ಈ ಮಸೂದೆಯನ್ನು ವಾಪಾಸ್ ಪಡೆಯಲಾಗಿದೆ (ಅಂಗೀಕಾರ ಮಾಡಲಾಗಿಲ್ಲ)," ಎಂದು ತಿಳಿಸಿದ್ದಾರೆ. ಹಾಗೆಯೇ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ರಾಜ್ಯಸಭಾ ಉಪ ಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಶುಕ್ರವಾರ ಆರಂಭದಲ್ಲಿ ಮಸೂದೆಯನ್ನು ಪರಿಚಯಿಸಲು ಅನುಮತಿ ನೀಡಿದ್ದರು. ಆದರೆ ನಂತರ ಆರ್ಜೆಡಿ ಸಂಸದ ಮನೋಜ್ ಝಾ ಮತ್ತು ಎಂಡಿಎಂಕೆಯ ವೈಕೊ ಅವರ ಪ್ರತಿಭಟನೆಯ ನಂತರ ಅದರ ನಿರ್ಧಾರವನ್ನು ಕಾಯ್ದಿರಿಸಿದರು.
ಶೇ 52ರಷ್ಟು ಕಲಾಪದ ಅವಧಿ ವ್ಯರ್ಥ
ಕಳೆದ ಒಂದು ವಾರ ನಡೆದ ಚಳಿಗಾಲದ ರಾಜ್ಯಸಭೆ ಅಧಿವೇಶನದ ಕಲಾಪದಲ್ಲಿ ಶೇಕಡ 52ರಷ್ಟು ಸಮಯವು ಪ್ರತಿಭಟನೆ ಹಾಗೂ ಬೇರೆ ಅಡ್ಡಿಗಳಿಂದಾಗಿ ವ್ಯರ್ಥವಾಗಿದೆ. ಆದರೆ ಗುರುವಾರ ಹಾಗೂ ಶುಕ್ರವಾರ ಗಮನಾರ್ಹವಾಗಿ ಸದನದಲ್ಲಿ ಚಟುವಟಿಕೆಗಳು ನಡೆದಿದ್ದು, ಅಧಿವೇಶನದ ಕಾರ್ಯಚಟುವಟಿಕೆಗೆ ಸಹಜತೆಗೆ ಮರಳುವ ಭರವಸೆಯನ್ನು ನೀಡಿದೆ. ಮುಂಗಾರು ಅಧಿವೇಶನದಲ್ಲಿ ಕೊನೆಯ ದಿನದಲ್ಲಿ ಗದ್ದಲ ಉಂಟು ಮಾಡಿದ ಕಾರಣದಿಂದಾಗಿ 12 ಮೇಲ್ಮನೆ ಸದಸ್ಯರನ್ನು ಅಮಾನತುಗೊಳಿಸಲಾಗಿದೆ. ಈ ವಿಚಾರವನ್ನು ಹಾಗೂ ಹಲವಾರು ವಿಚಾರಗಳನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷದ ಸಂಸದರು ಪ್ರತಿಭಟನೆ ನಡೆಸುತ್ತಿದ್ದಾರೆ. ವಿರೋಧ ಪಕ್ಷದ ನಾಯಕರುಗಳು ಮುಂಗಾರು ಅಧಿವೇಶನದಲ್ಲಿ ಗದ್ದಲ ಉಂಟು ಮಾಡಿದ್ದಾರೆ ಎಂದು ಆರೋಪ ಮಾಡಿ ಈ ಚಳಿಗಾಲ ಅಧಿವೇಶನದಿಂದ ಸಂಸದರನ್ನು ಅಮಾನತು ಮಾಡುವ ಕ್ರಮವು "ಪ್ರಜಾಪ್ರಭುತ್ವ ವಿರೋಧಿ" ಎಂದು ಟೀಕೆ ಮಾಡುತ್ತಿದ್ದಾರೆ. ಈ ನಡುವೆ ಸಭಾಪತಿ ಎಂ ವೆಂಕಯ್ಯ ನಾಯ್ಡು ಈ ಅಮಾನತು ಆದೇಶವನ್ನು ಹಿಂದಕ್ಕೆ ಪಡೆಯಲು ನಿರಾಕರಿಸಿದ್ದಾರೆ. ಅಮಾನತುಗೊಂಡ ಸದಸ್ಯರು "ಪಶ್ಚಾತ್ತಾಪ ವ್ಯಕ್ತಪಡಿಸಿಲ್ಲ" ಎಂದು ಒತ್ತಿ ಹೇಳಿದರು. ಕಳೆದ ವಾರದಲ್ಲಿ ಸದನವು ನಿಗದಿತ ಸಮಯದ ಶೇಕಡಾ 47.70 ರಷ್ಟು ಸಮಯ ಮಾತ್ರ ಸರಿಯಾಗಿ ನಡೆದಿದೆ ಎಂದು ಪ್ರಕಟಣೆಯು ಉಲ್ಲೇಖ ಮಾಡಿದೆ. ಸದನವು ಗುರುವಾರ ನಿಗದಿತ ಸಮಯಕ್ಕಿಂತ 33 ನಿಮಿಷಗಳ ಕಾಲ ಹೆಚ್ಚಿಗೆ ನಡೆದ ಕಾರಣದಿಂದಾಗಿ ಈ ವಾರದಲ್ಲಿ ಒಟ್ಟಾರೆಯಾಗಿ ಸದನ ಸರಿಯಾದ ರಿತಿಯಲ್ಲಿ ನಡೆದ ಸಮಯವು ಶೇಕಡಾ 49.70 ಕ್ಕೆ ಏರಿಕೆ ಆಗಿದೆ ಎಂದು ಕೂಡಾ ಪ್ರಕಟಣೆಯು ಹೇಳಿದೆ. ಗುರುವಾರ ಹಾಗೂ ಶುಕ್ರವಾರ ಅಧಿಕವಾಗಿ ಸದನವು ನಡೆದಿದೆ. ಗುರುವಾ ಶೇಕಡ 95 ರಷ್ಟು ಸದನವು ಸರಿಯಾಗಿ ನಡೆದಿದ್ದು, ಶುಕ್ರವಾರ ಶೇಕಡ 100 ಸದನವು ಸರಿಯಾಗಿ ನಡೆದಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications