ಬಿಹಾರದಲ್ಲಿ ಬದಲಾವಣೆ ತಂದ ಐಎಎಸ್ ಅಧಿಕಾರಿ ಪತ್ನಿ ಚುನಾವಣಾ ಕಣಕ್ಕೆ
ಪಾಟ್ನಾ, ಅಕ್ಟೋಬರ್ 12: ಕೋವಿಡ್ ಸೋಂಕು ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಯಿತು. ಬೇರೆ-ಬೇರೆ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕರು ತವರಿಗೆ ವಾಪಸ್ ಆದರು. ಅವರಿಗೆ ಆಹಾರದ ಕಿಟ್ ನೀಡುವುದು, ಗ್ರಾಮದಲ್ಲೇ ಕೆಲಸ ಕೊಡುವ ಜವಾಬ್ದಾರಿ ಸ್ಥಳೀಯ ಆಡಳಿತ ಮೇಲೆ ಬಿತ್ತು.
ಗ್ರಾಮ ಪ್ರಧಾನ್ ಅಥವ ಮುಖ್ಯಸ್ಥರ ಮೇಲೆ ಕೋವಿಡ್ ಸಂದರ್ಭದಲ್ಲಿ ಹಲವಾರು ಜವಾಬ್ದಾರಿಗಳು ಬಿದ್ದವು. ಬಿಹಾರದ ಸಿಂಘವಾಹಿನಿ ಪಂಚಾಯತ್ನಲ್ಲೂ ಇದೇ ಪರಿಸ್ಥಿತಿ ಇತ್ತು. ರಿತು ಜೈಸ್ವಾಲ್ ಈ ಜವಾಬ್ದಾರಿಯನ್ನು ತೆಗೆದುಕೊಂಡರು. ಗ್ರಾಮದಲ್ಲಿ ಬದಲಾವಣೆ ತಂದ ರಿತು ಈಗ ಬಿಹಾರ ಚುನಾವಣಾ ಕಣಕ್ಕೆ ಇಳಿದಿದ್ದಾರೆ.
43 ವರ್ಷದ ರಿತು ಜೈಸ್ವಾಲ್ ಅವರ ವ್ಯಾಪ್ತಿಗೆ ಏಳು ಹಳ್ಳಿಗಳು ಬರುತ್ತಿತ್ತು. ಕೋವಿಡ್ ಸಮಯದಲ್ಲಿ ಹಳ್ಳಿಯ ಜನರು ಹೇಗೆ ಸಹಕಾರ ನೀಡುತ್ತಾರೆ ಎನ್ನುವ ಆತಂಕವೂ ಅವರಲ್ಲಿತ್ತು. ಹಳ್ಳಿಯ ಮನೆಗಳ ಗೋಡೆಗಳ ಮೇಲೆ ನೀವು ಕೋವಿಡ್ ನಿಯಮ ಪಾಲಿಸಿ ಎಂಬ ಪಾಂಪ್ಲೆಟ್ ನೋಡಬಹುದು.
ಗುಟ್ಕಾ ಉಗುಳಿದರೆ 500 ರೂ. ದಂಡ, ಲಾಕ್ ಡೌನ್ ಜಾರಿಯಲ್ಲಿರುವ ತನಕ ನಿಯಮ ಪಾಲಿಸಿ, ಯಾರೂ ಅನಗತ್ಯವಾಗಿ ಸಂಚಾರ ನಡೆಸುವಂತಿಲ್ಲ ಇಂತಹ ಫಲಕಗಳು ಕಾಣುತ್ತಿವೆ. ಕೋವಿಡ್ ಸಂದರ್ಭದಲ್ಲಿ ಅಗತ್ಯವಿದ್ದ ಮಾಸ್ಕ್ ತಯಾರು ಮಾಡಲು ಗ್ರಾಮದ ಮಹಿಳೆಯರು ದುಡಿಯುತ್ತಿದ್ದಾರೆ.

ರಿತು ಜೈಸ್ವಾಲ್ ತಂದ ಬದಲಾವಣೆ : ರಿತು ಜೈಸ್ವಾಲ್ ಐಎಎಸ್ ಅಧಿಕಾರಿಯೊಬ್ಬರ ಪತ್ನಿ. ದಕ್ಷಿಣ ದೆಹಲಿಯಲ್ಲಿ ವಾಸಿಸುತ್ತಿದ್ದರು. 2013ರಲ್ಲಿ ಮೊದಲ ಬಾರಿಗೆ ಅವರು ಸಿಂಘವಾಹಿನಿ ಪಂಚಾಯತ್ಗೆ ಭೇಟಿ ನೀಡಿದ್ದರು. ಏಳು ಹಳ್ಳಿಗಳಲ್ಲಿ ಆಗ ಪ್ರವಾಹ ಪರಿಸ್ಥಿತಿ ಇತ್ತು. ಪಾದ ಮುಚ್ಚುವ ಕೊಳಚೆ ನೀರಿನಲ್ಲಿ ಅವರು ಮೊದಲು ಗ್ರಾಮವನ್ನು ಕಂಡಿದ್ದರು.
ವಿದ್ಯುತ್ ವ್ಯವಸ್ಥೆ ಇಲ್ಲ, ಕುಡಿಯುವ ನೀರಿಲ್ಲ, ಶೌಚಾಲಯ ವ್ಯವಸ್ಥೆ ಇಲ್ಲ, ಗ್ರಾಮಕ್ಕೆ ಬೇಕಾಗಿದ್ದ ಯಾವ ಮೂಲ ಸೌಕರ್ಯವೂ ಆಗ ಇರಲಿಲ್ಲ. ಗ್ರಾಮದ ಪರಿಸ್ಥಿತಿ ಸುಧಾರಿಸಲು ಪ್ರತಿ 5 ಅಥವ 6 ತಿಂಗಳಿಗೊಮ್ಮೆ ರಿತು ಜೈಸ್ವಾಲ್ ಆಗಮಿಸಲು ಆರಂಭಿಸಿದರು. 2016ರಲ್ಲಿ ಅವರು ನಗರ ಜೀವನ ಬಿಟ್ಟು ಹಳ್ಳಿಗೆ ಆಗಮಿಸಿದರು. ಗ್ರಾಮದ ಗ್ರಾಮ್ ಪ್ರಧಾನ್ ಆದರು.
ಗ್ರಾಮ ಪ್ರಧಾನ್ ಆಗುವ ಮೊದಲೇ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಯತ್ನವನ್ನು ಅವರು ಆರಂಭಿಸಿದ್ದರು. 2017ರಲ್ಲಿ ಎಲ್ಲಾ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಯಿತು. ರಿತು ಜೈಸ್ವಾಲ್ ಹಳ್ಳಿಗೆ ಆಗಮಿಸಿದ ಮೂರು ತಿಂಗಳಿನಲ್ಲಿಯೇ ಹಳ್ಳಿಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಣೆ ಮಾಡಲಾಯಿತು.

2016ರಲ್ಲಿ ಜುಲೈನಿಂದ ಸೆಪ್ಟೆಂಬರ್ ಅವಧಿಯಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2,500 ಶೌಚಾಲಯಗಳನ್ನು ನಿರ್ಮಾಣ ಮಾಡಲಾಯಿತು. 'ಆದರ್ಶ ಯುವ ಸರಪಂಚ್' ಪ್ರಶಸ್ತಿಯನ್ನು ಅದೇ ವರ್ಷ ಜೈಸ್ವಾಲ್ ಪಡೆದರು. ಬಿಹಾರದಲ್ಲಿ ಈ ಪ್ರಶಸ್ತಿ ಪಡೆದ ಮೊದಲ ಗ್ರಾಮ ಪ್ರಧಾನ್ ಜೈಸ್ವಾಲ್.
ನಾಲ್ಕು ವರ್ಷಗಳ ಕಾಲ ಗ್ರಾಮ ಪ್ರಧಾನ್ ಆಗಿದ್ದ ರಿತು ಜೈಸ್ವಾಲ್ ಉತ್ತಮ ರಸ್ತೆಗಳನ್ನು ನಿರ್ಮಾಣ ಮಾಡಿದರು. ಗ್ರಾಮಕ್ಕೆ ವಿದ್ಯುತ್ ವ್ಯವಸ್ಥೆ ಮಾಡಿದರು. ಮೂಡನಂಬಿಕೆಗಳನ್ನು ಜನರು ನಂಬದಂತೆ ಬದಲಾವಣೆ ಮಾಡಿದರು, ಮಹಿಳೆಯರ ಮೇಲೆ ನಡೆಯುತ್ತಿದ್ದ ಶೋಷಣೆಯನ್ನು ಕಡಿಮೆ ಮಾಡಿದರು.
"ಮಹಿಳೆಯರನ್ನು ಸ್ವಾವಲಂಬಿ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಆದ್ದರಿಂದ, ಟೈಲರಿಂಗ್ ಕಲಿಸಲು ಆರಂಭಿಸಿದೆವು. 10 ಮತ್ತು 12ನೇ ತರಗತಿ ಪಾಸು ಮಾಡಲು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದೆವು" ಎಂದು ಜೈಸ್ವಾಲ್ ಹೇಳಿದ್ದಾರೆ.
"ಮಹಿಳಾ ಸ್ವಾವಲಂಬನೆ ಭಾಗವಾಗಿ ಕುರಿ ಮತ್ತು ಹಸುಗಳನ್ನು ಸಾಕಲು ಸಾಲ ಕೊಡಿಸಿದ್ದಾರೆ. ಜೈಸ್ವಾಲ್ ಅವರು ನಮ್ಮ ಗ್ರಾಮವನ್ನು ಬದಲಾವಣೆ ಮಾಡಿದ್ದು ಮಾತ್ರವಲ್ಲ. ನಾವು ಮತದಾನ ಮಾಡುವ ವಿಧಾನವನ್ನು ಬದಲಾಯಿಸಿದ್ದಾರೆ. ಹಿಂದೆ ನಾವು ನಮ್ಮ ಜಾತಿಯ ಜನರಿಗೆ ಮಾತ್ರ ಮತ ಹಾಕುತ್ತಿದ್ದೆವು" ಎಂದು ಸ್ಥಳೀಯರು ತಿಳಿಸಿದ್ದಾರೆ.












Click it and Unblock the Notifications