ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇ ತಪ್ಪಾಯ್ತಾ? 4 ಮಕ್ಕಳ ಮುಂದೆಯೇ ಪತ್ನಿಯ ಕತ್ತು ಸೀಳಿ ಕೊಂದ ಪತಿ
ತಿರುವನಂತಪುರಂ: ಕೇರಳದ ತಿರುವನಂತಪುರಂ ಬಳಿ ನಡೆದ ಭೀಕರ ಘಟನೆಯೊಂದು ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ. ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ, ಪೊಲೀಸರ ಸಂಧಾನ ಮಾತುಕತೆಯ ನಡುವೆಯೂ ಮುಂಜಾನೆ ವೇಳೆ ಈ ಭೀಕರ ಹತ್ಯೆ ನಡೆದಿದೆ. ತಾಯಿಯನ್ನು ಕಳೆದುಕೊಂಡು ಅನಾಥವಾಗಿರುವ ಮಕ್ಕಳು ನೀಡಿದ ಆಘಾತಕಾರಿ ಮಾಹಿತಿಯ ಆಧಾರದ ಮೇಲೆ, ಘಟನಾ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಾರಿಯಾಗಿರುವ ಪತಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ತಿರುವನಂತಪುರಂ ಜಿಲ್ಲೆಯ ವಟ್ಟಿಯೂರ್ಕಾವು ಪ್ರದೇಶದ 46 ವರ್ಷದ ಎಲೆಕ್ಟ್ರಿಷಿಯನ್ ಸುರೇಶ್ ಹಾಗೂ ಮನ್ನಾಂತಲೈ ಮೂಲದ 36 ವರ್ಷದ ಹಸೀನಾ ಬೀವಿ ವಿವಾಹವಾಗಿದ್ದು, ದಂಪತಿಗೆ ನಾಲ್ವರು ಮಕ್ಕಳಿದ್ದಾರೆ. ಕಳೆದ 4 ತಿಂಗಳಿನಿಂದ ಇವರು ನಾಲಾಂಚಿರಾ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಕಳೆದ ಕೆಲವು ಸಮಯದಿಂದ ದಂಪತಿಗಳ ನಡುವೆ ತೀವ್ರ ಕೌಟುಂಬಿಕ ಕಲಹಗಳು ನಡೆಯುತ್ತಿದ್ದವು. ಎಲೆಕ್ಟ್ರಿಷಿಯನ್ ಸುರೇಶ್ಗೆ ತನ್ನ ಪತ್ನಿಯ ನಡತೆಯ ಮೇಲಿದ್ದ ನಿರಂತರ ಅನುಮಾನವೇ ಈ ಜಗಳಗಳಿಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ, ಪತಿಯೊಂದಿಗೆ ಕೋಪಗೊಂಡು ಕೆಲವು ದಿನಗಳ ಹಿಂದೆ ಹಸೀನಾ ಬೀವಿ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದರು. ಆಕೆ ಕಳೆದ ವಾರವಷ್ಟೇ ಮತ್ತೆ ಮನೆಗೆ ಹಿಂದಿರುಗಿದ್ದರು. ಆಕೆ ಬಂದಾಗಿನಿಂದ ದಂಪತಿಗಳ ನಡುವಿನ ಜಗಳಗಳು ಮತ್ತಷ್ಟು ತೀವ್ರಗೊಳ್ಳಲು ಪ್ರಾರಂಭಿಸಿದವು. ಈ ಸಂಘರ್ಷ ತಾರಕಕ್ಕೇರಿದಾಗ, ಕಳೆದ ಮಂಗಳವಾರ ಹಸೀನಾ ಬೀವಿ ತನ್ನ ಪತಿಯ ವಿರುದ್ಧ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಮನ್ನಾಂತಲೈ ಪೊಲೀಸರು, ಇಬ್ಬರನ್ನೂ ಠಾಣೆಗೆ ಕರೆಸಿ ಮಾತನಾಡಿ, ಆಪ್ತ ಸಮಾಲೋಚನೆ (ಕೌನ್ಸಿಲಿಂಗ್) ನೀಡಿ, ರಾಜಿ ಸಂಧಾನದ ಮೂಲಕ ಮನೆಗೆ ಕಳುಹಿಸಿದ್ದರು.
ಈಗಾಗಲೇ ಪತ್ನಿಯ ಮೇಲೆ ಕೋಪಗೊಂಡಿದ್ದ ಸುರೇಶ್ಗೆ, ಆಕೆ ಪೊಲೀಸರಿಗೆ ದೂರು ನೀಡಿದ್ದು ಮತ್ತಷ್ಟು ಆಕ್ರೋಶ ತರಿಸಿತ್ತು. ಪೊಲೀಸರು ಹೇಳಿದ ಕಿವಿಮಾತು ಯಾವುದನ್ನೂ ಆತ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಮನೆಗೆ ಬಂದ ಸ್ವಲ್ಪ ಸಮಯದಲ್ಲೇ ಮತ್ತೆ ಇಬ್ಬರ ನಡುವೆ ತೀವ್ರ ವಾಗ್ವಾದ ಶುರುವಾಗಿ ಇಡೀ ರಾತ್ರಿ ಮುಂದುವರಿದಿದೆ. ನಿನ್ನೆ ಮುಂಜಾನೆ ಸುಮಾರು 5 ಗಂಟೆ ಸುಮಾರಿಗೆ ಮನೆಯಲ್ಲಿ ಜಗಳ ತಾರಕಕ್ಕೇರಿದೆ. ಪತಿ-ಪತ್ನಿಯರ ಕಿರುಚಾಟ ಕೇಳಿ ನಿದ್ದೆಯಲ್ಲಿದ್ದ 4 ಮಕ್ಕಳೂ ಭಯದಿಂದ ಎಚ್ಚರಗೊಂಡಿದ್ದಾರೆ.
ಈ ವೇಳೆ ಆಕ್ರೋಶದ ಕಟ್ಟೆ ಒಡೆದ ಸುರೇಶ್, ಮನೆಯಲ್ಲಿದ್ದ ಚಾಕುವನ್ನು ತೆಗೆದುಕೊಂಡು ಬಂದು ತನ್ನ 4 ಮಕ್ಕಳು ಕಣ್ಣಾರೆ ಕಂಡು ಕಣ್ಣೀರು ಹಾಕುತ್ತಿದ್ದಾಗಲೇ, ಪತ್ನಿ ಹಸೀನಾ ಬೀವಿ ಕತ್ತನ್ನು ಬರ್ಬರವಾಗಿ ಸೀಳಿದ್ದಾನೆ. ಪತಿಯ ಈ ಹಠಾತ್ ಕ್ರೂರ ದಾಳಿಯನ್ನು ನಿರೀಕ್ಷಿಸದ ಹಸೀನಾ ಬೀವಿ, ರಕ್ತದ ಮಡುವಿನಲ್ಲಿ ಒದ್ದಾಡುತ್ತಾ ಕೆಲವೇ ನಿಮಿಷಗಳಲ್ಲಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಪತ್ನಿಯನ್ನು ಕೊಂದ ಮೇಲೂ ಯಾವುದೇ ಆತಂಕ, ಭಯವಿಲ್ಲದೆ ಸುರೇಶ್ ಆ ಕೊಲೆಗೈದ ಕತ್ತಿಯನ್ನು ವಾಶ್ಬೇಸಿನ್ನಲ್ಲಿ ತೊಳೆದು ಸ್ವಚ್ಛಗೊಳಿಸಿದ್ದಾನೆ. ನಂತರ ಬಾತ್ರೂಮ್ಗೆ ಹೋಗಿ ತನ್ನ ಕೈಗಳನ್ನೂ ತೊಳೆದುಕೊಂಡು, ಅಲ್ಲಿಂದ ತನ್ನ ಕಾರು ತೆಗೆದುಕೊಂಡು ಮಿಂಚಿನ ವೇಗದಲ್ಲಿ ಪರಾರಿಯಾಗಿದ್ದಾನೆ. ಹೆತ್ತ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಆಘಾತಕ್ಕೊಳಗಾಗಿ ಅಳುತ್ತಿದ್ದ ಮಕ್ಕಳ ಪೈಕಿ, ಹಿರಿಯ ಮಗಳು ತಕ್ಷಣ ಮನ್ನಾಂತಲೈ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ.
ಮಾಹಿತಿ ತಿಳಿದು ತಕ್ಷಣ ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮನೆಯ ಮೇಲಿನ ಮಹಡಿಯ ಮಲಗುವ ಕೋಣೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಹಸೀನಾ ಬೀವಿ ಮೃತದೇಹವನ್ನು ವಶಕ್ಕೆ ಪಡೆದರು. ನಂತರ ಮರಣೋತ್ತರ ಪರೀಕ್ಷೆಗಾಗಿ ತಿರುವನಂತಪುರಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮೃತದೇಹವನ್ನು ರವಾನಿಸಿದ್ದಾರೆ. ತಾಯಿಯನ್ನು ಕಳೆದುಕೊಂಡು, ತಂದೆಯ ಈ ಕ್ರೂರ ಮುಖವನ್ನು ಕಂಡು ಬೆಚ್ಚಿಬಿದ್ದಿರುವ 4 ಮಕ್ಕಳನ್ನು ಪೊಲೀಸರು ತಮ್ಮ ರಕ್ಷಣೆಗೆ ತೆಗೆದುಕೊಂಡಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪರಾರಿಯಾಗಿರುವ ಕ್ರೂರ ಪತಿ ಸುರೇಶ್ನನ್ನು ಬಂಧಿಸಲು ವಿಶೇಷ ತಂಡ ರಚಿಸಿ ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಕ್ಕಳ ಮುಂದೆಯೇ ನಡೆದ ಈ ಬರ್ಬರ ಕಗ್ಗೊಲೆ ಆ ಭಾಗದಲ್ಲಿ ಭಾರಿ ಶೋಕ ಹಾಗೂ ಆಘಾತ ಮೂಡಿಸಿದೆ.












Click it and Unblock the Notifications