"ಭ್ರಷ್ಟಾಚಾರದ ತನಿಖೆ ತಪ್ಪಿಸಿಕೊಳ್ಳಲು ನಿತೀಶ್ ನಿವೃತ್ತಿ ಮಾತು"!
ಪಾಟ್ನಾ, ನವೆಂಬರ್,05: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜಕೀಯ ನಿವೃತ್ತಿಯ ಮಾತನ್ನು ಆಡುವ ಮೂಲಕ ಪಲಾಯನ ಮಾಡುವುದಕ್ಕೆ ಬಯಸುತ್ತಿದ್ದಾರೆ ಎಂದು ಲೋಕಜನಶಕ್ತಿ ಪಕ್ಷದ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಆರೋಪಿಸಿದ್ದಾರೆ.
ವಿಧಾನಸಭಾ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ನಿವೃತ್ತಿ ಬಗ್ಗೆ ಸಿಎಂ ನಿತೀಶ್ ಕುಮಾರ್ ಘೋಷಿಸಿದ್ದಾರೆ. ಅಂದರೆ ಈ ಮೂಲಕ ತಮ್ಮ ರಾಜಕೀಯ ತಪ್ಪುಗಳನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಾವು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ಚಿರಾಗ್ ಕಿಡಿ ಕಾರಿದ್ದಾರೆ.
"ಒಬ್ಬ ನಾಯಕರಾಗಿ ಇದ್ದುಕೊಂಡು ಯುದ್ಧಭೂಮಿಯಿಂದ ಓಡಿ ಹೋಗುವುದು ಅಂದರೆ ಏನು ಅರ್ಥ. ಅವರನ್ನೇ ನೆಚ್ಚಿಕೊಂಡಿರುವ ಜನರು ಏನು ಮಾಡಬೇಕು. ಇಂಥ ನಿವೃತ್ತಿ ಮಾತುಗಳಿಂದ ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳುವುದಕ್ಕೆ ಸಾಧ್ಯವಿಲ್ಲ" ಎಂದು ಗುಡುಗಿದರು.

ಭ್ರಷ್ಟಾಚಾರದ ವಿರುದ್ಧ ತನಿಖೆ ನಿಶ್ಚಿತ:
ಬಿಹಾರದಲ್ಲಿ ಸಿಎಂ ನಿತೀಶ್ ಕುಮಾರ್ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣ ಮತ್ತು ಭ್ರಷ್ಟಾಚಾರದ ಬಗ್ಗೆ ತನಿಖೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಅವರು ನಿವೃತ್ತಿ ಮಾತು ಆಡುತ್ತಿದ್ದಾರೆ. ಆದರೆ ತನಿಖೆ ನಡೆಸುವುದು ಮಾತ್ರ ನಿಶ್ಚಿತ. ಭ್ರಷ್ಟಾಚಾರ ನಡೆದಿರುವುದು ತನಿಖೆ ವೇಳೆ ದೃಢಪಟ್ಟರೆ, ಶಿಕ್ಷೆ ಅನುಭವಿಸಬೇಕಾಗಿರುವುದೂ ನಿಶ್ಚಿತ ಎಂದು ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಸಿಎಂ ನಿತೀಶ್ ಕುಮಾರ್ ಹೇಳಿದ್ದೇನು?
2020ರ ಬಿಹಾರ ವಿಧಾನಸಭಾ ಚುನಾವಣೆಯೇ ತಮ್ಮ ಕೊನೆಯ ಚುನಾವಣೆ ಎಂದು ಸಿಎಂ ನಿತೀಶ್ ಕುಮಾರ್ ಘೋಷಿಸಿದ್ದರು. ಪುರ್ನಿಯಾದ ಧಂಧಹಾ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಈ ಬಾರಿ ಸ್ಪರ್ಧಿಸಿರುವುದೇ ತಮ್ಮ ಕೊನೆಯ ಚುನಾವಣೆ ಆಗಿರಲಿದೆ ಎಂದು ಘೋಷಿಸಿದ್ದಾರೆ. "ದಯವಿಟ್ಟು ಅರ್ಥ ಮಾಡಿಕೊಳ್ಳಿ, ಇಂದು ಚುನಾವಣಾ ಪ್ರಚಾರಕ್ಕೆ ಕೊನೆಯ ದಿನ. ಇದಾಗಿ ಎರಡು ದಿನಕ್ಕೆ ಮತದಾನ. ಮತ್ತು ಇದು ನಾನು ಸ್ಪರ್ಧಿಸುತ್ತಿರುವ ಕೊನೆಯ ಚುನಾವಣೆ. ಎಲ್ಲವೂ ಉತ್ತಮವಾಗಿ ನೆರವೇರಲಿದೆ" ಎಂದು ನಿತೀಶ್ ಕುಮಾರ್ ಹೇಳಿದ್ದರು.












Click it and Unblock the Notifications