ಬಿಜೆಪಿ ವಿರುದ್ಧ ನಿತೀಶ್ ಕುಮಾರ್ ಮುನಿಸು: ಮಂಗಳವಾರ ಬಿಹಾರ ಸರ್ಕಾರ ಭವಿಷ್ಯ ನಿರ್ಧಾರ?
ಪಟ್ನಾ, ಆಗಸ್ಟ್ 8: ಬಿಹಾರ ರಾಜ್ಯ ರಾಜಕೀಯದಲ್ಲಿ ಶೀಘ್ರದಲ್ಲೇ ಬದಲಾವಣೆಗಳಾಗುವ ಲಕ್ಷಣಗಳು ಗೋಚರಿಸುತ್ತಿವೆ. ಬಿಹಾರ ಮುಖ್ಯಮಂತ್ರಿ ಮತ್ತು ಜನತಾ ದಳ (ಸಂಯುಕ್ತ) ಮುಖ್ಯಸ್ಥ ನಿತೀಶ್ ಕುಮಾರ್ ಹಾಗೂ ಬಿಜೆಪಿ ನಡುವಿನ ಶೀತಲ ಸಮರ ತಾರಕಕ್ಕೇರುವ ಮುನ್ಸೂಚನೆ ಸಿಕ್ಕಿದೆ.
ಜುಲೈ 17ರಿಂದ ಈವರೆಗೆ ಬಿಜೆಪಿಯ ನಾಲ್ಕು ಕಾರ್ಯಕ್ರಮಗಳಿಗೆ ನಿತೀಶ್ ಕುಮಾರ್ ಗೈರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೀತಿ ಆಯೋಗದ ಸಭೆಗೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಜರಾಗಿದ್ದರು. ಆದರೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತ್ರ ಹಾಜರಾಗಿರಲಿಲ್ಲ. ಗೈರು ಹಾಜರಾಗಲು ಯಾವುದೇ ಸ್ಪಷ್ಟ ಕಾರಣ ನೀಡದೇ ಇದ್ದರು, ಕೋವಿಡ್ ನೆಪದಿಂದ ಸಭೆಗೆ ಹಾಜರಾಗುವುದನ್ನು ತಪ್ಪಿಸಿಕೊಂಡರು ಎಂದು ಮೂಲಗಳು ತಿಳಿಸಿವೆ. ಜುಲೈ 25 ರಂದು ನಿತೀಶ್ ಕುಮಾರ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು.
ಈ ಬೆಳವಣಿಗೆಗಳ ನಡುವೆಯೇ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಭಾನುವಾರ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೂರವಾಣಿ ಸಂಭಾಷಣೆ ವೇಳೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಸಮಯ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿಯಿಂದ ಅಂತರ ಕಾಯ್ದುಕೊಳ್ಳುತ್ತಿರುವ ನಿತೀಶ್ ಕುಮಾರ್
ಒಂದು ವೇಳೆ ಸೋನಿಯಾ ಗಾಂಧಿ ಅವರನ್ನು ನಿತೀಶ್ ಕುಮಾರ್ ಭೇಟಿ ಮಾಡಿದರೆ ದೇಶದ ಮತ್ತೊಂದು ರಾಜ್ಯದಲ್ಲಿ ರಾಜಕೀಯ ದೊಂಬರಾಟಕ್ಕೆ ಮುನ್ನುಡಿ ಬರೆದಂತಾಗುತ್ತದೆ. ಈಗಾಗಲೇ ನಿತೀಶ್ ಕುಮಾರ್ ಬಿಜೆಪಿ ವಿರುದ್ಧ ಮಾನಸಿಕವಾಗಿ ದೂರವಾಗಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ.
ಕಳೆದ ತಿಂಗಳು ನಿತೀಶ್ ಕುಮಾರ್ ಎನ್ಡಿಎ ಅಧ್ಯಕ್ಷೆ ದ್ರೌಪದಿ ಮುರ್ಮು ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಿಂದ ಕೂಡ ಹೊರಗುಳಿದಿದ್ದರು. ಅದಕ್ಕೂ ಮುನ್ನ, ಜುಲೈ 17ರಂದು ಹರ್ ಘರ್ ತಿರಂಗ ಅಭಿಯಾನಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆದಿದ್ದ ಮುಖ್ಯಮಂತ್ರಿಗಳ ಸಭೆಗೂ ಗೈರಾಗಿದ್ದ ನಿತೀಶ್ ಕುಮಾರ್ ಬದಲಿಗೆ ಬಿಜೆಪಿಯ ತಾರ್ಕಿಶೋರ್ ಪ್ರಸಾದ್ ಅವರನ್ನು ನಿಯೋಜಿಸಿದರು.
ನಿರ್ಗಮಿತ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ಔತಣಕೂಟಕ್ಕೂ ನಿತೀಶ್ ಕುಮಾರ್ ಹಾಜರಾಗಿರಲಿಲ್ಲ.

ಮಂಗಳವಾರ ಸರ್ಕಾರದ ಭವಿಷ್ಯ ನಿರ್ಧಾರ?
ಪ್ರಧಾನಿ ನೇತೃತ್ವದ ನೀತಿ ಆಯೋಗ ಸಭೆಗೆ ಗೈರು ಹಾಜರಾದ ನಂತರ ನಿತೀಶ್ ಕುಮಾರ್ ಸಂಯುಕ್ತ ಜನತಾ ದಳದ ಎಲ್ಲಾ ಶಾಸಕರು, ಸಂಸದರನ್ನು ಸಭೆಗೆ ಆಹ್ವಾನಿಸಿದ್ದಾರೆ. ಮಂಗಳವಾರ ಸಭೆ ನಡೆಯಲಿದ್ದು, ಮುಂದಿನ ಬೆಳವಣಿಗೆ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.
ಸಭೆಯ ಬಗ್ಗೆ ಮಾಹಿತಿ ನೀಡಿದ ಜೆಡಿಯು ಹಿರಿಯ ನಾಯಕ ಕೆಸಿ ತ್ಯಾಗಿ, ಮಂಗಳವಾರ ಪಕ್ಷದ ಸಂಸದೀಯ ಸಭೆ ನಡೆಯಲಿದ್ದು, ಇದರಲ್ಲಿ ಎಲ್ಲಾ ಸಂಸದರು, ಶಾಸಕರು ಮತ್ತು ಎಂಎಲ್ಸಿಗಳು ಭಾಗವಹಿಸಲಿದ್ದಾರೆ. ಇದು ಸಾಮಾನ್ಯ ಸಭೆ. ಇದಕ್ಕೆ ಹೆಚ್ಚಿನ ಅರ್ಥ ಕಲ್ಪಿಸುವ ಅಗತ್ಯವಿಲ್ಲ" ಎಂದು ಹೇಳಿದ್ದಾರೆ.
ಆದರೆ ಜೆಡಿಯು ಉನ್ನತ ಮೂಲಗಳ ಪ್ರಕಾರ ಬಿಜೆಪಿಯೊಂದಿಗೆ ಮೈತ್ರಿಗೆ ಅಂತ್ಯವಾಡುವ ಕಾಲ ಸಮೀಪಿಸಿದೆ ಎಂದು ಹೇಳಿದೆ. ಸಿಎಂ ನಿತೀಶ್ ಕುಮಾರ್ ಕರೆದಿರುವ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ.

ಆರ್ಸಿಪಿ ಸಿಂಗ್ ರಾಜೀನಾಮೆಯಿಂದ ಕೆರಳಿದ ಸಿಎಂ ನಿತೀಶ್ ಕುಮಾರ್
ಮಾಜಿ ಕೇಂದ್ರ ಸಚಿವ ಆರ್ಸಿಪಿ ಸಿಂಗ್ ಜೆಡಿಯುಗೆ ರಾಜೀನಾಮೆ ನೀಡಿದ ಒಂದು ದಿನದ ನಂತರ, ಭ್ರಷ್ಟಾಚಾರದ ಆರೋಪಗಳ ಕುರಿತು ಪಕ್ಷ ಅವರಿಂದ ವಿವರಣೆ ಕೇಳಿದೆ ಎಂದು ಕೆಲವು ವರದಿಗಳು ತಿಳಿಸಿವೆ.
ಆರ್ಸಿಪಿ ಸಿಂಗ್ ರಾಜೀನಾಮೆ ಕುರಿತು ಮಂಗಳವಾರದ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತ್ಯಾಗಿ ಹೇಳಿದ್ದಾರೆ. "ಈ ವಿಚಾರವನ್ನು ಚರ್ಚಿಸಲಾಗುವುದು ಮತ್ತು ಸಿಎಂ ನಿತೀಶ್ ಕುಮಾರ್ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಮತ್ತು ಅವರ ನಿರ್ಧಾರವನ್ನು ಪಕ್ಷ ಬೆಂಬಲಿಸುತ್ತದೆ." ಎಂದು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಜೆಡಿಯು ಮುಖ್ಯಸ್ಥರು ಅವರನ್ನು ಮೂರನೇ ಬಾರಿಗೆ ರಾಜ್ಯಸಭೆಗೆ ನಾಮನಿರ್ದೇಶನ ಮಾಡದ ನಂತರ ನಿತೀಶ್ ಕುಮಾರ್ ಮತ್ತು ಆರ್ಸಿಪಿ ಸಿಂಗ್ ಸಂಬಂಧ ಹದಗೆಟ್ಟಿತು ಮತ್ತು ಅವರು ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಬೇಕಾಯಿತು.
ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಆರ್ಸಿಪಿ ಸಿಂಗ್ ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬ ಸುಳಿವು ನೀಡುವ ಮೂಲಕ ಬಿಜೆಪಿಯಿಂದ ಮತ್ತೊಂದು "ಚಿರಾಗ್ ಮಾಡೆಲ್" ಅನ್ನು ರಚಿಸಲಾಗುತ್ತಿದೆ ಎಂದು ಜೆಡಿಯು ರಾಜ್ಯಾಧ್ಯಕ್ಷ ಲಾಲನ್ ಸಿಂಗ್ ಹೇಳಿದ್ದಾರೆ. 2020 ರಲ್ಲಿ ಜೆಡಿಯು ಕೇವಲ 43 ಸ್ಥಾನಗಳನ್ನು ಗೆಲ್ಲುವ ಹಿಂದಿನ ಪಿತೂರಿಯನ್ನು ನಾವು ಶೀಘ್ರದಲ್ಲೇ ಬಹಿರಂಗಪಡಿಸುತ್ತೇವೆ ಎಂದು ಸಿಂಗ್ ಹೇಳಿದ್ದಾರೆ.

ಸರ್ಕಾರ, ಅಂಕಿ ಅಂಶ, ಲೆಕ್ಕಾಚಾರ
ಸದ್ಯ ಬಿಹಾರದಲ್ಲಿ ಎನ್ಡಿಎ ಸರ್ಕಾರ ಅಧಿಕಾರದಲ್ಲಿದೆ. 2020ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಆರ್ ಜೆಡಿ 75 ಸ್ಥಾನಗಳನ್ನು ಗೆದ್ದಿದ್ದರೆ, ಬಿಜೆಪಿ 74 ಸ್ಥಾನಗಳನ್ನು ಗೆದ್ದಿತ್ತು, ಜೆಡಿಯು 43 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಾಂಗ್ರೆಸ್ 19, ಎಲ್ಜೆಪಿ 1, ಇತರೆ 31 ಸ್ಥಾನಗಳನ್ನು ಗೆದ್ದುಕೊಂಡಿವೆ.
ಬಿಹಾರದಲ್ಲಿ ಸರ್ಕಾರ ರಚನೆಗೆ 122 ಶಾಸಕರ ಬಲ ಬೇಕಿದೆ. 75-ಬಿಜೆಪಿ, 43-ಜೆಡಿಯು, 4-ಹಿಂದುಸ್ತಾನಿ ಆವಂ ಮೋರ್ಚಾ, ಓರ್ವ ಪಕ್ಷೇತರ ಶಾಸಕನ ಬೆಂಬಲದೊಂದಿಗೆ ಎನ್ಡಿಎ ಮೈತ್ರಿ ಸರ್ಕಾರ ರಚನೆಯಾಗಿತ್ತು.
ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆಗಳು ನಿತೀಶ್ ಕುಮಾರ್ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. ಉದ್ದವ್ ಠಾಕ್ರೆಯನ್ನು ಬಿಜೆಪಿ ನಡೆಸಿಕೊಂಡ ರೀತಿಯಿಂದ ನಿತೀಶ್ ಕುಮಾರ್ ಚಿಂತಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications