IRCTC ಕೇಸ್ : ಲಾಲೂ ವಿರುದ್ಧ ಚಾರ್ಜ್ ಶೀಟ್ ಲೀಕ್ ಮಾಡಿದ್ದು ಯಾರು?
ಪಾಟ್ನಾ, ಏಪ್ರಿಲ್ 26: ಭಾರತೀಯ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್(IRCTC)ನ ಎರಡು ಹೋಟೆಲ್ ಟೆಂಡರ್ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆರೋಪ ಹೊತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ದೆಹಲಿಯ ಪಟಿಯಾಲ ಹೌಸ್ ಕೋರ್ಟಿನಿಂದ ಮಧ್ಯಂತರ ಜಾಮೀನು ಸಿಕ್ಕಿರುವ ವಿಷಯ ಗೊತ್ತಿರಬಹುದು. ಆದರೆ, ಅರೋಪಿಗಳ ವಿರುದ್ಧದ ದೋಷಾರೋಪಣ ಪಟ್ಟಿ ಸೋರಿಕೆಯಾಗಿದ್ದು ಹೇಗೆ? ಯಾವ ಅಧಿಕಾರಿ ಈ ಮಾಹಿತಿ ಸೋರಿಕೆ ಮಾಡಿದರು? ಎಂಬುದರ ಬಗ್ಗೆ ಸಿಬಿಐ ತನಿಖೆ ಆರಂಭಿಸಿದೆ.
ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಅವರ ಪತ್ನಿ ರಾಬ್ರಿ ದೇವಿ, ಪುತ್ರ ತೇಜಸ್ವಿ ಯಾದವ್ ಅವರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಈಗ ಎಲ್ಲರಿಗೂ ಜಾಮೀನು ಸಿಕ್ಕಿದ್ದಂತಾಗಿದೆ. ಇದರಿಂದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ತೇಜಸ್ವಿ ಯಾದವ್ ಗೆ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಾಗಿದೆ. ದೆಹಲಿಯ ಪಟಿಯಾಲ ಹೌಸ್ ಕೋರ್ಟಿನ ವಿಶೇಷ ನ್ಯಾಯಾಧೀಶರಾದ ಅರುಣ್ ಭಾರದ್ವಾಜ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿ, ಜಾಮೀನು ಮಂಜೂರು ಮಾಡಿದ್ದಾರೆ. ಲಾಲೂ ಅವರಿಗೆ ಅನಾರೋಗ್ಯದಿಂದಾಗಿ ನ್ಯಾಯಾಲಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ.
ಇನ್ನೊಂದೆಡೆ ಸಿಬಿಐಯ ಉನ್ನತ ಅಧಿಕಾರಿಗಳಾಗಿದ್ದ ಅಲೋಕ್ ವರ್ಮಾ ಹಾಗೂ ರಾಕೇಶ್ ಆಸ್ಥಾನಾ ನಡುವಿನ ಕಿತ್ತಾಟದಿಂದ ಲಾಲೂ ಮೇಲಿನ ಕೇಸ್ ಬಗ್ಗೆ ಕೂಡಾ ಮಹತ್ವ ವಿಷಯ ಹೊರಕ್ಕೆ ಬಂದಿತ್ತು. ಕೇಂದ್ರ ಜಾಗೃತದಳಕ್ಕೆ ಅಲೋಕ್ ವರ್ಮಾ ನೀಡಿರುವ ಮಾಹಿತಿಯನ್ನು ನಂಬುವುದಾದರೆ ಲಾಲು ಪ್ರಸಾದ್ ಯಾದವ್ ಅವರನ್ನು ಐಆರ್ಸಿಟಿಸಿ ಪ್ರಕರಣದಲ್ಲಿ ಲಾಲೂ ಅವರನ್ನು ಬೇಕೆಂದೇ ಸಿಕ್ಕಿಸಲಾಗಿದೆ ಎಂಬ ವಿಷಯ ತಿಳಿದು ಬಂದಿದೆ.
2006 ರಲ್ಲಿ ಇಂಡಿಯನ್ ರೈಲ್ವೇ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೋರೇಶನ್ ಹೊಟೇಲ್ ಗಳಿಗೆ ಟೆಂಡರ್ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿತ್ತು.

ಆರ್ ಟಿಐ ಕಾರ್ಯಕರ್ತನ ಕೈಲಿ ಸಹಿ ಹಾಕದ ಟ್ರೂ ಕಾಪಿ
ಲಾಲೂ ಪ್ರಸಾದ್, ರಾಬ್ಡಿ ದೇವಿ, ತೇಜಸ್ವಿ ವಿರುದ್ಧದ ದೋಷರೋಪಣ ಪಟ್ಟಿಯನ್ನು 2 ಗ್ರೇಡ್ ನ ಎಕಾನಾಮಿಕ್ ಅಧಿಕಾರಿಯೊಬ್ಬರು ಆರ್ ಟಿಐ ಕಾರ್ಯಕರ್ತ ವೆಂಕಟೇಶ್ ಕುಮಾರ್ ಶರ್ಮ ಎಂಬಾತನಿಗೆ ನೀಡಿದ್ದಾರೆ ಎಂಬ ಅನುಮಾನವಿದೆ. ಈ ಕುರಿತಂತೆ ಸ್ಪಷ್ಟನೆ ಪಡೆಯಲು ಶರ್ಮ ಅವರಿಗೆ ಸಿಬಿಐ ಸಮನ್ಸ್ ನೀಡಿತ್ತು. ಆದರೆ, ಶರ್ಮ ಅವರು ಇಲ್ಲಿ ತನಕ ವಿಚಾರಣೆಗೆ ಹಾಜರಾಗಿಲ್ಲ.

ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ್ದ ಅಸಲಿ ದಾಖಲೆ
ಸುಪ್ರೀಂಕೋರ್ಟಿನಲ್ಲಿ ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ವೆಂಕಟೇಶ್ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ಸಹಿ ಹಾಕದ ಟ್ರೂ ಕಾಪಿಯನ್ನು ಲಗತ್ತಿಸಿದ್ದರು. ಐ ಆರ್ ಸಿಟಿಸಿ ಪ್ರಕರಣಕ್ಕೂ ಅಂದಿನ ಸಿಬಿಐ ನಿರ್ದೇಶಕ ಅಲೋಕ್ ವರ್ಮಾಗೂ ಲಿಂಕ್ ಇರುವ ಬಗ್ಗೆ ಮಾಹಿತಿ ನೀಡಲಾಗಿತ್ತು. ಇದರಿಂದ ಮಹತ್ವದ ಸಾಕ್ಷಿ ನಾಶವಾಗಿದೆ ಎನ್ನಲಾಗಿತ್ತು.

ಎರಡು ಹೋಟೆಲ್ ಗಳ ನಿರ್ವಹಣೆ ಟೆಂಡರ್
ಲಾಲು ಅವರು ರೈಲ್ವೆ ಸಚಿವರಾಗಿದ್ದ 2004-2009ರ ಅವಧಿಯಲ್ಲಿ ರಾಂಚಿ ಮತ್ತು ಪುರಿಯಲ್ಲಿ ಐಆರ್ಸಿಟಿಸಿಯ ಎರಡು ಹೋಟೆಲ್ಗಳ ನಿರ್ವಹಣೆಯ ಗುತ್ತಿಗೆಯನ್ನು ಖಾಸಗಿ ಕಂಪನಿಯೊಂದಕ್ಕೆ ನೀಡುವಲ್ಲಿ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದಲ್ಲಿ ನೀಡಿರುವ ಮಧ್ಯಂತರ ಜಾಮೀನನ್ನು ಜನವರಿ 19ರ ವರೆಗೆ ವಿಸ್ತರಿಸಿದೆ.
ರಾಂಚಿಯಲ್ಲಿನ ರೈಲ್ವೆ ಸುಪರ್ದಿಯ ಹೋಟೆಲ್ ಗಳನ್ನು ನಿರ್ವಹಿಸಲು ಸುಜಾತಾ ಹೋಟೆಲ್ ಗೆ ನೀಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಟೆಂಡರ್ ನಿಯಮ ಸೇರಿದಂತೆ ಎಲ್ಲಾ ನಿಯಮಗಳನ್ನು ಮೀರಲಾಗಿತ್ತು ಎಂದು ಸಿಬಿಐ ಆರೋಪಿಸಿದೆ.

ಅಕ್ರಮವಾಗಿ ಭೂಮಿ ಪರಭಾರೆ
2004 ರಿಂದ 14ರ ಅವಧಿಯಲ್ಲಿ ನಡೆದಿರುವ ಅಕ್ರಮ ಇದಾಗಿದ್ದು, ಸುಜಾತಾ ಹೋಟೆಲ್ ಗೆ ಅನುಕೂಲವಾಗುಂತೆ ಮಾಡಲಾಗಿದೆ ಎಂದು ಈ ಹಿಂದಿನ ಸಿಬಿಐ ಹೆಚ್ಚುವರಿ ನಿರ್ದೇಶಕ ರಾಕೇಶ್ ಆಸ್ತಾನ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಇದಲ್ಲದೆ, ಲಾಲೂ ಯಾದವ್ ಕುಟುಂಬಸ್ಥರಿಗೆ ಸೇರಿರುವ ಲಾರಾ ಪ್ರಾಜೆಕ್ಟ್ಸ್ ಸಂಸ್ಥೆಗೆ ಅಕ್ರಮವಾಗಿ ಭೂ ಪರಭಾರೆಯಾಗಿದೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ.

ಲಾಲೂ ಕುಟುಂಬಸ್ಥರಿಗೆ ಜಾಮೀನು
ಲಾಲೂ ಪ್ರಸಾದ್ ಯಾದವ್ ಅವರ ಪತ್ನಿ ರಾಬ್ರಿ ದೇವಿ, ತೇಜಸ್ವಿ ಯಾದವ್, ಪಿಸಿ ಗುಪ್ರಾ, ಲಾರಾ ಪ್ರಾಜೆಕ್ಟ್ ಎಲ್ಎಲ್ ಟಿ ಹಾಗೂ ಇನ್ನಿತರ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಾಗಿದೆ. 2006 ರಲ್ಲಿ ಇಂಡಿಯನ್ ರೈಲ್ವೇ ಕೇಟರಿಂಗ್ ಅಂಡ್ ಟೂರಿಸಮ್ ಕಾರ್ಪೋರೇಶನ್ ಹೊಟೇಲ್ ಗಳಿಗೆ ಟೆಂಡರ್ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಅವ್ಯವಹಾರ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಲೈಟ್ ಮಾರ್ಕೆಟಿಂಗ್ ಗೆ ಸೇರಿರುವ 44.75 ಕೋಟಿ ರು ಗಳನ್ನು ವಶಪಡಿಕೊಳ್ಳಲಾಗಿದೆ












Click it and Unblock the Notifications