ದಲಿತ ನಾಯಕನ ಹತ್ಯೆ: ತೇಜಸ್ವಿ ಯಾದವ್ ವಿರುದ್ಧ ಎಫ್ಐಆರ್
ಪಾಟ್ನಾ, ಅ. 5: ಬಿಹಾರದ ದಲಿತ ನಾಯಕ ರಾಷ್ಟ್ರೀಯ ಜನತಾ ದಳದ ಮಾಜಿ ಮುಖಂಡ ಶಕ್ತಿ ಮಲೀಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಜನತಾ ದಳ (RJD) ಮುಖಂಡರಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ವಿರುದ್ಧ ಖಜಾಂಚಿ ಹಾಥ್ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ರಾಣಿಗಂಜ್(ಮೀಸಲು) ಕ್ಷೇತ್ರದಿಂದ ಪಕ್ಷೇತರರಾಗಿ ಕಣಕ್ಕಿಳಿಯಲು ಶಕ್ತಿ ಕುಮಾರ್ ಮಲೀಕ್(40) ಸಿದ್ಧತೆ ನಡೆಸಿದ್ದರು. ಆದರೆ, ಅಕ್ಟೋಬರ್ 04ರಂದು ಪೂರ್ನಿಯಾ ಜಿಲ್ಲೆಯ ಅವರ ನಿವಾಸದ ಬಳಿ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ: ಮಹಾಮೈತ್ರಿಕೂಟ ಘೋಷಣೆ
ಶಕ್ತಿ ಕುಮಾರ್ ಅವರ ಪತ್ನಿ ಈ ಬಗ್ಗೆ ದೂರು ನೀಡಿ ಆರ್ ಜೆ ಡಿ ಮುಖಂಡರನ್ನು ಆರೋಪಿಗಳು ಎಂದಿದ್ದರು. ಬಿಹಾರ ವಿಧಾನಸಭೆ ವಿಪಕ್ಷ ನಾಯಕ ತೇಜಸ್ವಿಯಾದವ್, ಮಾಜಿ ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್, ಅನಿಲ್ ಕುಮಾರ್ ಸಾಧು(ಎಲ್ ಜೆಪಿಯ ರಾಮ್ ವಿಲಾಸ್ ಪಾಸ್ವಾನ್ ಅಳಿಯ) ಸೇರಿದಂತೆ ಇನ್ನು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್ಐ ಆರ್ ಹಾಕಲಾಗಿದೆ ಎಂದು ಠಾಣಾಧಿಕಾರಿ ಸುನಿಲ್ ಕುಮಾರ್ ಹೇಳಿದ್ದಾರೆ.
" ಇದು ಚುನಾವಣೆ ಸಂದರ್ಭದಲ್ಲಿ ಮಾಡಿರುವ ಸುಳ್ಳು ಆರೋಪ, ಯಾವುದೆ ಆಧಾರಗಳಿಲ್ಲದ ಹೇಳಿಕೆ ಮುಂದಿಟ್ಟುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ'' ಎಂದು ಆರ್ ಜೆ ಡಿ ವಕ್ತಾರ ಮೃತ್ಯುಂಜಯ್ ತಿವಾರಿ ಹೇಳಿದ್ದಾರೆ.
ಅರ್ ಜೆ ಡಿಯ ಪರಿಶಿಷ್ಟ ಜಾತಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದ ಶಕ್ತಿ ಕುಮಾರ್ ಅವರನ್ನು ಆರ್ ಜೆಡಿ ಕಡೆಯವರೇ ಹತ್ಯೆ ಮಾಡಿದ್ದಾರೆ ಎಂದು ಶಕ್ತಿ ಅವರ ಪತ್ನಿ ಖುಷ್ಬು ಕುಮಾರಿ ಆರೋಪಿಸಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ 50 ಲಕ್ಷ ರು ಎಂದು ಆರ್ ಜೆಡಿ ಬೇಡಿಕೆ ಇಟ್ಟಿತ್ತು. ಆದರೆ, ಶಕ್ತಿ ಅವರು ಒಪ್ಪದೆ ಪಕ್ಷೇತರರಾಗಿ ಸ್ಪರ್ಧಿಸಲು ಮುಂದಾಗಿದ್ದರು.
ಪಾರ್ಟಿ ಫಂಡ್ ಕೊಡದಿದ್ದರೆ ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಅನಿಲ್, ತೇಜಸ್ವಿ, ತೇಜ್ ಅವಾಜ್ ಹಾಕುವ ವಿಡಿಯೋವನ್ನು ಶಕ್ತಿ ಅವರ ಕುಟುಂಬದವರು ಪೊಲೀಸರ ಮುಂದಿಟ್ಟಿದ್ದಾರೆ.
"ಇದು ಆರ್ ಜೆಡಿಯ ಮಾದರಿ ರಾಜಕೀಯವಾಗಿದೆ. ದಲಿತರ ಮೇಲೆ ದೌರ್ಜನ್ಯ ಮುಂದುವರೆಸಿದೆ. ಆರ್ ಜೆ ಡಿ ಹೇಳುವುದಕ್ಕೂ ಮಾಡುವುದಕ್ಕೂ ಭಾರಿ ವ್ಯತ್ಯಾಸವಿದೆ'' ಎಂದು ಜೆಡಿಯು ಕಾರ್ಯಕಾರಿ ಅಧ್ಯಕ್ಷ ಅಶೋಕ್ ಕುಮಾರ್ ಚೌಧರಿ ಪ್ರತಿಕ್ರಿಯಿಸಿದ್ದಾರೆ.