'ಅಗ್ನಿಪಥ್' ಯೋಜನೆ ವಿರೋಧಿಸಿ ಬಿಹಾರದಲ್ಲಿ ಪ್ರತಿಭಟನೆ
ಪಾಟ್ನಾ, ಜೂ. 15: ಸೇನಾ ನೇಮಕಾತಿಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆ ಎಂದೇ ಘೋಷಿತವಾಗಿದ್ದ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆಗೆ ಎರಡನೇ ದಿನವೇ ಸೇನಾ ಉದ್ಯೋಗದ ಆಕಾಂಕ್ಷಿಗಳಿಂದ ವಿರೋಧ ವ್ಯಕ್ತವಾಗಿದೆ. ಬಿಹಾರದಲ್ಲಿ ಪ್ರತಿಭಟನೆಗಳು ನಡೆದಿವೆ.
ಅಲ್ಪಾವಧಿಗೆ ಗುತ್ತಿಗೆಯಲ್ಲಿ ಸೈನಿಕರನ್ನು ಸೇನಾಪಡೆಗಳಿಗೆ ಸೇರಿಸಿಕೊಳ್ಳುವ ಕೇಂದ್ರದ ಅಗ್ನಿಪಥ್ ಯೋಜನೆ ಬಗ್ಗೆ ಈಗ ಅಸಮಾಧಾನ ಭುಗಿಲೆದ್ದಿದ್ದು, ಸೇನಾಕಾಂಕ್ಷಿಗಳು ಬಿಹಾರದ ಮುಜಾಫರ್ಪುರದಲ್ಲಿ ಹೆದ್ದಾರಿ ತಡೆದು ಹಾಗೂ ಬಕ್ಸಾರ್ನಲ್ಲಿ ರೈಲುಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಸೇನಾಕಾಂಕ್ಷಿಗಳು ಅಗ್ನಿಪಥ್ ಯೋಜನೆಯು ತಮ್ಮ ದೀರ್ಘಕಾಲಿನ ಔದ್ಯೋಗಿಕ ಜೀವನದ ಭವಿಷ್ಯಕ್ಕೆ ಮಾರಕವೆಂದು ಆರೋಪಿಸಿದ್ದಾರೆ. ಯೋಜನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು ಈ ಯೋಜನೆಯಿಂದ ಆಯ್ಕೆಯಾಗುವ ಅಭ್ಯರ್ಥಿಗಳ ಶೇಕಡ 25ರಷ್ಟು ಸೇನೇಯಲ್ಲಿ ಖಾಯಂ ಆಗಿ ನೇಮಕಗೊಳ್ಳುತ್ತಾರೆ. ಆದರೆ ಉಳಿದವರು ಹೊರಗೆ ಬರುತ್ತಾರೆ? ಇವರ ಜೀವನ ನಂತರ ಏನು ಎಂಬುದು ಖಾತರಿ ಇಲ್ಲ ಎಂದಿದ್ದಾರೆ.

ಉತ್ತರಪ್ರದೇಶದ ಲಕ್ನೋಗೆ ಸಂಪರ್ಕ ಕಲ್ಪಿಸುವ ಬಿಹಾರದ ಮುಜಾಫರ್ಪುರ ಬರೌನಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 28ರಲ್ಲಿ ಪ್ರತಿಭಟನೆ ನಡೆಸಿದ ಸೇನಾಕಾಂಕ್ಷಿಗಳು ನಮಗೆ ಕೆಲಸ ಕೊಡಿ ಇಲ್ಲವೆ ನಮ್ಮನ್ನು ಕೊಂದು ಬಿಡಿ ಎಂದು ಘೋಷಣೆಗಳನ್ನು ಕೂಗಿದರು.
ಎರಡು ವರ್ಷಗಳಿಂದ ನಾವೂ ಕೂಡ ಸೇನೆಗೆ ಸೇರಲು ನೇಮಕಾತಿ ಪ್ರಕ್ರಿಯೆಗೆ ಕಾಯುತ್ತಿದ್ದೇವೆ. ಆದರೀಗ ಈ ಯೋಜನೆ ನಮ್ಮ ಭವಿಷ್ಯಕ್ಕೆ ಮುಳ್ಳಾಗಲಿದೆ. ಸೇನಾ ನೇಮಕಾತಿ ರ್ಯಾಲಿಗಳನ್ನು ಕೋವಿಡ್ ಕಾರಣಗಳಿಂದ ನಿಲ್ಲಿಸಿದ್ದು, ಇನ್ನೂ ಆರಂಭಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೇನೆಗೆ ಸೇರುವವರ ವಯೋಮಿತಿ ಸಡಿಲಿಕೆ ಮಾಡಬೇಕು ಎಂದು ಆಗ್ರಹಿಸಿರುವ ಪ್ರತಿಭಟನಾಕಾರರು ಎರಡು ವರ್ಷಗಳಿಂದ ಕಾಯುತ್ತಿರುವವರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಪ್ರಸ್ತುತ ಅಗ್ನಿಪಥ್ ಯೋಜನೆಯಡಿ ಸೇನೆಗೆ ಸೇರಬಯಸುವ ಅಭ್ಯರ್ಥಿಗಳ ವಯೋಮಿತಿ 17.5 ರಿಂದ 21 ವರ್ಷಗಳಾಗಿವೆ. ಕೇಂದ್ರ ಸರ್ಕಾರವು ನಮ್ಮೊಂದಿಗೆ ಈಗ ಪಬ್ ಜಿಯಂತಹ ಆಟಗಳನ್ನು ಆಡುತ್ತಿದೆ. ಇಷ್ಟು ದಿನಗಳಿಂದ ಸೇನಾ ನೇಮಕಾತಿ ರ್ಯಾಲಿಗಳನ್ನು ನಡೆಸದಿದ್ದರೂ ಯಾವುದೇ ನಾಯಕರು ನಮ್ಮ ಪರ ಧ್ವನಿ ಎತ್ತಲಿಲ್ಲ. ಈಗ ಯೋಜನೆಯ ಜಪ ಮಾಡತೊಡಗಿದ್ದಾರೆ. ಸರ್ಕಾರ ನಮ್ಮ ಬೇಡಿಕೆಯನ್ನು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications