ಬಿಹಾರ ಮುಖ್ಯಮಂತ್ರಿ ಎದೆಯಲ್ಲಿ ಢವಢವ ಹೆಚ್ಚಿಸಿದ ಜಾಹೀರಾತು!
ಪಾಟ್ನಾ, ಸಪ್ಟೆಂಬರ್.06: ಬಿಹಾರದಲ್ಲಿ ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಶುಕ್ರವಾರ ಪತ್ರಿಕೆಗಳಿಗೆ ನೀಡಿರುವ ಜಾಹೀರಾತು ರಾಜ್ಯ ರಾಜಕಾರಣದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಬಿಹಾರವೇ ಮೊದಲು, ಬಿಹಾರಿಗಳೇ ಮೊದಲು ಎಂಬ ಶೀರ್ಷಿಕೆ ಅಡಿಯಲ್ಲಿ ಜಾಹೀರಾತು ನೀಡಲಾಗಿದೆ.
"ಅವರು ನಮ್ಮನ್ನು ಆಳಲು ಹೋರಾಡುತ್ತಿದ್ದಾರೆ, ಬಿಹಾರಕ್ಕೆ ಹೆಮ್ಮೆ ತರಲು ನಾನು ಹೋರಾಡುತ್ತಿದ್ದೇನೆ" ಎಂದು ಉಪ ಶೀರ್ಷಿಕೆಯನ್ನು ಬರೆಯಿಸಲಾಗಿದೆ. ಪತ್ರಿಕೆಗಳ ಮುಖಪುಟ ತುಂಬುವಂತೆ ಜಾಹೀರಾತು ಪ್ರಕಟಿಸಲಾಗಿದೆ. ರಾಜ್ಯಾದ್ಯಂತ ಈ ಜಾಹೀರಾತುಗಳು ಸಿಎಂ ನಿತೀಶ್ ಕುಮಾರ್ ವಿರುದ್ಧ ಸಮರಕ್ಕಾಗಿ ನೀಡಿರುವುದೇ ಎಂಬ ಚರ್ಚೆ ನಡೆಯುತ್ತಿದೆ.
ಬಿಹಾರ ಚುನಾವಣೆ: ಎನ್ಡಿಎ ಮೈತ್ರಿಕೂಟ ಸೇರಲು ಮುಂದಾದ ಜಿತನ್ ರಾಮ್ ಮಾಂಝಿ
ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ)ದಲ್ಲಿ ಲೋಕ ಜನಶಕ್ತಿ ಪಕ್ಷವೂ ಕೂಡಾ ಒಂದಾಗಿದೆ. ಆದರೆ ಬಿಹಾರದಲ್ಲಿ ಎನ್ ಡಿಎ ಜೊತೆಗೂಡಿ ಸರ್ಕಾರ ರಚಿಸಿರುವ ಸಿಎಂ ನಿತೀಶ್ ಕುಮಾರ್ ಸರ್ಕಾರಕ್ಕೆ ಮಾತ್ರ ಈ ಎಲ್ ಜೆಪಿ ಪಕ್ಷವು ಬೆಂಬಲವನ್ನು ನೀಡಿಲ್ಲ.


ನಿತೀಶ್ ಕುಮಾರ್ ವಿರುದ್ಧ ಮಿತ್ರಪಕ್ಷದಿಂದಲೇ ದಾಳಿ
ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಎನ್ ಡಿಎ ಮಿತ್ರಪಕ್ಷದ ಬೆಂಬಲದಿಂದಲೇ ಸರ್ಕಾರವನ್ನು ರಚಿಸಿದ್ದಾರೆ. ಅದೇ ಎನ್ ಡಿಎ ಮಿತ್ರಪಕ್ಷದಲ್ಲಿ ಗುರುತಿಸಿಕೊಂಡಿರುವ ಎಲ್ ಜೆಪಿ ಇದೀಗ ಸಿಎಂ ನಿತೀಶ್ ಕುಮಾರ್ ವಿರುದ್ಧ ಪರೋಧ ದಾಳಿ ನಡೆಸಲು ಮುಂದಾಗಿದೆ. ರಾಜ್ಯದಲ್ಲಿ ವಲಸೆ ಕಾರ್ಮಿಕರನ್ನು ವಾಪಸ್ ಕರೆ ತರುವುದು, ಕೊವಿಡ್-19 ಬಿಕ್ಕಟ್ಟು ಹಾಗೂ ಪ್ರವಾಹ ಪರಿಸ್ಥಿತಿಯನ್ನು ಅಸ್ತ್ರವಾಗಿ ಬಳಸಿಕೊಂಡು ಸರ್ಕಾರದ ವಿರುದ್ಧ ತಂತ್ರ ಹೆಣೆಯಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

"ನಿತೀಶ್ ಕುಮಾರ್ ವಿರುದ್ಧ ದಂಗೆ ಏಳುವುದಕ್ಕೆ ಬಿಡುವುದಿಲ್ಲ"
ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ನೀಡಿರುವ ಜಾಹೀರಾತಿಗೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ನಿತೀಶ್ ಕುಮಾರ್ ವಿರುದ್ಧ ಯಾವುದೇ ರೀತಿ ದಂಗೆಯನ್ನು ಸಹಿಸುವುದಕ್ಕೆ ಸಾಧ್ಯವಿಲ್ಲ. ನಾನು ಯಾವುದೇ ಷರತ್ತುಗಳನ್ನು ವಿಧಿಸಿ ಎನ್ ಡಿಎ ಮೈತ್ರಿಕೂಟಕ್ಕೆ ಸೇರಿಲ್ಲ. ನಿತೀಶ್ ಕುಮಾರ್ ಒಬ್ಬರಿಗಾಗಿ ನಾನು ಎನ್ ಡಿಎ ಜೊತೆ ಕೈ ಜೋಡಿಸಿದ್ದೇನೆ ಎಂದು ತಿಳಿಸಿದ್ದಾರೆ.

ಜಾಹೀರಾತಿನ ಬಗ್ಗೆ ಲೋಕ ಜನಶಕ್ತಿ ಪಕ್ಷದ ಸಮರ್ಥನೆ
ಲೋಕ ಜನಶಕ್ತಿ ಪಕ್ಷವು ತಾನು ನೀಡಿರುವ ಜಾಹೀರಾತಿನಲ್ಲಿ ಯಾವುದೇ ರೀತಿ ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದೆ. ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಏನ್ ಹೇಳುತ್ತಾರೋ ಅದರ ಬಗ್ಗೆ ಜಾಹೀರಾತು ನೀಡುತ್ತೇವೆ. "ಬಿಹಾರವೇ ಮೊದಲು, ಬಿಹಾರಿಗಳೇ ಮೊದಲು" ಎಂಬುದು ನಮ್ಮ ಧ್ಯೇಯವಾಗಿದ್ದು, ಇದರಲ್ಲಿ ನಿತೀಶ್ ಕುಮಾರ್ ವಿರುದ್ಧ ಯಾವುದೇ ಸಮರ ಸಾರುವ ಪ್ರಶ್ನೆಯೇ ಬರುವುದಿಲ್ಲ. ಏಕೆಂದರೆ ನಾವೂ ಕೂಡಾ ಎನ್ ಡಿಎ ಮಿತ್ರಕೂಟದಲ್ಲಿದ್ದೇವೆ ಎಂದು ಎಲ್ ಜೆಪಿ ಪಕ್ಷದ ವಕ್ತಾರ ಅಶ್ರಫ್ ಅನ್ಸಾರಿ ತಿಳಿಸಿದ್ದಾರೆ. ಅಲ್ಲದೇ ಇದೇ ವಿಚಾರವನ್ನಿಟ್ಟುಕೊಂಡು ಬಿಹಾರದಾದ್ಯಂತ ಪ್ರವಾಸ ನಡೆಸುವುದಕ್ಕೆ ಚಿರಾಗ್ ಪಾಸ್ವಾನ್ ಮುಂದಾಗಿದ್ದು, ಕೊವಿಡ್19 ಸಾಂಕ್ರಾಮಿಕ ಪಿಡುಗಿನಿಂದಾಗಿ ಅದು ಸಾಧ್ಯವಾಗಿಲ್ಲ ಎಂದು ಹೇಳಿದರು.

ಎಲ್ ಜೆಪಿ ಜಾಹೀರಾತಿನಿಂದ ಜೆಡಿಯುಗೆ ಢವಢವ
ಬಿಹಾರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ದಲಿತ ಮುಖ್ಯಮಂತ್ರಿ ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ ನಡೆಸುತ್ತಿತ್ತು. ಇಂಥದ್ದೇ ಸಂದರ್ಭದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆಯಿತು. ಎರಡು ದಿನಗಳ ಹಿಂದೆಯಷ್ಟೇ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ನೇತೃತ್ವದ ಹಿಂದೂಸ್ತಾನಿ ಅವಂ ಮೋರ್ಚಾ ಪಕ್ಷವು ಎನ್ ಡಿಎ ಮಿತ್ರಕೂಟಕ್ಕೆ ಸೇರ್ಪಡೆಯಾಗಿದೆ. ಇದರ ನಡುವೆ ಎಲ್ ಜೆಪಿ ನೀತಿರುವ ಜಾಹೀರಾತು ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ರನ್ನು ಗುರುಯಾಗಿಸಿಕೊಂಡು ನೀಡಿರುವುದು ಎಂದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂಬುದು ಜೆಡಿಯು ನಾಯಕರ ವಾದವಾಗಿದೆ.

2019ರ ಮಾದರಿ ಸೀಟು ಹಂಚಿಕೆ ಅನುಮಾನ
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ 2019ರ ಮಾದರಿಯಲ್ಲೇ ಸೀಟು ಹಂಚಿಕೆಗೆ ನಿತೀಶ್ ಕುಮಾರ್ ಮನಸ್ಸು ಮಾಡಿದ್ದು, ಈ ಬಾರಿ ಅದು ಸಾಧ್ಯವಾಗುವುದೇ ಅನುಮಾನ ಹುಟ್ಟಿಸಿದೆ. 243 ಕ್ಷೇತ್ರಗಳ ಪೈಕಿ ಜೆಡಿಯು 115 ಸೀಟುಗಳಿಗೆ ಸ್ಪರ್ಧಿಸಿ ಉಳಿದ ಕ್ಷೇತ್ರಗಳನ್ನು ಬಿಜೆಪಿ, ಎಲ್ ಜೆಪಿ ಸೇರಿದಂತೆ ಎನ್ ಡಿಎ ಮಿತ್ರಕೂಟದ ಪಕ್ಷಕ್ಕೆ ಬಿಟ್ಟು ಕೊಡಲು ತೀರ್ಮಾನಿಸಿದ್ದರು. ಕಳೆದ ಬಾರಿ ಎಲ್ ಜೆಪಿ ನೀಡಿರುವ 36 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, ಈ ಬಾರಿ ಎನ್ ಡಿಎ ಮಿತ್ರಕೂಟಕ್ಕೆ ಹಿಂದೂಸ್ತಾನಿ ಅವಂ ಮೋರ್ಚಾ ಕೂಡಾ ಸೇರ್ಪಡೆಯಾಗಿದ್ದು ಹೊಸ ಹೊಡೆತ ಕೊಡುವ ಲಕ್ಷಣಗಳು ಕಾಣಿಸುತ್ತಿವೆ.

ದಲಿತ ವೋಟ್ ಬ್ಯಾಂಕ್ ಮೇಲೆ ಎನ್ ಡಿಎ ಕಣ್ಣು
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ದಲಿತ ಮತಗಳು ಪ್ರಮುಖ ಪಾತ್ರ ವಹಿಸಲಿದೆ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.16ರಷ್ಟು ದಲಿತ ಜನರಿದ್ದು, ಶೇ.6ರಷ್ಟು ಪಾಸ್ವಾನ್ ಸಮುದಾಯಕ್ಕೆ ಸೇರಿದ ಜನರಿದ್ದಾರೆ. ರಾಜ್ಯದ ದಲಿತ ಸಮುದಾಯಗಳಲ್ಲೇ ಪಾಸ್ವಾನ್ ಸಮುದಾಯವು ಪ್ರಮುಖವಾಗಿದ್ದು, ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಮ್ಮ ನಾಯಕರು ಎಂದು ಈ ಸಮುದಾಯವು ನೆಚ್ಚಿಕೊಂಡಿದೆ. ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಅವರ ಪುತ್ರ ಚಿರಾಗ್ ಪಾಸ್ವಾನ್ ರಾಜಕಾರಣದಲ್ಲಿ ಅಸ್ತಿತ್ವ ರೂಪಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.
ಉತ್ತರ ಬಿಹಾರದ ಗಯಾ, ಜೆಹನ್ ಬಾದ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಮುಸಾಹರ್ ಸಮುದಾಯದ ಜನರಿದ್ದು, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಇವರ ಪ್ರಮಾಣವು ಶೇ.2.5ರಷ್ಟಿದೆ. ಪಾಸ್ವಾನ್ ರನ್ನು ವಿರೋಧಿಸುವ ಈ ವರ್ಗದ ಜನರು ಜಿತನ್ ರಾಮ್ ಮಾಂಜಿ ಮುಖ್ಯಮಂತ್ರಿ ಆಗಲಿ ಎಂದು ಆಶಿಸುತ್ತಾರೆ.












Click it and Unblock the Notifications