ಮೈತ್ರಿಯಲ್ಲಿ ಒಡಕು: ಬಿಹಾರ ಸಿಎಂ ನಿತೀಶ್ ಕುಮಾರ್ ಇಂದ ಬಿಜೆಪಿ ದೂರ
ಪಾಟ್ನಾ, ಅಕ್ಟೋಬರ್ 08: ಬಿಹಾರದ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಬಹಿರಂಗವಾಗಿಯೇ ಬಿಜೆಪಿಯು ಸಿಎಂ ನಿತೀಶ್ ಕುಮಾರ್ ಮತ್ತು ಜೆಡಿಯುನಿಂದ ಅಂತರ ಕಾಯ್ದುಕೊಂಡಿದೆ.
ಇಂದು ನಡೆದ ದಸರಾ ಕಾರ್ಯಕ್ರಮದಲ್ಲಿ ಸಿಎಂ ನಿತೀಶ್ ಕುಮಾರ್ ಸೇರಿದಂತೆ ಜೆಡಿಯು ಪಕ್ಷದ ಪ್ರಮುಖರು ಭಾಗವಹಿಸಿದ್ದರು. ಆದರೆ ಉಪಮುಖ್ಯಮಂತ್ರಿ ಬಿಜೆಪಿಯ ಸುಶೀಲ್ ಮೋದಿ ಅವರು ಸಮಾರಂಭಕ್ಕೆ ಗೈರಾಗಿದ್ದರು.
ಸುಶೀಲ್ ಮೋದಿ ಮಾತ್ರವೇ ಅಲ್ಲದೆ, ಸ್ಥಳೀಯ ಬಿಜೆಪಿ ಶಾಸಕ, ಸಂಸದರೂ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಬಿಜೆಪಿಯ ಸ್ಥಳೀಯ ಮುಖಂಡರು, ಕಾರ್ಯಕರ್ತರೂ ಸಹ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ, ಈ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದಲೇ ಆಯೋಜಿಸಲಾಗಿತ್ತು.

ಬಿಜೆಪಿ-ಜೆಡಿಯು ಒಟ್ಟಿಗೆ ಸರ್ಕಾರ ರಚಿಸಿತ್ತು
ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಒಟ್ಟಿಗೆ ಸರ್ಕಾರ ರಚಿಸಿದ್ದು, ನಿತೀಶ್ ಕುಮಾರ್ ಸಿಎಂ ಆಗಿ ಹಾಗೂ ಬಿಜೆಪಿಯ ಸುಶೀಲ್ ಮೋದಿ ಡಿಸಿಎಂ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲೋಕಸಭೆ ಚುನಾವಣೆ ಸಮಯದಲ್ಲಿ ತಿದ್ದ ಕಲಹವು ಈಗ ಬಹಿರಂಗವಾಗಿದ್ದು, ಮೈತ್ರಿ ಪಕ್ಷಗಳಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಖಾತ್ರಿಯಾಗಿದೆ.

ಲಾಲೂ ಜೊತೆ ಚುನಾವಣೆ ಎದುರಿಸಿದ್ದ ನಿತೀಶ್ ಕುಮಾರ್
ಬಿಹಾರದಲ್ಲಿ 2015 ರಲ್ಲಿ ವಿಧಾನಸಭೆ ಚುನಾವಣೆ ಆದಾಗ ಲಾಲೂಪ್ರಸಾದ್ ಯಾದವ್ ಅವರ ಆರ್ಜೆಡಿ, ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಕಾಂಗ್ರೆಸ್ ಪಕ್ಷ ಒಟ್ಟಾಗಿ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬಂದು ಕೆಲ ಕಾಲ ಸರ್ಕಾರವನ್ನೂ ನಡೆಸಲಾಯಿತು. ಆದರೆ ನಂತರ ನಡೆದ ಬೆಳವಣಿಗೆಯಲ್ಲಿ ನಿತೀಶ್ ಕುಮಾರ್ ಅವರ ಜೆಡಿಯು ಬಿಜೆಪಿ ಜೊತೆ ಕೈಜೋಡಿಸಿ ಅಧಿಕಾರ ಹಿಡಿದರು. ಈಗ ಮತ್ತೆ ಜೆಡಿಯು-ಬಿಜೆಪಿ ನಡುವೆ ಮೈತ್ರಿಯಲ್ಲಿ ಅಸಮಾಧಾನ ತಲೆದೂರಿದೆ.

ಲೋಕಸಭೆ ಚುನಾವಣೆಯಲ್ಲಿ ಜೆಡಿಯು-ಬಿಜೆಪಿ ಮೈತ್ರಿ
ಕೆಲವು ತಿಂಗಳ ಹಿಂದೆ ನಡೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಯು-ಬಿಜೆಪಿ ಮೈತ್ರಿ ಮಾಡಿಕೊಂಡು ಬಿಹಾರದಲ್ಲಿ ಚುನಾವಣೆ ಎದುರಿಸಿ 40 ರಲ್ಲಿ 39 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಈಗ ಈ ಎರಡೂ ಪಕ್ಷಗಳಲ್ಲಿ ಅಸಮಾಧಾನ ತಲೆದೂರಿದ್ದು, ಮುಂದಿನ ವರ್ಷ ಬಿಹಾರದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಪರಸ್ಪರ ಟೀಕಾಪ್ರಹಾರ ಮೇರೆ ಮೀರಿದೆ
ಬಿಜೆಪಿ ಮತ್ತು ಜೆಡಿಯು ನಾಯಕರ ಮಧ್ಯೆ ಪರಸ್ಪರ ಟೀಕಾಪ್ರಹಾರ ಮುಗಿಲುಮುಟ್ಟಿದೆ. ಇಂದಿನ ಕಾರ್ಯಕ್ರಮದಲ್ಲಿ ಬಿಜೆಪಿಯು ದೂರ ಉಳಿಯುತ್ತಿರುವುದನ್ನು ಜೆಡಿಯು ಮುಖಂಡರು ಪ್ರಶ್ನೆ ಮಾಡಿದ್ದು, ಜೆಡಿಯು ಮುಖಂಡ ಅಲೋಕ್ ಕುಮಾರ್ ಟ್ವೀಟ್ ಮಾಡಿ, 'ರಾವಣ ವಧೆ ಕಾರ್ಯಕ್ರಮಕ್ಕೆ ಏಕೆ ಬಂದಿಲ್ಲ, ನಿಮಗೆ ರಾವಣನನ್ನು ಸೆದೆಬಡಿಯುವ ಆಸೆ ಇಲ್ಲವೇ?' ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications