ವಿಧಾನಸಭೆ ಆವರಣದಲ್ಲೇ ಎಣ್ಣೆ ಬಾಟಲಿ; ಸಿಎಂ ಸಾಹೇಬ್ರು ರಾಜೀನಾಮೆ ಕೊಡಲಿ
ಪಾಟ್ನಾ, ನವೆಂಬರ್ 30: ವಿಧಾನಸಭೆ ಆವರಣದಲ್ಲೇ ಖಾಲಿ ಬಾಟಲಿಗಳು ಬಿದ್ದಿವೆ. ಮುಖ್ಯಮಂತ್ರಿಗಳೇ ಏನಿದು ಪರಿಸ್ಥಿತಿ. ನೀವು ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು. ಬಿಹಾರದಲ್ಲಿ ಇಂಥದೊಂದು ಘಟನೆ ಹಾಗೂ ಆಗ್ರಹ ಕೇಳಿ ಬಂದಿದೆ.
ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇಧದ ಪರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಶಾಸಕರು ಪ್ರತಿಜ್ಞೆ ಮಾಡಿದ ಒಂದು ಮರುದಿನವೇ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ. ಬಿಹಾರ ವಿಧಾನಸಭೆ ಆವರಣದಲ್ಲೇ ಮಂಗಳವಾರ ಹಲವಾರು ಖಾಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ. ಈ ಘಟನೆಯನ್ನು ಖಂಡಿಸಿದ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್, ಮುಖ್ಯಮಂತ್ರಿ ನಿತೀಶ್ ಕುಮಾರ್ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಸಂಪೂರ್ಣ ಮದ್ಯ ನಿಷೇಧವನ್ನು ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬಿಹಾರದ ಜನರು ಮದ್ಯ ಸೇವಿಸುವುದಿಲ್ಲ ಎಂದು ಪ್ರಮಾಣ ಮಾಡುತ್ತಾರೆ: ನಿತೀಶ್ ಕುಮಾರ್
ರಾಜ್ಯದ ಹಲವೆಡೆ ಮದ್ಯದ ಬಾಟಲಿ ಪತ್ತೆ: ಬಿಹಾರದಲ್ಲಿ ಮದ್ಯಪಾನ ನಿಷೇಧವನ್ನು ಜಾರಿಗೊಳಿಸಲು ಸರ್ಕಾರ ಕ್ರಮ ತೆಗೆದುಕೊಂಡಿದೆ. ಆದಾಗ್ಯೂ, ರಾಜ್ಯದ ಹಲವೆಡೆ ಮದ್ಯದ ಬಾಟಲಿಗಳು ಪತ್ತೆ ಆಗುತ್ತಿರುವುದು ಗಂಭೀರ ವಿಚಾರವಾಗಿರುತ್ತದೆ. ಸರ್ಕಾರದ ಈ ಬಗ್ಗೆ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಮದ್ಯಪಾನ ಸಂಪೂರ್ಣ ನಿಷೇಧಗೊಳಿಸಬೇಕು ಎಂದು ತೇಜಸ್ವಿ ಯಾದವ್ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಕ್ರಿಯೆ:
ಬಿಹಾರ ವಿಧಾನಸಭೆ ಆವರಣದಲ್ಲಿಯೇ ಖಾಲಿ ಮದ್ಯದ ಬಾಟಲಿಗಳು ಪತ್ತೆಯಾಗಿರುವ ಘಟನೆ ಕುರಿತು ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. "ಇದು ಅತ್ಯಂತ ಗಂಭೀರವಾದ ವಿಷಯವಾಗಿದ್ದು, ತನಿಖೆ ನಡೆಸುವುದು ಮುಖ್ಯವಾಗಿದೆ. ಸ್ಪೀಕರ್ ಅವಕಾಶ ನೀಡಿದರೆ ನಾವು ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಅವರನ್ನು ತನಿಖೆಗೆ ಸೂಚಿಸಬಹುದು," ಎಂದು ಹೇಳಿದ್ದಾರೆ.
ಬಿಹಾರದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಎಲ್ಲಾ ನಾಲ್ಕು ಘಟಕಗಳ ಶಾಸಕರು ನಿತೀಶ್ ಕುಮಾರ್ ತೆಗೆದುಕೊಂಡಿರುವ ಮದ್ಯ ನಿಷೇಧ ನಿರ್ಧಾರದ ಪರ ಬೆಂಬಲ ಸೂಚಿಸಿದ್ದರು. ರಾಜ್ಯಾದ್ಯಂತ ಸಂಪೂರ್ಣ ಮದ್ಯ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ರಾಜ್ಯ ಸರ್ಕಾರದ ಕ್ರಮವನ್ನು ಬೆಂಬಲಿಸಲು ಸರ್ವಾನುಮತದಿಂದ ನಿರ್ಧರಿಸಿದ್ದರು. ಆದರೆ ಇದಾಗಿ ಮರುದಿನವೇ ವಿಧಾನಸಭೆ ಆವರಣದಲ್ಲೇ ಖಾಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ.
ಸಿಎಂ ನಿತೀಶ್ ಕುಮಾರ್ ರಾಜೀನಾಮೆಗೆ ಆಗ್ರಹ: ವಿಧಾನಸಭೆ ಅಧಿವೇಶನದ ಆರಂಭದ ದಿನ ರಾಜ್ಯದಲ್ಲಿ ಮದ್ಯದ ಮಾಫಿಯಾವನ್ನು ನಿಯಂತ್ರಿಸುವಲ್ಲಿ ನಿತೀಶ್ ಕುಮಾರ್ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು. ಮದ್ಯ ನಿಷೇಧವನ್ನು ಕೇವಲ ಕಣ್ಣೊರೆಸು ತಂತ್ರ ಎಂದು ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಬಣ್ಣಿಸಿದ್ದಾರೆ. "ನಿತೀಶ್ ಕುಮಾರ್ ಸರ್ಕಾರದ ಪೊಲೀಸರು ಕೇವಲ ಮದ್ಯದ ಗ್ರಾಹಕರನ್ನು ಬಂಧಿಸುತ್ತಿದ್ದಾರೆ. ಆದರೆ ನಿಜವಾಗಿ ಮದ್ಯ ಮಾರಾಟ ಮಾಡುವ ಹಾಗೂ ಕಳ್ಳ ಸಾಗಾಣಿಕೆ ನಡೆಸುವ ಅಪರಾಧಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ಬಡ ಹಳ್ಳಿಗರು ಮಾತ್ರ ಸಾಯುತ್ತಿದ್ದು, ಗ್ರಾಮೀಣ ಜನರನ್ನು ಮಾತ್ರ ಬಂಧಿಸಲಾಗುತ್ತಿದೆ, ಎಂದು ಆರೋಪಿಸಿದ್ದಾರೆ.