ಬಿಜೆಪಿ ತೊರೆದು ಎಲ್ ಜೆಪಿ ಸೇರಿದ ಇಬ್ಬರು ಪ್ರಮುಖ ಮುಖಂಡರು
ಪಾಟ್ನಾ, ಅ. 7: ಭಾರತೀಯ ಜನತಾ ಪಕ್ಷ (ಬಿಜೆಪಿ)ದ ಉಪಾಧ್ಯಕ್ಷ ರಾಜೇಂದ್ರ ಸಿಂಗ್ ಅವರು ಲೋಕ ಜನಶಕ್ತಿ ಪಕ್ಷ(ಎಲ್ಜೆಪಿ) ಸೇರಿದ ಬೆನ್ನಲ್ಲೇ ಬಿಜೆಪಿ ಹಿರಿಯ ನಾಯಕಿ ಹಿರಿಯ ನಾಯಕಿ ಉಷಾ ವಿದ್ಯಾರ್ಥಿ ಬುಧವಾರದಂದು ಎಲ್ಜೆಪಿ ಸೇರಿದ್ದಾರೆ. ಎಲ್ ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಅವರ ಸಮ್ಮುಖದಲ್ಲಿ ಪಕ್ಷ ಸೇರಿದ ಉಷಾ ಅವರಿಗೆ ಪಾಸ್ವಾನ್ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು.
ಮಂಗಳವಾರದಂದು ಬಿಜೆಪಿಯ ಉಪಾಧ್ಯಕ್ಷ ರಾಜೇಂದ್ರ ಸಿಂಗ್ ಅವರು ಎಲ್ಜೆಪಿಗೆ ಸೇರಿದ್ದರು. ಬಿಜೆಪಿ ಹಾಗೂ ಜೆಡಿಯು ಮೈತ್ರಿ, ನಿತೀಶ್ ಅವರೇ ಸಿಎಂ ಅಭ್ಯರ್ಥಿ ಎಂಬ ಘೋಷಣೆಯನ್ನು ಸಹಿಸದೇ ಬಿಹಾರ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಎಲ್ ಜೆಪಿ ಸೇರಿರುವುದಾಗಿ ಇಬ್ಬರು ಮುಖಂಡರು ಹೇಳಿದ್ದಾರೆ.
ಬಿಹಾರ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟ
ಎನ್ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಎಲ್ ಜೆಪಿ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಜನತಾದಳ (ಸಂಯುಕ್ತ) ವಿರುದ್ಧ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಚಿರಾಗ್ ಘೋಷಿಸಿದ್ದಾರೆ.
ಸಮೀಕ್ಷೆ ಫಲಿತಾಂಶ: 4ನೇ ಬಾರಿಗೆ ನಿತೀಶ್ ನೇತೃತ್ವದ ಎನ್ಡಿಎ ಕ್ಲೀನ್ ಸ್ವೀಪ್
''ಬಿಹಾರ ಮೊದಲು, ಬಿಹಾರಿ ಮೊದಲು'' ಎಂಬ ಘೋಷವಾಕ್ಯ
''ಬಿಹಾರ ಮೊದಲು, ಬಿಹಾರಿ ಮೊದಲು'' ಎಂಬ ಘೋಷವಾಕ್ಯದೊಂದಿಗೆ ಚುನಾವಣೆಯನ್ನು ಎದುರಿಸಲಾಗುವುದು ಎಂದು ಎಲ್ ಜೆಪಿ ಹೇಳಿದೆ. ನಮ್ಮ ರಾಜ್ಯ ಕಳೆದುಕೊಂಡಿರುವ ಘನತೆಯನ್ನು ಮತ್ತೆ ತಂದುಕೊಡಲಾಗುವುದು ಎಂದು ಪಾಸ್ವಾನ್ ಹೇಳಿದ್ದಾರೆ.
ಈ ನಡುವೆ 50: 50ರ ಅನುಪಾತದಲ್ಲಿ ಸೀಟು ಹಂಚಿಕೆ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಯು ಕ್ರಮವಾಗಿ 121 ಹಾಗೂ 122 ಕ್ಷೇತ್ರಗಳನ್ನು ಪಡೆದುಕೊಂಡಿವೆ. ಎಲ್ ಜೆಪಿ ಸದ್ಯ 143 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ.243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ
243 ಸದಸ್ಯ ಬಲ ಹೊಂದಿರುವ ಬಿಹಾರ ವಿಧಾನಸಭೆ ಅವಧಿಯು ನವೆಂಬರ್ 29 ರಂದು ಕೊನೆಗೊಳ್ಳಲಿದೆ. ಕೊರೊನಾವೈರಸ್ ಸೋಂಕು ಹರಡುವಿಕೆ ಆತಂಕದ ನಡುವೆಯೂ ಬಿಹಾರದಲ್ಲಿ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ.ಅಕ್ಟೋಬರ್,28ರಂದು 16 ಜಿಲ್ಲೆಗಳ 71 ಕ್ಷೇತ್ರಗಳಿಗೆ 31,000 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್.03ರಂದು ಎರಡನೆಯ ಹಂತದಲ್ಲಿ 17 ಜಿಲ್ಲೆಗಳಲ್ಲಿ 94 ಕ್ಷೇತ್ರಗಳಿಗೆ 42,000 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್.07ರಂದು ಮೂರನೇ ಹಂತದಲ್ಲಿ 78 ಕ್ಷೇತ್ರಗಳಿಗೆ 15 ಜಿಲ್ಲೆಗಳಲ್ಲಿ ಅಂದಾಜು 33,500 ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ. ಅಂತಿಮವಾಗಿ ನವೆಂಬರ್.10ರಂದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶವು ಹೊರ ಬೀಳಲಿದೆ.
2015ರಲ್ಲಿದ್ದ ಹೊಂದಾಣಿಕೆ ಈಗ ಇಲ್ಲ
2015ರಲ್ಲಿ ರಾಷ್ಟ್ರೀಯ ಜನತಾ ದಳ 80 ಸ್ಥಾನ, ಜನತಾ ದಳ ಯುನೈಟೆಡ್ 71, ಕಾಂಗ್ರೆಸ್ 27 ಗಳಿಸಿದ್ದವು. ಬಿಜೆಪಿ 53 ಸ್ಥಾನ, ಎಲ್ ಜೆಪಿ 2 ಹಾಗೂ ಹಿಂದೂಸ್ತಾನಿ ಅವಾಮ್ ಮೋರ್ಚಾ ಸೆಕ್ಯುಲರ್ 1, ಇತರೆ 10 ಸ್ಥಾನ.
ಬಿಜೆಪಿ ಶೇ 24ರಷ್ಟು ಮತಗಳಿಕೆ, ಅರ್ ಜೆ ಡಿ ಶೇ 18 ಹಾಗೂ ಜೆಡಿಯು ಶೇ 17ರಷ್ಟು, ಕಾಂಗ್ರೆಸ್ ಶೇ 7, ಎಲ್ ಜೆಪಿ ಶೇ 4.8ರಷ್ಟು ಮತ ಗಳಿಸಿದ್ದವು.ಇಬ್ಬರು ಪ್ರಮುಖ ಮುಖಂಡರು ಬಿಜೆಪಿ ತೊರೆದಿದ್ದೇಕೆ?
ಕಳೆದ ಬಾರಿ ಬಿಜೆಪಿ ಟಿಕೆಟ್ ನಿರಾಕರಿಸಿತ್ತು. ರಾಮ್ಜನಮ್ ಶರ್ಮ ಅವರಿಗೆ ಟಿಕೆಟ್ ನೀಡಿತ್ತು. ಬಿಹಾರದ ರಾಜ್ಯ ಮಹಿಳಾ ಆಯೋಗದ ಸದಸ್ಯರಾಗಿ ಹುದ್ದೆ ನೀಡಿ ಸಮಾಧಾನಪಡಿಸಲಾಗಿತ್ತು. ಇನ್ನೊಂದೆಡೆ 2015ರಲ್ಲಿ ಸಿಎಂ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ದ ಹಿರಿಯ ಮುಖಂಡ ರಾಜೇಂದ್ರ ಸಿಂಗ್ ಅವರು ಬಿಜೆಪಿ ಹಾಗೂ ಆರೆಸ್ಸೆಸ್ ಪರ ಕಳೆದ 36ವರ್ಷಗಳಿಂದ ದುಡಿದಿದ್ದಾರೆ. ಈಗ ವಿಧಾನಸಭೆಗೆ ಆಯ್ಕೆಯಾಗಲು ಬಿಜೆಪಿ ತೊರೆದಿದ್ದಾರೆ ಎಂದರೆ ನಂಬಲು ಸಾಧ್ಯವಿಲ್ಲ. ಬಿಜೆಪಿ ಎಲ್ ಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡು ತನ್ನ ಬಂಡಾಯ ಅಭ್ಯರ್ಥಿಗಳನ್ನು ಎಲ್ ಜೆಪಿಗೆ ಕಳಿಸುತ್ತಿದೆ ಎಂದು ವಿಪಕ್ಷಗಳು ಗುಮಾನಿ ವ್ಯಕ್ತಪಡಿಸಿವೆ.