ಆಯೋಗವನ್ನು ನಂಬುತ್ತೇವೆ, ಸ್ಥಳೀಯ ಆಡಳಿತವನ್ನು ನಂಬುವುದಿಲ್ಲ: ಆರ್ಜೆಡಿ
ಪಟ್ನಾ, ನವೆಂಬರ್ 10: ನಾವು ಚುನಾವಣಾ ಆಯೋಗವನ್ನು ನಂಬುತ್ತೇವೆ, ಆದರೆ ಸ್ಥಳೀಯ ಆಡಳಿತವನ್ನು ನಂಬುವುದಿಲ್ಲ ಎಂದು ಆರ್ಜೆಡಿ ಮತ್ತು ಕಾಂಗ್ರೆಸ್ ಹೇಳಿಕೆ ನೀಡಿವೆ.
ಸಮೀಪದ ಅಂತರ ಇರುವ ಕ್ಷೇತ್ರಗಳಲ್ಲಿ ಉದ್ದೇಶಪೂರ್ವಕವಾಗಿಯೇ ಮತ ಎಣಿಕೆಯನ್ನು ವಿಳಂಬ ಮಾಡಲಾಗುತ್ತಿದೆ. ಇದಕ್ಕಾಗಿ ನಿತೀಶ್ ಕುಮಾರ್ ಮತ್ತು ಸುಶೀಲ್ ಕುಮಾರ್ ಮೋದಿ ಚುನಾವಣಾ ಅಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದೆ ಎಂದು ಆರ್ಜೆಡಿ ಆರೋಪಿಸಿತ್ತು. ಆದರೆ ತಾನು ಯಾರ ಒತ್ತಡಕ್ಕೂ ಒಳಗಾಗಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿತ್ತು.
'ಹತ್ತಾರು ವಿಧಾನಸಭೆ ಕ್ಷೇತ್ರಗಳಲ್ಲಿ ಟ್ಯಾಂಪರಿಂಗ್ ಮಾಡಲಾಗಿದೆ. ಅವರು ಜನರ ತೀರ್ಪನ್ನು ಬದಲಿಸಲು ಪ್ರಯತ್ನಿಸುತ್ತಿದ್ದಾರೆ. ಅಷ್ಟು ಕೀಳು ಮಟ್ಟದ ಉದ್ದೇಶದ ಪ್ರಯತ್ನಗಳ ನಡುವೆಯೂ ನಾವು ಸರ್ಕಾರ ರಚಿಸಲಿದ್ದೇವೆ' ಎಂದು ಆರ್ಜೆಡಿ ಮುಖಂಡ ಮನೋಜ್ ಝಾ ಹೇಳಿದ್ದಾರೆ.
'ನಮ್ಮ ಅಹವಾಲುಗಳನ್ನು ಪರಿಶೀಲಿಸುವುದಾಗಿ ಚುನಾವಣಾ ಆಯೋಗ ಭರವಸೆ ನೀಡಿದೆ. ನಾವು ಚುನಾವಣಾ ಆಯೋಗವನ್ನು ನಂಬುತ್ತೇವೆ, ಆದರೆ ಜಿಲ್ಲಾ ಆಡಳಿತದ ಮೇಲೆ ನಮಗೆ ವಿಶ್ವಾಸವಿಲ್ಲ' ಎಂದು ಅವರು ತಿಳಿಸಿದ್ದಾರೆ.
'ನಿತೀಶ್ ಕುಮಾರ್ ಅವರ ಆಡಳಿತವು ಹತ್ತು ಸೀಟುಗಳಲ್ಲಿನ ಎಣಿಕೆಯನ್ನು ವಿಳಂಬ ಮಾಡುತ್ತಿದೆ. ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡುತ್ತಿಲ್ಲ. ಮುಖ್ಯಮಂತ್ರಿಗಳ ಮನೆಯಲ್ಲಿ ಕುಳಿತು ನಿತೀಶ್ ಕುಮಾರ್ ಮತ್ತು ಸುಶೀಲ್ ಕುಮಾರ್ ಮೋದಿ, ಮತಗಳ ಅಂತರ ತೀರಾ ಕಡಿಮೆ ಇರುವ ಸೀಟುಗಳಲ್ಲಿ ಅಧಿಕಾರಿಗಳ ಮೇಲೆ ಮುಖ್ಯ ಕಾರ್ಯದರ್ಶಿ ಒತ್ತಡ ಹೇರುವಂತೆ ಮಾಡುತ್ತಿದ್ದಾರೆ' ಎಂದು ಆರ್ಜೆಡಿ ಆರೋಪ ಮಾಡಿತ್ತು.
ಆರ್ಜೆಡಿಯ ಸೀಟುಗಳನ್ನು 105-110ರ ನಡುವೆಯೇ ಇರುವಂತೆ ನೋಡಿಕೊಳ್ಳಲು ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ನಿತೀಶ್ ಹಾಗೂ ಸುಶೀಲ್ ಒತ್ತಡ ಹೇರುತ್ತಿದ್ದಾರೆ. ಜನರ ತೀರ್ಪನ್ನು ಲೂಟಿ ಮಾಡಲು ಆರ್ಜೆಡಿ ಬಿಡುವುದಿಲ್ಲ ಎಂದು ಅದು ಹೇಳಿತ್ತು.
Recommended Video
119 ಕ್ಷೇತ್ರಗಳಲ್ಲಿನ ವಿಜೇತ ಅಭ್ಯರ್ಥಿಗಳ ಪಟ್ಟಿಯನ್ನು ಹಂಚಿಕೊಂಡಿರುವ ಆರ್ಜೆಡಿ, ಗೆಲುವಿಗಾಗಿ ತನ್ನ ಅಭ್ಯರ್ಥಿಗಳನ್ನು ರಿಟರ್ನಿಂಗ್ ಅಧಿಕಾರಿ ಈಗಾಗಲೇ ಅಭಿನಂದಿಸಿದ್ದಾರೆ. ಆದರೆ ಅವರು ಸೋಲು ಅನುಭವಿಸಿದ್ದಾರೆ ಎಂದು ಹೇಳುವ ಮೂಲಕ ಪ್ರಮಾಣಪತ್ರ ನೀಡಲು ನಿರಾಕರಿಸಿದ್ದಾರೆ ಎಂದು ಮತ್ತೊಂದು ಆರೋಪ ಮಾಡಿದೆ.