ಲಾಲೂ ಪುತ್ರನಿಗೆ ಸೋಲಿನ ಭೀತಿ: ಬದಲಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ
ಪಾಟ್ನಾ, ಅಕ್ಟೋಬರ್.14: ಬಿಹಾರ ವಿಧಾನಸಭಾ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಚುರುಕುಗೊಂಡಿದೆ. ಬುಧವಾರ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ.
ನವೆಂಬರ್.03ರಂದು ಎರಡನೇ ಹಂತದಲ್ಲಿ ಸಮಸ್ತಿಪುರ್ ಜಿಲ್ಲೆಯ ಹಸನ್ ಪುರ್ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಆರ್ ಜೆಡಿ ಅಭ್ಯರ್ಥಿಯಾಗಿ ತೇಜ್ ಪ್ರತಾಪ್ ಯಾದವ್ ನಾಮಪತ್ರ ಸಲ್ಲಿಸಿದರು. ಈ ವೇಳೆ ಸಹೋದರ ಮತ್ತು ಮಹಾಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಜೊತೆಗಿದ್ದರು.
ಬಿಹಾರ ಚುನಾವಣೆಯಲ್ಲಿ ಎನ್ಡಿಎ ದಿಗ್ವಿಜಯ: ಸಿ ವೋಟರ್ ಸಮೀಕ್ಷೆ
ಪಾಟ್ನಾದಿಂದ ಹೆಲಿಕಾಪ್ಟರ್ ಮೂಲಕ ಸಮಸ್ತಿಪುರ್ ತಲುಪಿದ ಇಬ್ಬರು ಸಹೋದರರು ತೇಜ್ ಪ್ರತಾಪ್ ಯಾದವ್ ಅವರ ನಾಮಪತ್ರ ಸಲ್ಲಿಕೆ ದಾಖಲೆಗಳನ್ನು ನೀಡಿದರು. ಇದೇ ಸಂದರ್ಭದಲ್ಲಿ ಭೋಲಾ ಯಾದವ್ ಕೂಡಾ ಹಾಜರಿದ್ದರು. 2015ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ವೈಶಾಲಿ ಜಿಲ್ಲೆ ಮಾಹುವಾ ಕ್ಷೇತ್ರದಿಂದ ಸ್ಪರ್ಧಿಸಿ ಜಯಭೇರಿ ಬಾರಿಸಿದ್ದ ತೇಜ್ ಪ್ರತಾಪ್ ಯಾದವ್ ಅವರು, ಈ ಬಾರಿ ಹಸನ್ ಪುರದಿಂದ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಕೊವಿಡ್-19 ಮಾನದಂಡಗಳ ಉಲ್ಲಂಘಿಸಿದ್ದಕ್ಕೆ ಕ್ರಮ
ತೇಜ್ ಪ್ರತಾಪ್ ಯಾದವ್ ನಾಮಪತ್ರ ಸಲ್ಲಿಕೆಗೆ ಸಂಬಂಧಿಸಿದಂತೆ ಔಪಚಾರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಇಬ್ಬರು ಸಹೋದರರು ಉಪ ವಿಭಾಗೀಯ ಅಧಿಕಾರಿ ರೋಸೆರಾ ಅವರ ಕಚೇರಿಗೆ ತೆರಳಿದರು. ಈ ವೇಳೆ ಎಸ್ಡಿಒ ಕಚೇರಿಯ ಹೊರಗೆ ನೂರಾರು ಆರ್ಜೆಡಿ ಕಾರ್ಯಕರ್ತರು ಒಟ್ಟುಗೂಡಿದ್ದು, ಸಾಮಾಜಿಕ ಅಂತರವನ್ನೇ ಮರೆತಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಮ್ಯಾಜಿಸ್ಟ್ರೇಟರ್ ಶಶಾಂಕ್ ಶುಭಂಕರ್ ಅವರು, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು. ನಾಯಕರು ಹುರುದುಂಬಿಸುವ ಆತುರದಲ್ಲಿ ಮಾನದಂಡ ಉಲ್ಲಂಘಿಸಿರುವ ಬಗ್ಗೆ ಸಾಕ್ಷ್ಯ ಸಂಗ್ರಹಿಸುವುದಕ್ಕಾಗಿ ವಿಡಿಯೋ ತುಣುಕುಗಳನ್ನು ನೀಡುವಂತೆ ಸೂಚಿಸಲಾಗಿದೆ ಎಂದರು.
ತೇಜ್ ಪ್ರತಾಪ್ ಯಾದವ್ ಕ್ಷೇತ್ರ ಬದಲಾವಣೆ ಕಾರಣವೇನು?
ಕಳೆದ ಬಾರಿ ಮಾಹುವಾದಲ್ಲಿ ಗೆಲುವು ಸಾಧಿಸಿದ್ದರೂ ತೇಜ್ ಪ್ರತಾಪ್ ಯಾದವ್ ಕ್ಷೇತ್ರ ಬದಲಾವಣೆ ಮಾಡಿದ್ದಾರೆ. ಶಾಸಕಿ ಚಂದ್ರಿಕಾ ರೈ ಅವರ ಪುತ್ರಿ ಐಶ್ವರ್ಯಾ ಅವರೊಂದಿಗೆ ವೈವಾಹಿಕ ವಿವಾದ ಹಿನ್ನೆಲೆ ತೇಜ್ ಪ್ರತಾಪ್, ತಮ್ಮ ಮಾಹುವಾ ಕ್ಷೇತ್ರದಿಂದ ದೂರ ಹೋಗುತ್ತಿದ್ದಾರೆ ಎಂದು ವರದಿಯಾಗಿದೆ. ಏಕೆಂದರೆ ಇತ್ತೀಚಿಗಷ್ಟೇ ಜೆಡಿಯು ಸೇರ್ಪಡೆಯಾದ ಚಂದ್ರಿಕಾ ರೈ ಅವರಿಗೆ ಮಾಹುವಾ ಕ್ಷೇತ್ರದಲ್ಲೂ ವ್ಯಾಪಕ ಬೆಂಬಲವಿದೆ. ಈ ಭೀತಿಯಲ್ಲೇ ತೇಜ್ ಪ್ರತಾಪ್ ಕ್ಷೇತ್ಪ ಬದಲಿಸಿದ್ದಾರೆ ಎಂತಲೂ ಹೇಳಲಾಗುತ್ತಿದೆ.
ಬಿಹಾರ ಪ್ರಚಾರಕರ ಪಟ್ಟಿಯಿಂದ 'ಸ್ಟಾರ್' ನಾಯಕರನ್ನು ಹೊರಗಿಟ್ಟ ಬಿಜೆಪಿ!
ಬಿಹಾರ ಸಿಎಂ ವಿರುದ್ಧ ತೇಜಸ್ವಿ ಯಾದವ್ ಕೆಂಡಾಮಂಡಲ
ತೇಜ್ ಪ್ರತಾಪ್ ಯಾದವ್ ನಾಮಪತ್ರ ಸಲ್ಲಿಸಿ ಹೊರ ಬರುತ್ತಿದ್ದಂತೆ ಸಹೋದರ ತೇಜಸ್ವಿ ಯಾದವ್, ಸಿಎಂ ನಿತೀಶ್ ಕುಮಾರ್ ಸರ್ಕಾರದ ವಿರುದ್ಧ ಕಿಡಿ ಕಾರಿದರು. 15 ವರ್ಷಗಳಿಂದ ಅಭಿವೃದ್ಧಿ ಇಲ್ಲದೇ, ಉದ್ಯೋಗ ಸೃಷ್ಟಿಯಿಲ್ಲದೇ ಯುವಕರು ಹೊರರಾಜ್ಯಗಳಿಗೆ ಉದ್ಯೋಗ ಹುಡುಕಿಕೊಂಡು ಹೋಗುತ್ತಿದ್ದಾರೆ. ಬಿಹಾರದಲ್ಲಿ ಶೇ.46.60ರಷ್ಟು ನಿರುದ್ಯೋಗ ಸಮಸ್ಯೆಯಿದ್ದು, ದೇಶದಲ್ಲೇ ಈ ಪ್ರಮಾಣ ಅತಿಹೆಚ್ಚು ಎನಿಸುತ್ತದೆ. ಕೊವಿಡ್-19 ಸಾಂಕ್ರಾಮಿಕ ಪಿಡುಗಿನ ನಡುವೆ ಬಿಹಾರಿಗಳನ್ನು ತವರಿಗೆ ವಾಪಸ್ ಕರೆ ತರುವಲ್ಲಿಯೂ ಸರ್ಕಾರವು ಸೋತಿದೆ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.
2ನೇ ಹಂತದ ವಿಧಾನಸಭಾ ಚುನಾವಣೆ ಮತದಾನ
ಬಿಹಾರದಲ್ಲಿ ಎರಡನೇ ಹಂತದಲ್ಲಿ ನಡೆಯುವ 94 ವಿಧಾನಸಭಾ ಚುನಾವಣೆಗಳಿಗೆ ಈವರೆಗೂ 70 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. 78 ಸ್ಥಾನಗಳ ಮೂರನೇ ಹಂತದ ಮತದಾನಕ್ಕೆ ಮಂಗಳವಾರ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಅಕ್ಟೋಬರ್ 20 ರವರೆಗೆ ಪತ್ರಿಕೆಗಳನ್ನು ಸಲ್ಲಿಸಲು ಅವಕಾಶವಿದೆ ಎಂದು ಹೆಚ್ಚುವರಿ ಚುನಾವಣಾ ಮುಖ್ಯಾಧಿಕಾರಿ ಸಂಜಯ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ. ಇದರ ಜೊತೆ ಮಂಗಳವಾರದಿಂದಲೇ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರ ಉಪ ಚುನಾವಣೆಗೂ ನಾಮಪತ್ರ ಪ್ರಕ್ರಿಯೆ ಶುರುವಾಗಲಿದೆ ಎಂದು ತಿಳಿಸಿದ್ದಾರೆ.