ಬಿಹಾರದ ದಿಗ್ವಿಜಯಕ್ಕೆ ಡಬಲ್ ಇಂಜಿನ್" ಕಾರಣ ಎಂದ ಅಮಿತ್ ಶಾ!
ನವದೆಹಲಿ, ನವೆಂಬರ್.12: ಬಿಹಾರ ವಿಧಾನಸಭಾ ಚುನಾವಣೆ ಮತ್ತು ಉಪ ಚುನಾವಣೆಗಳಲ್ಲಿ ಟೊಳ್ಳು ರಾಜಕೀಯ, ಜಾತಿವಾದದ ವಿರುದ್ಧ ಮತದಾರರು ಅಭಿವೃದ್ಧಿ ಪಥವನ್ನು ಆಯ್ಕೆ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ನವದೆಹಲಿಯಲ್ಲಿ ಬಿಹಾರ ವಿಧಾನಸಭೆ ಮತ್ತು ಉಪ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(NDA)ದ ಗೆಲುವಿನ ಕುರಿತು ಅಮಿತ್ ಶಾ ಸರಣಿ ಟ್ವೀಟ್ ಮಾಡಿದ್ದಾರೆ. ಸಾರ್ವತ್ರಿಕ ಚುನಾವಣೆಗಳಲ್ಲಿ ಮತದಾರರು ಸರಿಯಾದ ತೀರ್ಪು ನೀಡಿದ್ದಾರೆ. ಎಲ್ಲದರಲ್ಲೂ ತಪ್ಪು ಹುಡುಕುವ ನಾಯಕರು ಮತ್ತು ಪಕ್ಷಗಳನ್ನು ತಿರಸ್ಕರಿಸಿದ್ದಾರೆ ಎಂದು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಎನ್ಡಿಎ ಗೆದ್ದಿದ್ದು ಹಣ, ತೋಳ್ಬಲದಿಂದ: ತೇಜಸ್ವಿ ಯಾದವ್ ಆರೋಪ
ಬಿಹಾರದಲ್ಲಿ ಎನ್ ಡಿಎ ಮೈತ್ರಿಕೂಟದ ದಿಗ್ವಿಜಯವು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಡಬಲ್ ಇಂಜಿನ್ ಸರ್ಕಾರದ ಗೆಲುವು ಎಂದು ಅಮಿತ್ ಶಾ ಬಣ್ಣಿಸಿದ್ದಾರೆ.
ಟೊಳ್ಳು ರಾಜಕಾರಣಿಗಳಿಗೆ ಪಾಠ:
ಬಿಹಾರ ಚುನಾವಣೆಯಲ್ಲಿ ಪ್ರಧಾನಿ ಮತ್ತು ಎನ್ಡಿಎ ನೀತಿಗಳನ್ನು ಜನರು ಬೆಂಬಲಿಸಿದ ಉತ್ಸಾಹವನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ಟೊಳ್ಳು ರಾಜಕೀಯ, ಜಾತಿವಾದ ಮತ್ತು ಸಮಾಧಾನಕರ ರಾಜಕೀಯವನ್ನು ಮತದಾರರು ನಿರಾಕರಿಸಿದ್ದಾರೆ. ಆ ಮೂಲಕ ಬಿಹಾರದ ಪ್ರತಿಯೊಂದು ವಿಭಾಗವು ಮತ್ತೊಮ್ಮೆ ಎನ್ಡಿಎ ಅಭಿವೃದ್ಧಿಯ ಮಾರ್ಗವನ್ನೇ ಆಯ್ಕೆ ಮಾಡಿದ್ದಾರೆ. ಅಭಿವೃದ್ಧಿ, ಪ್ರಗತಿ ಮತ್ತು ಉತ್ತಮ ಆಡಳಿತವನ್ನು ಮರು ಆಯ್ಕೆ ಮಾಡಿದ್ದಕ್ಕಾಗಿ ರಾಜ್ಯದ ಎಲ್ಲ ಸಹೋದರ ಸಹೋದರಿಯರಿಗೆ ನನ್ನ ಹೃದಯದ ಮೂಲದಿಂದ ಧನ್ಯವಾದಗಳು.
ಬಿಹಾರದಲ್ಲಿ ಭದ್ರತೆ ಮತ್ತು ಉಜ್ವಲ ಭವಿಷ್ಯವನ್ನು ಆಯ್ಕೆ ಮಾಡುವ ಮೂಲಕ ಸಂಪೂರ್ಣ ಬಹುಮತದೊಂದಿಗೆ ಎನ್ಡಿಎ ಸರ್ಕಾರವನ್ನು ರಚಿಸಿದ ಯುವಕರು ಮತ್ತು ಮಹಿಳೆಯರಿಗೆ ನಾನು ವಿಶೇಷವಾಗಿ ಧನ್ಯವಾದ ಅರ್ಪಿಸುತ್ತೇನೆ ಎಂದು ಅಮಿತ್ ಶಾ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಬಿಹಾರ ಫಲಿತಾಂಶವು ಕೊರೊನಾವೈರಸ್ ಸಂದಿಗ್ಧ ಸ್ಥಿತಿಯಲ್ಲಿ ಸರ್ಕಾರವು ಹೇಗೆ ಕಾರ್ಯನಿರ್ವಹಿಸಿದೆ ಎಂಬುದಕ್ಕೆ ತಾಜಾ ನಿದರ್ಶನವಾಗಿದೆ. ಮೋದಿ ಸರ್ಕಾರ ನಡೆಸಿದ ಯಶಸ್ವಿ ಹೋರಾಟದ ಬಗ್ಗೆ ಬಡವರು, ಕಾರ್ಮಿಕರು, ರೈತರು ಮತ್ತು ಯುವಕರು ಹೊಂದಿರುವ ನಂಬಿಕೆಯನ್ನು ಫಲಿತಾಂಶವು ಪ್ರತಿಬಿಂಬಿಸುತ್ತದೆ. ಇದರ ಜೊತೆಗೆ ದೇಶದ ಜನರ ದಾರಿ ತಪ್ಪಿಸುವವರಿಗೆ ಇದೊಂದು ಉತ್ತಮ ಪಾಠವಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.