ನನ್ನ ಅಪ್ಪನನ್ನು ನಿತೀಶ್ ಕುಮಾರ್ ಅವಮಾನಿಸಿದ್ದರು: ಚಿರಾಗ್ ಪಾಸ್ವಾನ್ ಕಿಡಿ
ಪಟ್ನಾ, ಅಕ್ಟೋಬರ್ 15: ಜೆಡಿಯು ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಜತೆಗಿನ ತಮ್ಮ ಸಂಘರ್ಷಕ್ಕೂ ಬಿಹಾರ ವಿಧಾನಸಭೆ ಚುನಾವಣೆಯಲ್ಲಿನ ಸೀಟುಗಳ ಹಂಚಿಕೆಗೂ ಸಂಬಂಧವಿಲ್ಲ. ನಿತೀಶ್ ಅವರ ರಾಜಕೀಯವನ್ನು ತಮ್ಮ ಪಕ್ಷ ಯಾವಾಗಲೂ ವಿರೋಧಿಸುತ್ತಲೇ ಬಂದಿದೆ ಎಂದು ಲೋಕ್ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಕಳೆದ ವರ್ಷದ ಲೋಕಸಭೆ ಚುನಾವಣೆಯಲ್ಲಿ ಜೆಡಿಯು ಜತೆಗೂಡಿ ತಮ್ಮ ಪಕ್ಷ ಸ್ಪರ್ಧಿಸಲು ನಿತೀಶ್ ಕುಮಾರ್ ಎನ್ಡಿಎಗೆ ಮರಳಿ ಬಂದಿದ್ದರಿಂದ ಅನಿವಾರ್ಯವಾಗಿತ್ತಷ್ಟೇ. ಆದರೆ ಸಮ್ಮಿಶ್ರ ಧರ್ಮವನ್ನು ಉಲ್ಲಂಘಿಸಿ ಅವರು ಎಲ್ಜೆಪಿ ಅಭ್ಯರ್ಥಿಗಳ ವಿರುದ್ಧ ಕೆಲಸ ಮಾಡಿದ್ದರು ಎಂದು ಪಾಸ್ವಾನ್ ಆರೋಪಿಸಿದ್ದಾರೆ.
ಎಲ್ಜೆಪಿ ಸಂಸ್ಥಾಪಕ ಮತ್ತು ಕೇಂದ್ರ ಸಚಿವರೂ ಆಗಿದ್ದ ತಂದೆ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಇತ್ತೀಚೆಗೆ ಕಳೆದುಕೊಂಡಿರುವ ಚಿರಾಗ್ ಪಾಸ್ವಾನ್, ಬಿಹಾರ ವಿಧಾನಸಭೆ ಚುನಾವಣೆಯ ಚಟುವಟಿಕೆಗಳಿಗೆ ಮರಳಿದ್ದಾರೆ. ಕಳೆದ ವರ್ಷ ರಾಜ್ಯಸಭೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಜತೆಗೆ ಇರುವಂತೆ ಜೆಡಿಯು ಮುಖ್ಯಸ್ಥರನ್ನು ರಾಮ್ ವಿಲಾಸ್ ಪಾಸ್ವಾನ್ ಮನವಿ ಮಾಡಿದ್ದರು. ಆಗ ನಿತೀಶ್ ಕುಮಾರ್ ಅಹಂಕಾರದಿಂದ ವರ್ತಿಸಿದ್ದರು ಎಂದು ಆರೋಪಿಸಿದ್ದಾರೆ. ಮುಂದೆ ಓದಿ.

ಅಪ್ಪನನ್ನು ನಿತೀಶ್ ಅಣಕಿಸಿದ್ದರು
ನಾವು ಕೇವಲ ಎರಡು ಶಾಸಕ ಸ್ಥಾನಗಳನ್ನು ಪಡೆದಿರುವುದರಿಂದ ಜೆಡಿಯು ಬೆಂಬಲ ಇಲ್ಲದೆ ರಾಜ್ಯಸಭೆಗೆ ಆಯ್ಕೆಯಾಗುವುದಿಲ್ಲ ಎಂದು ನಿತೀಶ್ ಕುಮಾರ್ ಇತ್ತೀಚೆಗೆ ನನ್ನ ತಂದೆಯನ್ನು ಅಣಕಿಸಿದ್ದರು. ಬಿಜೆಪಿಯ ಹಿಂದಿನ ಅಧ್ಯಕ್ಷ ಅಮಿತ್ ಶಾ ಅವರೇ ನನ್ನ ತಂದೆಗೆ ರಾಜ್ಯಸಭೆಯ ಸೀಟು ನೀಡುವುದಾಗಿ ಭರವಸೆ ನೀಡಿದ್ದರು ಎಂಬುದನ್ನು ಅವರು ನೆನಪಿಟ್ಟುಕೊಳ್ಳಬೇಕು' ಎಂದು ಚಿರಾಗ್ ಕಿಡಿಕಾರಿದ್ದಾರೆ.

ಯಾವ ಮಗನೂ ಸಹಿಸಲಾರ
'ನಾಮಪತ್ರ ಸಲ್ಲಿಸಲು ಜತೆಗೆ ಬರುವಂತೆ ಕೇಳಿದಾಗ ನಿತೀಶ್ ಕುಮಾರ್ ದರ್ಪದಿಂದ ನಡೆದುಕೊಂಡಿದ್ದರು. ಅದು ನನಗೆ ಬಹಳ ಆಕ್ರೋಶ ತರಿಸಿತ್ತು. ಮುಹೂರ್ತ ಮುಗಿದ ಬಳಿಕವಷ್ಟೇ ಅವರು ಅಲ್ಲಿಗೆ ಬಂದಿದ್ದರು. ಆ ರೀತಿ ಅವಮಾನಿಸುವಂತೆ ನಡೆದುಕೊಂಡಿದ್ದನ್ನು ಯಾವ ಮಗನೂ ಸಹಿಸುವುದಿಲ್ಲ' ಎಂದಿದ್ದಾರೆ.

ದಲಿತರಿಗೆ ಹಾನಿ ಮಾಡಿದ ನಿತೀಶ್
'ನಿತೀಶ್ ಕುಮಾರ್ ಅವರ ಶೈಲಿಯ ರಾಜಕಾರಣಕ್ಕೆ ಎಂದಿಗೂ ಎಲ್ಜೆಪಿ ಅಭಿಮಾನಿಯಾಗಿರಲಿಲ್ಲ. ತಮ್ಮ ರಾಜಕೀಯ ಲಾಭಕ್ಕಾಗಿ ಮಹಾದಲಿತ ಎಂಬ ಉಪ ಪಂಗಡ ಮಾಡುವ ಮೂಲಕ ದಲಿತರಿಗೆ ಹಾನಿ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.
Recommended Video

ಪ್ರತಿ ಯೋಜನೆಯಲ್ಲೂ ಅಕ್ರಮ
'ಭ್ರಷ್ಟಾಚಾರ, ಅಪರಾಧ ಮತ್ತು ಕೋಮು ದ್ವೇಷದ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಪ್ರದರ್ಶಿಸುವ ಪ್ರಯತ್ನವನ್ನೇ ನಿತೀಶ್ ಕುಮಾರ್ ನಡೆಸಿಲ್ಲ. ರಾಜ್ಯದಲ್ಲಿ ಪ್ರತಿ ಸರ್ಕಾರಿ ಯೋಜನೆ ಜಾರಿಗೆ ಬರುವಾಗಲೂ ಅವ್ಯವಹಾರ ನಡೆದಿದೆ ಎನ್ನುವ ಸತ್ಯ ಕಣ್ಣಿಗೆ ರಾಚುತ್ತಿದೆ. ಬಕ್ಸರ್ ಜಿಲ್ಲೆಯಲ್ಲಿ ಮಹಿಳೆಯನ್ನು ಅತ್ಯಾಚಾರ ಮಾಡಿ ಸಜೀವ ಸುಟ್ಟಂತಹ ಭಯಾನಕ ಘಟನೆಗಳು ಇತ್ತೀಚೆಗೆ ನಡೆದಿವೆ' ಎಂದು ನಿತೀಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.











Click it and Unblock the Notifications