ನನಗೆ ಅಪಾಯವಾದರೆ ಎನ್ಡಿಎ ಹೊಣೆ: ಕಾಂಗ್ರೆಸ್ ಅಭ್ಯರ್ಥಿ
ಪಟ್ನಾ, ಅಕ್ಟೋಬರ್ 17: ಮೊಹಮ್ಮದ್ ಅಲಿ ಜಿನ್ನಾ ಪರ 'ಸಹಾನುಭೂತಿ' ಹೊಂದಿರುವ ಅಭ್ಯರ್ಥಿಯನ್ನು ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕಣಕ್ಕಿಳಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಎಎಂಯು ಹಳೆಯ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಮಸ್ಕೂರ್ ಉಸ್ಮಾನಿ, ಚುನಾವಣೆ ಸಂದರ್ಭದಲ್ಲಿ ತಮ್ಮ ಸುರಕ್ಷತೆಗೆ ಯಾವುದೇ ರೀತಿ ಸಮಸ್ಯೆಯುಂಟಾದರೂ ಅದಕ್ಕೆ ಎನ್ಡಿಎ ಕಾರಣ ಎಂದು ಹೇಳಿದ್ದಾರೆ.
ದರ್ಭಾಂಗಾ ಜಿಲ್ಲೆಯ ಜಾಲೆ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಉಸ್ಮಾನಿ ಅವರನ್ನು ಕಣಕ್ಕಿಳಿಸುವುದರ ವಿರುದ್ಧ ಕಿಡಿಕಾರಿದ್ದ ಬೇಗುಸರೈ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಪಾಕಿಸ್ತಾನ ಮುಖಂಡನ ಸಿದ್ಧಾಂತಗಳನ್ನು ಮಹಾ ಘಟಬಂಧನ ಬೆಂಬಲಿಸುತ್ತದೆಯೇ ಎಂದು ಪ್ರಶ್ನಿಸಿದ್ದರು.
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದಿರುವ ಉಸ್ಮಾನಿ, ವಿವಿಧ ಟೆಲಿವಿಷನ್ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ್ದು, ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಜತೆಗೆ ಚುನಾವಣೆಯ ವೇಳೆ ಭವಿಷ್ಯದಲ್ಲಿ ತಮ್ಮ ಮೇಲೆ ದಾಳಿ ನಡೆಯುವ ಅಪಾಯವಿದ್ದು, ಇದನ್ನು ಗಂಭೀರ ಪ್ರಕರಣವೆಂದು ಸರ್ಕಾರ ಪರಿಗಣಿಸಬೇಕು ಎಂದು ಹೇಳಿದ್ದಾರೆ.

'ನಿನ್ನೆಯಿಂದಲೂ ಅನೇಕ ಸುದ್ದಿ ಮಾಧ್ಯಮಗಳು ಸುಳ್ಳು ಮತ್ತು ಆಕ್ರಮಣಕಾರಿ ವರದಿಗಳನ್ನು ನನ್ನ ವಿರುದ್ಧ ಪ್ರಸಾರ ಮಾಡುತ್ತಿದ್ದು, ಮುಂಬರುವ ಚುನಾವಣೆ ಮೇಲೆ ಪ್ರಭಾವ ಬೀರುವ ಪ್ರಯತ್ನ ಮಾಡುತ್ತಿವೆ. ಈ ಮಾಧ್ಯಮ ಸಂಸ್ಥೆಗಳ ವಿರುದ್ಧ ನಾನು ಮಾನಹಾನಿ ಪ್ರಕರಣ ದಾಖಲಿಸಬಹುದು. ಆದರೆ ಈ ವರದಿಗಳು ನನ್ನ ಜೀವಕ್ಕೆ ಅಪಾಯ ಉಂಟುಮಾಡುತ್ತಿವೆ. ನನ್ನ ಮೇಲೆ ದಾಳಿಗಳಾಗಬಹುದು ಎಂದು ನನ್ನ ಹಿತೈಷಿಗಳು ಕಳವಳಗೊಂಡಿದ್ದಾರೆ' ಎಂದು ಅವರು ಹೇಳಿದ್ದಾರೆ.
ಭವಿಷ್ಯದಲ್ಲಿ ಅಂತಹ ಘಟನೆ ನಡೆದರೆ ಅದಕ್ಕೆ ಎನ್ಡಿಎ ನೇರ ಹೊಣೆಯಾಗುತ್ತದೆ. ಈ ಕಾರಣದಿಂದ ನಾನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಹಾಗೂ ನನಗೆ ಸೂಕ್ತ ಭದ್ರತೆ ನೀಡುವಂತೆ ಕೋರುತ್ತೇನೆ ಎಂದು ಹೇಳಿದ್ದಾರೆ.












Click it and Unblock the Notifications