ಬಿಹಾರ ಚುನಾವಣೆ: ತೇಜಸ್ವಿ ಸೂರ್ಯ Vs ತೇಜಸ್ವಿ ಯಾದವ್ ಮಾತಿನ ಮಲ್ಲಯುದ್ದ
ಪಾಟ್ನಾ, ಸೆ 28: ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿರುವ ಬಿಹಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರುತ್ತಿದೆ. ಅಕ್ಟೋಬರ್ -ನವೆಂಬರ್ ತಿಂಗಳಲ್ಲಿ ಅಲ್ಲಿ ಚುನಾವಣೆ ನಡೆಯಲಿದೆ.
ತಂದೆ ಲಾಲೂ ಪ್ರಸಾದ್ ಯಾದವ್ ಜೈಲು ಸೇರಿದ ನಂತರ, ಆರ್ಜೆಡಿ ಪಕ್ಷವನ್ನು ಮುನ್ನಡೆಸುತ್ತಿರುವ ಅವರ ಪುತ್ರ ತೇಜಸ್ವಿ ಯಾದವ್, ಕಾಲಿಗೆ ಚಕ್ರ ಕಟ್ಟಿಕೊಂಡು, ಪಕ್ಷದ ವೈಭವವನ್ನು ಮರುತರಲು ಪ್ರಯತ್ನಿಸುತ್ತಿದ್ದಾರೆ.
ಇತ್ತ, ನಿತೀಶ್ ಕುಮಾರ್ ಅವರನ್ನು ಮತ್ತೆ ಎನ್ಡಿಎ ಮೈತ್ರಿಕೂಟ ತನ್ನ ಸಿಎಂ ಅಭ್ಯರ್ಥಿ ಎಂದು, ಚುನಾವಣೆಗೆ ದಿನಾಂಕ ಪ್ರಕಟವಾಗುವ ಮುನ್ನವೇ ಪ್ರಕಟಿಸಿತ್ತು. ಖುದ್ದು, ಪ್ರಧಾನಿ ಮೋದಿಯೇ ಈ ಘೋಷಣೆಯನ್ನು ಮಾಡಿದ್ದರು.
ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ನಿರುದ್ಯೋಗದ ಸಮಸ್ಯೆಯನ್ನು ಮೊದಲ ಆದ್ಯತೆಯಾಗಿ ತೆಗೆದುಕೊಳ್ಳಲಾಗುವುದು ಎನ್ನುವ ತೇಜಸ್ವಿ ಯಾದವ್ ಹೇಳಿಕೆಗೆ, ಬಿಜೆಪಿಯ ರಾಷ್ಟ್ರೀಯ ಯುವಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ.

ಹತ್ತು ಲಕ್ಷ ಸರಕಾರೀ ನೇಮಕಾತಿ
"ಮುಂಬರುವ ಚುನಾವಣೆಯಲ್ಲಿ ಆರ್ಜೆಡಿ ನೇತೃತ್ವದ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ, ಮುಖ್ಯಮಂತ್ರಿ ಆಗುವವರು ಸಹಿ ಮಾಡುವ ಮೊದಲ ಆದೇಶವೇ ಹತ್ತು ಲಕ್ಷ ಸರಕಾರೀ ನೇಮಕಾತಿ"ಎಂದು ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹಲವು ಬಿಹಾರಿ ಸ್ನೇಹಿತರಿದ್ದಾರೆ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ತೇಜಸ್ವಿ ಸೂರ್ಯ,"ನನಗೂ ಬೆಂಗಳೂರಿನಲ್ಲಿ ಹಲವು ಬಿಹಾರಿ ಸ್ನೇಹಿತರಿದ್ದಾರೆ. ಅವರ ಪ್ರತಿಭೆಗೆ ತಕ್ಕಹಾಗೇ ಅವಕಾಶ ಸಿಗಬೇಕು. ವಂಶಪಾರಂಪರ್ಯ ಮಾಡುವವರಿಗೆ ಸ್ವಂತ ದುಡಿಮೆಯ ಅನುಭವ ಇರುವುದಿಲ್ಲ"ಎಂದು ತಿರುಗೇಟು ನೀಡಿದ್ದಾರೆ.

ಸಿಎಂ ನಿತೀಶ್ ಕುಮಾರ್ ಅವರನ್ನು ತೇಜಸ್ವಿ ಯಾದವ್ ಪ್ರಶ್ನೆ ಮಾಡಿದ್ದರು
"ಕಳೆದ 15 ವರ್ಷಗಳಿಂದ ಸುಳ್ಳು ಭರವಸೆ ಮತ್ತು ಆಶ್ವಾಸನೆ ನೀಡಿದವರ ಆಡಳಿತ ವೈಖರಿಯನ್ನು ಜನರು ಈಗಾಗಲೇ ಕಂಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಪ್ರತಿ ಒಂದು ಸಾವಿರ ಜನರಿಗೆ ಒಬ್ಬ ವೈದ್ಯರನ್ನು ನೇಮಿಸಿರಬೇಕು. ಇಲ್ಲಿ, ಪೊಲೀಸ್ ಇಲಾಖೆಯಲ್ಲೂ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಬೇಕಿದ್ದು, ಇದನ್ನೆಲ್ಲ ಸರ್ಕಾರ ಮಾಡಲಿಲ್ಲವೇಕೆ ಎಂದು ಸಿಎಂ ನಿತೀಶ್ ಕುಮಾರ್ ಅವರನ್ನು ತೇಜಸ್ವಿ ಯಾದವ್ ಪ್ರಶ್ನೆ ಮಾಡಿದ್ದರು.

ತೇಜಸ್ವಿ ಸೂರ್ಯ Vs ತೇಜಸ್ವಿ ಯಾದವ್ ಮಾತಿನ ಮಲ್ಲಯುದ್ದ
"ವಿವಿಧ ಯೋಜನೆಗಳ ಮೂಲಕ ಇದುವರೆಗಿನ ಯಾವ ಕೇಂದ್ರ ಸರಕಾರವೂ ಮಾಡದಷ್ಟು ಉದ್ಯೋಗ ಸೃಷ್ಟಿಯನ್ನು ಮೋದಿ ಸರಕಾರ ಮಾಡಿದೆ. ನಿತೀಶ್ ಕುಮಾರ್ ಮತ್ತು ನಮ್ಮ ಪ್ರಧಾನಿಗಳಿಗೆ ನಿರುದ್ಯೋಗ ಎಂತಹ ಕಷ್ಟ ಎನ್ನುವ ಅನುಭವವಿದೆ"ಎಂದು ತೇಜಸ್ವಿ ಸೂರ್ಯ, ತೇಜಸ್ವಿ ಯಾದವ್ ಗೆ ತಿರುಗೇಟು ನೀಡಿದ್ದಾರೆ.












Click it and Unblock the Notifications