ಗೋವಾದಲ್ಲಿ ನಿಲ್ಲದ ಕನ್ನಡಿಗರ ಮೇಲಿನ ದೌರ್ಜನ್ಯ: ಮತ್ತೆ ಪುಂಡಾಟ ಮಾಡಿದ 'ರೆವಲ್ಯೂಷನರಿ ಗೋವನ್ಸ್'
ಪಣಜಿ, ಅಕ್ಟೋಬರ್ 14: ಗೋವಾದಲ್ಲಿ ಕೆಲ ಸಮಯ ತಣ್ಣಗಾಗಿದ್ದ "ರೆವಲ್ಯೂಷನರಿ ಗೋವನ್ಸ್' ಕಾರ್ಯಕರ್ತರ ಪುಂಡಾಟ ಮತ್ತೆ ಶುರುವಾಗಿದೆ. ನವರಾತ್ರಿ ಅಂಗವಾಗಿ ಟನ್ಗಟ್ಟಲೆ ಹೂವನ್ನು ಮಾರಾಟಕ್ಕೆ ತಂದಿದ್ದ ಕರ್ನಾಟಕದ ವ್ಯಾಪಾರಿಗಳನ್ನು "ರೆವಲ್ಯೂಷನರಿ ಗೋವನ್ಸ್' ತಂಡ ವ್ಯಾಪಾರಕ್ಕೆ ಅವಕಾಶ ನೀಡದೆ ಅತಂತ್ರರನ್ನಾಗಿಸಿದೆ.
ನವರಾತ್ರಿಯ ಆಯುಧ ಪೂಜೆ ಅಂಗವಾಗಿ ಉತ್ತರ ಕರ್ನಾಟಕದ ಭಾಗದಿಂದ ಹತ್ತಾರು ವ್ಯಾಪಾರಿಗಳು ಪ್ರತಿವರ್ಷದಂತೆ ಹೂವುಗಳ ಮಾರಾಟಕ್ಕೆಂದು ಗೋವಾಕ್ಕೆ ತೆರಳಿದ್ದರು. ರಸ್ತೆ ಪಕ್ಕದಲ್ಲಿ ಹೂವುಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದರು. ಆದರೆ ಇದನ್ನು ಕಂಡು ಸಹಿಸದ "ರೆವಲ್ಯೂಷನರಿ ಗೋವನ್ಸ್' ಕಾರ್ಯಕರ್ತರು ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ.

ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಒತ್ತಡ
ಅಲ್ಲದೇ ಮರ್ಗಾವ್ ಮುನ್ಸಿಪಲ್ ಕೌನ್ಸಿಲ್ಗೆ ಮಾಹಿತಿ ನೀಡಿ, ಕರ್ನಾಟಕದ ಬೀದಿ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಒತ್ತಡ ಹೇರಿದ್ದಾರೆ. ಇದರಿಂದಾಗಿ ಸ್ಥಳಕ್ಕೆ ಭೇಟಿ ನೀಡಿದ ಮರ್ಗಾವ್ ಮುನ್ಸಿಪಲ್ ಕೌನ್ಸಿಲ್ ಅಧಿಕಾರಿಯೊಬ್ಬರು, ಕರ್ನಾಟಕದ ವ್ಯಾಪಾರಿಗಳು ತಂದಿದ್ದ ಹೂವುಗಳನ್ನೆಲ್ಲ ಮುನ್ಸಿಪಲ್ ಕೌನ್ಸಿಲ್ ಗಾಡಿಗೆ ತುಂಬಿಕೊಂಡು ತೆರಳಿದ್ದಾರೆ. "ನಾವೇ ತೆಗೆದುಕೊಂಡು ಹೋಗುತ್ತೇವೆ' ಎಂದು ವ್ಯಾಪಾರಿಗಳು ಪರಿಪರಿಯಾಗಿ ಬೇಡಿಕೊಂಡರೂ ಬಿಡದೇ, ಕಸ ತುಂಬಿದಂತೆ ತಾಜಾ ಹೂವುಗಳನ್ನು ಮುನ್ಸಿಪಲ್ ಗಾಡಿಗೆ ತುಂಬಿಕೊಂಡು ತೆರಳಿದ್ದಾರೆ.

ಪೊಲೀಸರು ಕೂಡ ವ್ಯಾಪಾರಿಗಳಿಗೆ ದಂಡ ವಿಧಿಸಿದ್ದರು
ಇದಕ್ಕೂ ಮುನ್ನ ಪೊಲೀಸರು ಕೂಡ ವ್ಯಾಪಾರಿಗಳಿಗೆ ದಂಡ ವಿಧಿಸಿದ್ದರು. ದಂಡ ಪಾವತಿಸಿದ ಕಾರಣ ವ್ಯಾಪಾರಿಗಳು ತಮ್ಮ ವ್ಯಾಪಾರ ಮುಂದುವರಿಸಿದ್ದರು. ಆದರೆ ಅಷ್ಟರಲ್ಲೇ ಮುನ್ಸಿಪಲ್ ಕೌನ್ಸಿಲ್ನವರು ವ್ಯಾಪಾರಕ್ಕೆ ತಂದಿದ್ದ ಹೂವುಗಳನ್ನೆಲ್ಲ ಹೊತ್ತೊಯ್ದಿದ್ದಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಹೂವುಗಳನ್ನು ಲಾರಿಗಳಲ್ಲಿ ತಂದು, ಇದೀಗ ವಾಪಸ್ಸು ಹೋಗಲೂ ಕೈಯಲ್ಲಿ ಹಣವಿಲ್ಲದಾಗಿದೆ. ಊಟ- ತಿಂಡಿಗೂ ಹಣವಿಲ್ಲ ಎಂದು ವ್ಯಾಪಾರಿಗಳು ಅವಲತ್ತುಕೊಂಡಿದ್ದಾರೆ.
ಕರ್ನಾಟಕದಿಂದ ತರಕಾರಿ, ಹಾಲು ಗೋವಾಕ್ಕೆ ಬರುತ್ತದೆ. ನಾವು ಕೂಡ ಇಲ್ಲಿಯವರು ಮಾಡಿದಂತೆ ತರಕಾರಿ, ಹಾಲುಗಳನ್ನು ಗೋವಾಕ್ಕೆ ಹೋಗುವುದನ್ನು ತಡೆದರೆ ಸರಿಯಾಗುತ್ತದಾ? ನಾವು ಈವರೆಗೂ ಆ ರೀತಿ ಮಾಡಿಲ್ಲ. ಗೋವಾದವರು ಮಾತ್ರ ಕರ್ನಾಟಕದವರ ಮೇಲೆ ಈ ರೀತಿಯ ದೌರ್ಜನ್ಯ ಮುಂದುವರಿಸಿದ್ದಾರೆ ಎಂದು ವ್ಯಾಪಾರಿಯೊಬ್ಬ ಗೋವಾದ 'ಇನ್ ಗೋವಾ 24*7' ಎಂಬ ಸುದ್ದಿವಾಹಿನಿಗೆ ಹೇಳಿಕೆ ನೀಡಿದ್ದಾನೆ.

ಸುದ್ದಿವಾಹಿನಿಯ ಸಂಪಾದಕನ ಮೇಲೆ ರೇಗಾಡಿದ 'ಆರ್ಜಿ'ಗಳು
ಇನ್ನು ಮುನ್ಸಿಪಲ್ ಕೌನ್ಸಿಲ್ ಕರ್ನಾಟಕದ ವ್ಯಾಪಾರಿಗಳ ಮೇಲೆ ಈ ರೀತಿ ದೌರ್ಜನ್ಯ ನಡೆಸುತ್ತಿರುವುದನ್ನು ಕಂಡು ವರದಿ ಮಾಡುತ್ತಿದ್ದ ಗೋವಾದ 'ಇನ್ ಗೋವಾ 24*7' ಸುದ್ದಿವಾಹಿನಿಯ ಸಂಪಾದಕನ ಮೇಲೆ, ಸ್ಥಳದಲ್ಲೇ ಇದ್ದ 'ರೆವಲ್ಯೂಷನರಿ ಗೋವನ್ಸ್' ತಂಡ ರೇಗಾಡಿದೆ. ಯಾತಕ್ಕಾಗಿ ವ್ಯಾಪಾರಿಗಳನ್ನು ಎಬ್ಬಿಸುತ್ತಿದ್ದೀರಿ? ಎಂದು ಸಂಪಾದಕ ಸ್ಥಳದಲ್ಲಿದ್ದ ಮುನ್ಸಿಪಲ್ ಕೌನ್ಸಿಲ್ನ ಅಧಿಕಾರಿಯೊಬ್ಬರಿಂದ ಮಾಹಿತಿ ಪಡೆಯುತ್ತಿದ್ದ ವೇಳೆ ಬಂದ 'ಆರ್ಜಿ'ಗಳು, "ನೀನ್ಯಾರು? ಅಧಿಕಾರಿ ಅವರ ಕರ್ತವ್ಯ ಮಾಡುತ್ತಿದ್ದಾರೆ, ಅದನ್ನು ಪ್ರಶ್ನಿಸಲು ನಿನಗ್ಯಾವ ಹಕ್ಕಿದೆ? ಗೋವಾದ ವ್ಯಾಪಾರಿಗಳೆಲ್ಲರೂ ಶ್ರೀಮಂತರಿದ್ದಾರಾ? ಅವರು ವ್ಯಾಪಾರ ಮಾಡುವುದು ಬೇಡವಾ?'' ಎಂದೆಲ್ಲ ಸಂಪಾದಕನೊಂದಿಗೆ ವಾಗ್ವಾದ ನಡೆಸಿದ್ದಾರೆ.

ಪುಂಡಾಟ ಇದೇ ಮೊದಲೇನಲ್ಲ
'ರೆವಲ್ಯೂಷನರಿ ಗೋವನ್ಸ್' ತಂಡದ ಈ ಪುಂಡಾಟ ಇದೇ ಮೊದಲೇನಲ್ಲ. ಗೋವಾದಲ್ಲಿ ಕರ್ನಾಟಕದವರು ಕಂಡಾಗೆಲ್ಲ ಈ ರೀತಿ ಕನ್ನಡಿಗರ ಮೇಲೆ ಈ 'ಆರ್ಜಿ'ಗಳು ದೌರ್ಜನ್ಯ ನಡೆಸುತ್ತಲೇ ಇದ್ದಾರೆ. ಕೋವಿಡ್ ಪೂರ್ವದಲ್ಲಿ ಇವರ ಪುಂಡಾಟ ಮಿತಿ ಮೀರಿತ್ತು. 'ರೆವಲ್ಯೂಷನರಿ ಗೋವನ್ಸ್' ಎಂಬ ಅಭಿಯಾನ ಆರಂಭಿಸಿ ಗೋವನ್ನರಲ್ಲದ, ಪ್ರಮುಖವಾಗಿ ಕರ್ನಾಟಕದವರನ್ನು ಗೋವಾದಿಂದ ಹೊರ ದಬ್ಬಬೇಕೆಂಬಂತೆ ಕಾರ್ಯೋನ್ಮುಖರಾಗಿದ್ದರು. ಕರ್ನಾಟಕದ ಬೀದಿ ವ್ಯಾಪಾರಿಗಳು, ಪ್ರವಾಸಿಗರಿಗೆ ಪ್ರತಿನಿತ್ಯ ಪೀಡಿಸುತ್ತಿದ್ದರು. ಕೊನೆಗೆ ಇವರ ವಿರುದ್ಧ ಕೆಲವು ದೂರುಗಳು ದಾಖಲಾದ ಬಳಿಕ ಕೆಲ ಸಮಯ ಸುಮ್ಮನಾಗಿದ್ದ ತಂಡ, ಇದೀಗ ಮತ್ತೆ ತಮ್ಮ ಪುಂಡಾಟ ಶುರು ಮಾಡಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications