ಸಾಮಾಜಿಕ ಕಾರ್ಯಕರ್ತ ಎಎಪಿಗೆ ಸೇರ್ಪಡೆ: ಗೋವಾ ಸಿಎಂ ವಿರುದ್ಧ ಸ್ಪರ್ಧೆಗೆ ಸಜ್ಜು
ಪಣಜಿ, ನವೆಂಬರ್ 07: ಗೋವಾ ಮೈನಿಂಗ್ ಪೀಪಲ್ಸ್ ಫ್ರಂಟ್ ಮುಖ್ಯಸ್ಥ, ಸಾಮಾಜಿಕ ಕಾರ್ಯಕರ್ತ, ಕಾರ್ಮಿಕ ಸಂಘದ ನಾಯಕ ಪುತಿ ಗಾಂವ್ಕರ್, ಗೋವಾದಲ್ಲಿ ಭಾನುವಾರ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಗೊಂಡಿದ್ದಾರೆ.
ಪುತಿ ಗಾಂವ್ಕರ್ 2022 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿರುದ್ಧ ಸ್ಯಾಂಕ್ವೆಲಿಮ್ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಗೋವಾ ಮೈನಿಂಗ್ ಪೀಪಲ್ಸ್ ಫ್ರಂಟ್ ಮುಖ್ಯಸ್ಥರಾಗಿರುವ ಪುತಿ ಗಾಂವ್ಕರ್, ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.
ಈ ಬಗ್ಗೆ ಆಮ್ ಆದ್ಮಿ ಪಕ್ಷ ಹೇಳಿಕೆಯಲ್ಲಿ ತಿಳಿಸಿದೆ. "ಪುತಿ ಗಾಂವ್ಕರ್ ಅವರಂತಹ ನಾಯಕರ ಸೇರ್ಪಡೆಯಿಂದ ಗೋವಾದಲ್ಲಿ ಎಎಪಿಗೆ ಹೆಚ್ಚಿನ ಶಕ್ತಿ ಸಿಗುತ್ತದೆ. ಗಾಂವ್ಕರ್ ಅವರು ನನ್ನೊಂದಿಗೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. ಗಣಿಗಾರಿಕೆ ಅವಲಂಬಿತ ಕುಟುಂಬಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸಿದರು," ಎಂದು ಅರವಿಂದ್ ಕೇಜ್ರಿವಾಲ್ ಹೇಳಿರುವ ಮಾತುಗಳನ್ನು ಎಎಪಿ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ.

"ಎಎಪಿ ಅಧಿಕಾರಕ್ಕೆ ಬಂದರೆ, ಗೋವಾದಲ್ಲಿ ಆರು ತಿಂಗಳೊಳಗೆ ಪುತಿ ಗಾಂವ್ಕರ್ ಮಾರ್ಗದರ್ಶನದಲ್ಲಿ ಗಣಿಗಾರಿಕೆ ಪ್ರಾರಂಭವಾಗಲಿದೆ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ," ಎಂದು ಈ ಪತ್ರಿಕಾ ಹೇಳಿಕೆಯಲ್ಲಿ ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಗೋವಾ ಚುನಾವಣೆಯತ್ತ ಎಲ್ಲಾ ಪಕ್ಷಗಳ ಚಿತ್ತ
ಮುಂದಿನ ವರ್ಷ ಉತ್ತರ ಪ್ರದೇಶ, ಗೋವಾ, ಉತ್ತರಾಖಂಡ, ಪಂಜಾಬ್, ಮಣಿಪುರದಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಚುನಾವಣಾ ತಯಾರಿ ನಡೆಯುತ್ತಿದೆ. ಈಗ ಗೋವಾದ 40 ವಿಧಾನಸಭೆ ಸೀಟುಗಳ ಮೇಲೆ ಎಂಟು ಪಕ್ಷಗಳು ಕಣ್ಣು ಇಟ್ಟಿದೆ. ಗೋವಾದಲ್ಲಿ ಎಎಪಿ ಕೂಡಾ ಚುನಾವಣಾ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ಎಎಪಿ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೋವಾದಲ್ಲಿ ಎರಡು ದಿನಗಳ ಭೇಟಿಗಾಗಿ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್, "ನಾನು ಗಣಿಗಾರಿಕೆ ಅವಲಂಬಿತ ಕುಟುಂಬಗಳನ್ನು ಭೇಟಿಯಾಗುತ್ತೇನೆ ಹಾಗೂ ಹಲವು ದಶಕಗಳಿಂದ ತಮ್ಮ ಭೂಮಿಯ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕುಟುಂಬಗಳನ್ನು ಭೇಟಿಯಾಗುತ್ತೇನೆ," ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
"ಎಲ್ಲಾ ಪಕ್ಷಗಳು ಸಂಕ್ವೆಲಿಮ್ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನು ಹಿಂಪಡೆಯಬೇಕು ಮತ್ತು ಮುಖ್ಯಮಂತ್ರಿ ವಿರುದ್ಧ ಸ್ಪರ್ಧಿಸಲು ಆ ಸ್ಥಾನದಲ್ಲಿ ಪುತಿ ಗಾಂವ್ಕರ್ ಅವರನ್ನು ಬೆಂಬಲಿಸಬೇಕು," ಎಂದು ಸಣ್ಣ ಪಕ್ಷಗಳಿಗೆ ಮನವಿ ಮಾಡಿದ ಕೇಜ್ರಿವಾಲ್ ಇದೇ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷವು ದೇಶದ ಅತ್ಯಂತ "ಪ್ರಾಮಾಣಿಕ ಪಕ್ಷ" ಎಂದು ಹೇಳಿದರು. "ಗೋವಾ ಎಎಪಿಗೆ ಒಂದು ಅವಕಾಶ ನೀಡಿದರೆ ಗೋವಾ ಜನರು ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಶಾಶ್ವತವಾಗಿ ಮರೆತುಬಿಡುತ್ತಾರೆ. ಎಎಪಿ ಅಧಿಕಾರಕ್ಕೆ ಬಂದರೆ ಜನರು ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಶಾಶ್ವತವಾಗಿ ಮರೆತುಬಿಡುವಂತಹ ಆಡಳಿತ ನಮ್ಮದು ಆಗಲಿದೆ," ಎಂದು ಕೂಡಾ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದರು.
"ಕೇಜ್ರಿವಾಲ್ ಕಾರ್ಯ ನೋಡಿ ಎಎಪಿ ಸೇರ್ಪಡೆ"
ಇನ್ನು ತಾನು ಎಎಪಿಗೆ ಸೇರ್ಪಡೆ ಆಗಿರುವ ವಿಚಾರದ ಬಗ್ಗೆ ಮಾತನಾಡಿದ ಪುತಿ ಗಾಂವ್ಕರ್, "ದೆಹಲಿಯಲ್ಲಿ ಕೇಜ್ರಿವಾಲ್ ಮಾಡಿದ ಕಾರ್ಯಗಳಿಂದಾಗಿ ನಾನು ಸ್ಫೂರ್ತಿ ಪಡೆದು ಬಳಿಕ ಎಎಪಿಗೆ ಸೇರ್ಪಡೆ ಆಗಿದ್ದೇನೆ. ಎಎಪಿ ತಾನು ನೀಡುವ ಭರವಸೆಗಳನ್ನು ಈಡೇರಿಸುವ ಪಕ್ಷವಾಗಿದೆ. ಕೆಲವು ದಿನಗಳ ಹಿಂದೆ ನಾನು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಗಣಿಗಾರಿಕೆ, ಭೂ ಮಾಲೀಕತ್ವ ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಕೇಜ್ರಿವಾಲ್ ದೆಹಲಿಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ಉತ್ತಮ ಮೂಲಸೌಕರ್ಯ ಅಥವಾ ಉಚಿತ ವಿದ್ಯುತ್ ಭರವಸೆ ಆಗಲಿ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ," ಎಂದು ಶ್ಲಾಘಿಸಿದರು.
(ಒನ್ಇಂಡಿಯಾ ಸುದ್ದಿ)












Click it and Unblock the Notifications