ಚುನಾವಣೆ ಬಂದಾಗ ಮಾತ್ರ ಪ್ರಧಾನಿಗೆ ಗಂಗಾ ನೆನಪಾಗುತ್ತೆ: ಮಮತಾ
ಪಣಜಿ, ಡಿಸೆಂಬರ್ 15: ಚುನಾವಣೆ ಹತ್ತಿರ ಬಂದಾಗ ಮಾತ್ರ ಪ್ರಧಾನಿ ನರೇಂದ್ರ ಮೋದಿಗೆ ಗಂಗಾ ನೆನಪಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.
''ಕುಂಭ ಮೇಳದಂತೆ ಪಶ್ಚಿಮ ಬಂಗಾಳದ ಗಂಗಾಸಾಗರಕ್ಕೆ ಸುಮಾರು 23 ಲಕ್ಷ ಜನರು ಭೇಟಿ ನೀಡುತ್ತಾರೆ. ಆದರೆ ಚುನಾವಣೆ ಸಂದರ್ಭದಲ್ಲಿ ಮಾತ್ರ ನಾವು ಗಂಗಾನದಿ ಪೂಜೆ ಮಾಡುವುದಿಲ್ಲ. ಆದರೆ ತಮ್ಮ ಲೋಕಸಭಾ ಕ್ಷೇತ್ರವಾದ ವಾರಾಣಸಿಗೆ ಹೋಗಿರುವ ಮೋದಿ, ಕೇವಲ ಮತ ಪಡೆಯಲು ಮಾತ್ರ ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದಾರೆ'' ಎಂದು ಆರೋಪಿಸಿದರು. ವಾರಾಣಸಿಯಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಿದ್ದ ಪ್ರಧಾನಿ ಮೋದಿ, ಗಂಗಾ ನದಿಯಲ್ಲಿ ಸ್ನಾನ ಮಾಡಿದ್ದರು.
ಗೋವಾದಲ್ಲಿ ಮಾತನಾಡಿದ ಅವರು, ''ಮತಗಳನ್ನು ಪಡೆಯಲು ಪ್ರಧಾನಿ ಮೋದಿ ಏನು ಬೇಕಾದರೂ ಮಾಡುತ್ತಾರೆ. ಉತ್ತರಾಖಂಡದಲ್ಲಿ ತಪ್ಪಸ್ಸು (ಧ್ಯಾನ) ಮಾಡಿದ್ದರು. ಈಗ ಗಂಗಾನದಿಯಲ್ಲಿ ಸ್ನಾನ ಮಾಡಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಏನೂ ಬೇಕಾದರೂ ಮಾಡಲಿ, ಅವರಿಗೆ ಸ್ವಾತಂತ್ರ್ಯವಿದೆ. ಆದರೆ ವರ್ಷಪೂರ್ತಿ ನೀವು ಎಲ್ಲಿದ್ದಿರಿ' 'ಎಂದು ಪ್ರಶ್ನಿಸಿದರು.

ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಕೋವಿಡ್-19 ಮೃತದೇಹಗಳನ್ನು ಗಂಗಾ ನದಿಗೆ ಎಸೆಯುವ ಮೂಲಕ ಅಪವಿತ್ರಗೊಳಿಸಿದೆ ಎಂದು ಯೋಗಿ ಆದಿತ್ಮನಾಥ್ ಸರ್ಕಾರದ ವಿರುದ್ಧವೂ ಟೀಕೆ ಮಾಡಿದರು. 'ನಾವು ಗಂಗಾಜಲವನ್ನು ಪವಿತ್ರ ಎಂದು ನಂಬುತ್ತೇವೆ.
ತಾಯಿ ಎಂದು ಕರೆಯುತ್ತೇವೆ. ಆದರೆ ಬಿಜೆಪಿಯವರು ಕೋವಿಡ್ನಿಂದ ಸಾವಿಗೀಡಾದವರ ಮೃತದೇಹಗಳನ್ನು ಗಂಗಾ ನದಿಗೆ ಎಸೆದಿದ್ದಾರೆ' ಎಂದು ಆರೋಪಿಸಿದರು.
ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಯೋಜನೆಯ ಮೊದಲ ಹಂತವನ್ನು ಉದ್ಘಾಟಿಸಲು ತಮ್ಮ ಲೋಕಸಭಾ ಕ್ಷೇತ್ರ ವಾರಾಣಸಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸೋಮವಾರ ಕಾರ್ಯಕ್ರಮಕ್ಕೂ ಮುನ್ನ ಪವಿತ್ರ ಗಂಗಾ ನದಿಯಲ್ಲಿ ಮುಳುಗೆದ್ದು ಪ್ರಾರ್ಥನೆ ಸಲ್ಲಿಸಿದರು. ಜತೆಗೆ ಹಲವು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು.
ಧಾರ್ಮಿಕ ನಗರದಲ್ಲಿ ಪ್ರಧಾನಿ ಮೋದಿ ಅವರಿಗೆ ಸ್ಥಳೀಯರಿಂದ ಅದ್ದೂರಿ ಸ್ವಾಗತ ಸಿಕ್ಕಿತು. ವಾರಾಣಸಿಯ ಬೀದಿಯಲ್ಲಿ ತೆರಳಿದ ಪ್ರಧಾನಿಯ ಕಾರಿನ ಮೇಲೆ ಹೂವಿನ ದಳಗಳ ಮಳೆ ಸುರಿಸಿದರು. ಕೆಲವರು ಮೋದಿ ಅವರಿಗೆ ತಮ್ಮ ಪ್ರೀತಿಯ ಕಾಣಿಕೆಗಳನ್ನು ನೀಡಲು ಮುಗಿಬಿದ್ದರು. ಅವರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸಪಟ್ಟರು. ಅಭಿಮಾನಿಗಳು ನೀಡಿದ ಪಗಡಿ ಮತ್ತು ಅಂಗವಸ್ತ್ರವನ್ನು ಸ್ವೀಕರಿಸಿದರು. 'ಮೋದಿ ಮೋದಿ' ಹಾಗೂ 'ಹರ ಹರ ಮಹದೇವ' ಘೋಷಣೆಗಳು ಮುಗಿಲು ಮುಟ್ಟಿತ್ತು.
ಪುರಾತನ ಪ್ರಸಿದ್ಧ ಕಾಶಿ ವಿಶ್ವನಾಥ ದೇವಾಲಯಕ್ಕೆ ತೆರಳಲು ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಖಿರ್ಕಿಯಾ ಘಾಟ್ನಿಂದ ಲಲಿತಾ ಘಾಟ್ಗೆ ದೋಣಿಯಲ್ಲಿ ಪ್ರಯಾಣಿಸಿದರು. ಕಾಲ ಬೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪ್ರಧಾನಿ, ಗಂಗಾ ನದಿಯಲ್ಲಿ ಮುಳುಗೆದ್ದರು.
ಗಂಗಾ ನದಿಯ ನೀರನ್ನು ಕಾಶಿ ವಿಶ್ವನಾಥ ದೇವಾಲಯದಲ್ಲಿ ಜಲಾಭಿಷೇಕಕ್ಕಾಗಿ ತೆಗೆದುಕೊಂಡು ಹೋದರು. ಬಳಿಕ ವಿಶ್ವನಾಥ ದೇವಸ್ಥಾನಕ್ಕೆ ತೆರಳಿದ ಮೋದಿ, ಅಲ್ಲಿ ಪ್ರಾರ್ಥನೆ ಸಲ್ಲಿಸಿದರು. ನಂತರ ಮಂತ್ರಘೋಷಗಳ ನಡುವೆ ಯಜ್ಞ ಕಾರ್ಯದಲ್ಲಿ ಭಾಗವಹಿಸಿದರು.
ಬಿಜೆಪಿ ಆಡಳಿತವಿರುವ ರಾಜ್ಯಗಳ 12 ಮುಖ್ಯಮಂತ್ರಿಗಳು ಮತ್ತು 9 ಉಪ ಮುಖ್ಯಮಂತ್ರಿಗಳು ಹಾಗೂ ಸುಮಾರು 3,000 ಸಾಧು ಸಂತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಯೋಜನೆಯು 5 ಲಕ್ಷ ಚದರ ಅಡಿಯ ಬೃಹತ್ ಪ್ರದೇಶದಲ್ಲಿ ಹರಡಿದ್ದು, 40ಕ್ಕೂ ಹೆಚ್ಚು ಪುರಾತನ ದೇವಾಲಯಗಳನ್ನು ಪುನರುಜ್ಜೀವನ ಮತ್ತು ಹೊಸ ಸೌಂದರ್ಯ ಪಡೆದುಕೊಂಡಿವೆ.
ಹಳೆಯ ಕಟ್ಟಡಗಳಿಗೆ ಮೆರುಗು ನೀಡಲಾಗಿದ್ದು, ಆಕರ್ಷಕ ಶಿಲ್ಪ ಕಲೆಗಳಿಂದ ಪ್ರವಾಸಿಗರು, ಭಕ್ತರನ್ನು ಸೆಳೆಯುವ ಗುರಿ ಹೊಂದಲಾಗಿದೆ. ಜತೆಗೆ ದೇಶದ ಮೂಲೆ ಮೂಲೆಗಳಿಂದ ಬರುವ ಭಕ್ತರಿಗೆ ವಿವಿಧ ಬಗೆಯ ಸೌಲಭ್ಯಗಳನ್ನು ಒದಗಿಸಲು 23 ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ.












Click it and Unblock the Notifications