ಗೋವಾ; ಟಿಕೆಟ್ ಬೇಡ ಎಂದ ಹಾಲಿ ಶಾಸಕ, ಅಭ್ಯರ್ಥಿಗಾಗಿ ಬಿಜೆಪಿ ಹುಡುಕಾಟ!
ಪಣಜಿ, ಜನವರಿ 19; ಗೋವಾ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. 40 ಸದಸ್ಯ ಬಲದ ವಿಧಾನಸಭೆಗೆ ಫೆಬ್ರವರಿ 14ರಂತು ಮತದಾನ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ. ಗೋವಾದಲ್ಲಿ ಪಸ್ತುತ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಟಿಕೆಟ್ ಹಂಚಿಕೆ ಕಗ್ಗಂಟಾಗಿದೆ.
ಗೋವಾ ವಿಧಾನಸಭೆ ಸ್ಪೀಕರ್ ಮತ್ತು ಬಿಚ್ಚೋಲಿಯಂ ಕ್ಷೇತ್ರದ ಹಾಲಿ ಶಾಸಕ ರಾಜೇಶ್ ಪಟೇನ್ನಕರ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದ್ದು, ಯಾರಿಗೆ ಟಿಕೆಟ್ ಕೊಡಬೇಕು? ಎಂಬುದು ಪಕ್ಷಕ್ಕೆ ತಲೆ ನೋವಾಗಿದೆ.
ಬಿಚ್ಚೋಲಿಯಂ ಕ್ಷೇತ್ರದಲ್ಲಿ ರಾಜೇಶ್ ಪಟೇನ್ನಕರ್ ಟಿಕೆಟ್ ಬೇಡ ಎಂದು ಹೇಳಿದ್ದಾರೆ. ಪಕ್ಷ ಇತರ ಇಬ್ಬರು ನಾಯಕರಿಗೆ ಟಿಕೆಟ್ ಕೊಡಲು ಆಹ್ವಾನ ನೀಡಿತು. ಆದರೆ ಅವರು ಸಹ ಪಕ್ಷದ ಟಿಕೆಟ್ ಬೇಡ ಎಂದು ತಿರಸ್ಕರಿಸಿದರು. ಇದರಿಂದಾಗಿ ಪ್ರಭಾವ ಹೊಂದಿರುವ ಕ್ಷೇತ್ರವನ್ನು ಕಳೆದುಕೊಳ್ಳುವ ಭೀತಿ ಬಿಜೆಪಿಗೆ ಎದುರಾಗಿದೆ.

ರಾಜೇಶ್ ಪಟೇನ್ನಕರ್ ಮಾತನಾಡಿ, "ಆರೋಗ್ಯ ಸಮಸ್ಯೆ ಕಾರಣ ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ. ಪಕ್ಷದ ನಾಯಕರಿಗೆ ಸಹ ಇದನ್ನು ತಿಳಿಸಿದ್ದೇನೆ. ಪಕ್ಷ ಟಿಕೆಟ್ ಕೊಡುವ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇನೆ" ಎಂದು ಹೇಳಿದ್ದಾರೆ.
ಬಿಜೆಪಿ ಪಕ್ಷ ರಾಜೇಶ್ ಪಟೇನ್ನಕರ್ ಟಿಕೆಟ್ ಬೇಡ ಎಂದ ಮೇಲೆ ಬಿಜೆಪಿ ಪಕ್ಷೇತರ ಅಭ್ಯರ್ಥಿ ಡಾ. ಚಂದ್ರಶೇಖರ್ ಮತ್ತು ಎಂಜಿಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ನರೇಶ್ ಸಾವಲ್ಗೆ ಟಿಕೆಟ್ ನೀಡುವ ಆಫರ್ ಕೊಟ್ಟಿತು. ಆದರೆ ಅವರು ಬಿಜೆಪಿ ಆಫರ್ ತಿರಸ್ಕಾರ ಮಾಡಿದರು.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸತೀಶ್ ಧಾನೋಡ್ ನರೇಶ್ ಸಾವಲ್ಗೆ ಬಿಜಪಿಗೆ ಬರುವಂತೆ ಮನವೊಲಿಸಿದರು. ಆದರೆ ಅವರು ಅದಕ್ಕೆ ಒಪ್ಪಿಗೆ ಕೊಟ್ಟಿಲ್ಲ.
"ಬಿಜೆಪಿ ಸೇರುವಂತೆ ನೀಡಿದ ಆಹ್ವಾನವನ್ನು ನಾನು ತಿರಸ್ಕರಿಸಿದ್ದೇನೆ. ನನ್ನ ವ್ಯಕ್ತಿತ್ವ ಹಾಳು ಮಾಡಿಕೊಳ್ಳಲು ನಾನು ಸಿದ್ಧನಿಲ್ಲ. ಬಿಚ್ಚೋಲಿಯಂ ಕ್ಷೇತ್ರದ ಜನರ ಜೊತೆ ನಾನು ಇರುತ್ತೇನೆ" ಎಂದು ನರೇಶ್ ಸಾವಲ್ ಹೇಳಿದ್ದಾರೆ.
ಡಾ. ಚಂದ್ರಶೇಖರ್ ಸಹ ಕ್ಷೇತ್ರದಲ್ಲಿನ ಅವರ ಹಿತೈಷಿಗಳ ಜೊತೆ ಚರ್ಚೆ ಮಾಡಿದ ಬಳಿಕ ಬಿಜೆಪಿ ಟಿಕೆಟ್ ಬೇಡ ಎಂದು ಘೋಷಣೆ ಮಾಡಿದ್ದಾರೆ. ಈಗ ಬಿಜೆಪಿ ತನ್ನ ಪ್ರಭಾವ ಇರುವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ನೀಡಬೇಕು? ಎಂದು ಚಿಂತನೆ ನಡೆಸುತ್ತಿದೆ.
ಚುನಾವಣೆಗೆ ಕೆಲವೇ ದಿನಗಳು ಇವೆ. ಬಿಚ್ಚೋಲಿಯಂ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆ ಪ್ರಬಲವಾಗಿದೆ. ಆದರೆ ಅಭ್ಯರ್ಥಿ ಆಯ್ಕೆ ಮಾಡಲು ಪಕ್ಷ ಪರದಾಟ ನಡಸುತ್ತಿರುವುದು ಅಚ್ಚರಿ ಮೂಡಿಸಿದೆ ಎಂದು ರಾಜಕೀಯ ತಜ್ಞರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಟಿಕೆಟ್ಗಾಗಿ ಯಾರೂ ಮುಂದೆ ಬರದ ಕಾರಣ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶಿಲ್ಪಾ ನಾಯಕ್ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ. ಬುಧವಾರ ಸಂಜೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಘೋಷಣೆಯಾಗುವ ನಿರೀಕ್ಷೆ ಇದೆ.
ರಾಜೇಶ್ ಪಟೇನ್ನಕರ್ ಬಿಚ್ಚೋಲಿಯಂ ಕ್ಷೇತ್ರದಲ್ಲಿ 2002ರ ಬಳಿಕ ಮೂರು ಬಾರಿ ಗೆದ್ದಿದ್ದಾರೆ. 2012ರಲ್ಲಿ ಅವರು ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದಾಗ ಪಕ್ಷೇತರ ಅಭ್ಯರ್ಥಿಯಾಗಿದ್ದ ನರೇಶ್ ಸಾವಲ್ ಎದುರು ಸೋತಿದರು. ಆದರೆ ಈಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ನರೇಶ್ ಸಾವಲ್ ಬಿಜೆಪಿ ಟಿಕೆಟ್ ತಿರಸ್ಕಾರ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ನರೇಶ್ ಸಾವಲ್ ಮತ್ತು ಡಾ. ಚಂದ್ರಶೇಖರ್ ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸಿದ್ದರು. ಆದರೆ ರಾಜೇಶ್ ಪಟೇನ್ನಕರ್ ತಮ್ಮ 10 ಬೆಂಬಲಿಗರನ್ನು ಗೆಲ್ಲಿಸಿಕೊಂಡು ಬಂದಿದ್ದರು.












Click it and Unblock the Notifications