BWSSB: ಸರಳ ಕಾವೇರಿ ಯೋಜನೆ ವಿಸ್ತರಣೆ: ನೀರಿನ ಸಂಪರ್ಕ ಪಡೆಯಲು ಇಎಂಐ
ಬೆಂಗಳೂರು: ಬೆಂಗಳೂರಿನ ಎಲ್ಲಾ ನಾಗರಿಕರಿಗೂ ಆರೋಗ್ಯಕರವಾದ ಶುದ್ಧ ಕಾವೇರಿ ನೀರನ್ನು ನೀಡುವ ಉದ್ದೇಶ ಜಲಮಂಡಳಿ ಹೊಂದಿದೆ. ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಆರ್ಥಿಕ ಹೊರೆ ಇಲ್ಲದೇ ನೀರಿನ ಸಂಪರ್ಕ ಕಲ್ಪಿಸಲು ಜಾರಿಗೆ ತಂದ 'ಸರಳ ಕಾವೇರಿ' ಯೋಜನೆಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ. ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಇಂದು ಬೆಂಗಳೂರು ಜಲಮಂಡಳಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡದಿ ಅವರು, ಕಾವೇರಿ ನೀರಿನ ಹೊಸ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಪಾವತಿಸಬೇಕಾದ 'ಪ್ರೊರೇಟಾ' (Prorata) ಶುಲ್ಕವನ್ನು ಒಮ್ಮೆಲೇ ಪಾವತಿಸಲು ಸಾಧ್ಯವಾಗದ ಬಡವರು, ಮಧ್ಯಮ ವರ್ಗದವರು ಮತ್ತು ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳಿಗೆ ನೆರವಾಗಲು ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಮೇ 2025 ರಲ್ಲಿ ಪ್ರಾರಂಭವಾದ ಈ ಯೋಜನೆಗೆ ಸಾರ್ವಜನಿಕರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ವಿಸ್ತರಿಸಲಾಗಿದೆ ಎಂದರು.

ಸರಳ ಕಾವೇರಿ ಯೋಜನೆ ಪ್ರಮುಖಾಂಶಗಳು
* ಸಣ್ಣ ನಿವೇಶನದಾರರಿಗೆ ಆದ್ಯತೆ: 600 ಅಡಿಗಳ ಬಿಲ್ಡ್-ಅಪ್ ಏರಿಯಾ ಹೊಂದಿರುವ ಸಣ್ಣ ನಿವೇಶನದಾರರು ಕೇವಲ 1,000 ರೂ. ಆರಂಭಿಕ ಹಣ ಪಾವತಿಸಿ ನೀರಿನ ಸಂಪರ್ಕ ಪಡೆಯಬಹುದು. ಬಾಕಿ ಉಳಿದ ಮೊತ್ತವನ್ನು ಸುಲಭ ಕಂತುಗಳಲ್ಲಿ (EMI) ಪಾವತಿಸಲು ಅವಕಾಶ ನೀಡಲಾಗಿದೆ.
* ಅಪಾರ್ಟ್ಮೆಂಟ್ ಗಳಿಗೆ ಇಎಂಐ ಸೌಲಭ್ಯ: ಒಮ್ಮೆಲೇ ದೊಡ್ಡ ಮೊತ್ತದ ಡಿಮ್ಯಾಂಡ್ ನೋಟಿಸ್ (DN) ಪಾವತಿಸಲು ಕಷ್ಟಪಡುವ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳಿಗೆ ಇದು ವರದಾನವಾಗಿದೆ. ಒಟ್ಟು ಶುಲ್ಕದ ಶೇ. 20 ರಷ್ಟು ಮೊತ್ತವನ್ನು ಆರಂಭದಲ್ಲಿ ಪಾವತಿಸಿ ಸಂಪರ್ಕ ಪಡೆಯಬಹುದು. ಉಳಿದ ಶೇ.80 ಹಣವನ್ನು ಪಾವತಿಸಲು 12 ತಿಂಗಳ ಕಾಲಾವಕಾಶ ನೀಡಲಾಗಿದೆ.
* ನಾನ್-ಡೊಮೆಸ್ಟಿಕ್ ಗ್ರಾಹಕರಿಗೂ ಸೌಲಭ್ಯ: ಕೇವಲ ಮನೆಗಳಿಗೆ ಮಾತ್ರವಲ್ಲದೆ, ವಾಣಿಜ್ಯ ಕಟ್ಟಡಗಳಿಗೂ ಇಎಂಐ ಮೂಲಕ ಸರಳ ಕಾವೇರಿ ಸೌಲಭ್ಯವನ್ನು ವಿಸ್ತರಿಸಲಾಗಿದೆ. ನಾನ್-ಡೊಮೆಸ್ಟಿಕ್ ಗ್ರಾಹಕರು ಕೂಡಾ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ.
* ಮನೆ ಮನೆಗೆ ಶುದ್ಧ ನೀರು: ಆರೋಗ್ಯಕರವಾದ ಶುದ್ಧ ಕಾವೇರಿ ನೀರನ್ನು ಮನೆ ಮನೆಗೆ ತಲುಪಿಸುವ ಮೂಲಕ ಜನರ ಆರೋಗ್ಯವನ್ನು ಕಾಪಾಡುವ ಸಂಕಲ್ಪವನ್ನು ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ವಿಸ್ತರಿಸಲಾಗಿದೆ.
ಬೆಂಗಳೂರು ಜಲಮಂಡಳಿಯು ಯಾವಾಗಲೂ ಜನಪರ ಕಾರ್ಯಕ್ರಮಗಳಿಗೆ ಆದ್ಯತೆ ನೀಡುತ್ತಾ ಬಂದಿದೆ. ಈ ಹಿಂದೆ ನಾವು ಜಾರಿಗೆ ತಂದಿದ್ದ ಸಂಚಾರಿ ಕಾವೇರಿ, 3ನೇ ತಲೆಮಾರಿನ ಮಳೆನೀರು ಕೊಯ್ಲು ಪದ್ಧತಿ ಹಾಗೂ ಸ್ಕಾಡಾ (SCADA) ತಂತ್ರಜ್ಞಾನದಂತೆ 'ಸರಳ ಕಾವೇರಿ' ಕೂಡ ಗ್ರಾಹಕ ಸ್ನೇಹಿ ಯೋಜನೆಯಾಗಿದೆ ಎಂದರು.
ಡಿಮ್ಯಾಂಡ್ ನೋಟಿಸ್ನ ಪೂರ್ಣ ಹಣ ಸಂಗ್ರಹಿಸಲು ಕಷ್ಟಪಡುವ ಅಪಾರ್ಟ್ಮೆಂಟ್ ಗಳಿಗೆ ಮತ್ತು ವಾಣಿಜ್ಯ ಕಟ್ಟಡಗಳಿಗೆ ಈ ಇಎಂಐ ಸೌಲಭ್ಯವು ಆರ್ಥಿಕವಾಗಿ ಬಹಳಷ್ಟು ನೆರವಾಗಲಿದೆ. ಸಾರ್ವಜನಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ನಗರದಾದ್ಯಂತ ಸಮರ್ಪಕ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಜಲಮಂಡಳಿಯು ಈಗಾಗಲೇ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಈ ಯೋಜನೆಯ ವಿಸ್ತರಣೆಯು ನಾಗರಿಕರಿಗೆ ಮತ್ತಷ್ಟು ಅನುಕೂಲ ಮಾಡಿಕೊಡಲಿದೆ ಎಂದು ತಿಳಿಸಿದರು.













Click it and Unblock the Notifications