ಗೋವಾ; ಕಾಂಗ್ರೆಸ್ ತೊರೆದು ಎನ್ಸಿಪಿ ಸೇರಿದ ಮಾಜಿ ಸಚಿವ
ಪಣಜಿ, ಜನವರಿ 25; ಎನ್ಸಿಪಿ ಪಕ್ಷ ತೊರೆದ ದಶಕಗಳ ಬಳಿಕ ಗೋವಾದ ಪ್ರವಾಸೋದ್ಯಮ ಖಾತೆ ಮಾಜಿ ಸಚಿವ ಫ್ರಾನ್ಸಿಸ್ಕೋ ಮಿಕ್ಕಿ ಪಾಚೆಕೊ ಪಕ್ಷಕ್ಕೆ ವಾಪಸ್ ಆಗಿದ್ದಾರೆ. ಫೆಬ್ರವರಿ 14ರಂದು ನಡೆಯುವ ಚುನಾವಣೆಗೆ ನೊವೆಮ್ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ.
ಈ ಬಾರಿಯ ಚುನಾವಣೆಗೆ ಫ್ರಾನ್ಸಿಸ್ಕೋ ಮಿಕ್ಕಿ ಪಾಚೆಕೊ ಬೆನೌಲಿಮ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಎನ್ಸಿಪಿಗೆ ಮರಳಿದ್ದಾರೆ. "ಗೋವಾದ ಜನರ ದಾರಿ ತಪ್ಪಿಸಿ ಕಾಂಗ್ರೆಸ್ ಪಕ್ಷ ರಾಜ್ಯವನ್ನು ನಾಶ ಮಾಡಿದೆ" ಎಂದು ಅವರು ದೂರಿದ್ದಾರೆ.
"ಗೋವಾದಲ್ಲಿ ಬಿಜೆಪಿಯ ಬೆಳವಣಿಗೆಗೆ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಕಾರಣ" ಎಂದು ಫ್ರಾನ್ಸಿಸ್ಕೋ ಮಿಕ್ಕಿ ಪಾಚೆಕೊ ಆರೋಪ ಮಾಡಿದ್ದಾರೆ. ಎನ್ಸಿಪಿ ರಾಜ್ಯಾಧ್ಯಕ್ಷ ಜೋಸ್ ಫಿಲಿಪ್ ಡಿಸೋಜಾ ಫಾನ್ಸಿಸ್ಕೋರನ್ನು ಪಕ್ಷಕ್ಕೆ ಬರಮಾಡಿಕೊಂಡರು.

2011ರ ಡಿಸೆಂಬರ್ನಲ್ಲಿ ಫ್ರಾನ್ಸಿಸ್ಕೋ ಮಿಕ್ಕಿ ಪಾಚೆಕೊ ಎನ್ಸಿಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಈ ಬಾರಿ ಚುನಾವಣೆಯಲ್ಲಿ ಬೆನೌಲಿಮ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಟಿಕೆಟ್ ನೀಡಲಿಲ್ಲ. ಆದ ಕಾರಣ ಈಗ ಎನ್ಸಿಪಿ ಸೇರಿದ್ದಾರೆ. ಗೋವಾ ಚುನಾವಣೆಯನ್ನು ಎನ್ಸಿಪಿ & ಶಿವಸೇನೆ ಮೈತ್ರಿ ಮಾಡಿಕೊಂಡು ಎದುರಿಸುತ್ತಿವೆ.
ಗೋವಾದಲ್ಲಿ 40 ವಿಧಾನಸಭಾ ಕ್ಷೇತ್ರಗಳಿವೆ. 37 ಕ್ಷೇತ್ರಗಳಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದೆ. ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಜನವರಿ 28 ಕೊನೆಯ ದಿನವಾಗಿದೆ. ಫೆಬ್ರವರಿ 14ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.
ಎನ್ಸಿಪಿ, ಶಿವಸೇನೆ ಮತ್ತು ಟಿಎಂಸಿ ಗೋವಾದಲ್ಲಿ ಕಾಂಗ್ರೆಸ್ ಜೊತೆ ಸೇರಿ ಮೈತ್ರಿಕೂಟ ರಚನೆ ಮಾಡಲು ಬಯಸಿದ್ದವು. ಅದರೆ ಕಾಂಗ್ರೆಸ್ ಪಕ್ಷ ಸೀಟು ಹಂಚಿಕೆಗೆ ನಿರಾಕರಿಸಿತು. ಗೋವಾ ಫಾರ್ವರ್ಡ್ ಪಾರ್ಟಿಗೆ ಮಾತ್ರ ಮೂರು ಸೀಟುಗಳನ್ನು ಪಕ್ಷ ಬಿಟ್ಟುಕೊಟ್ಟಿದೆ.
ಸಿಎಂ ಅಭ್ಯರ್ಥಿ ಘೋಷಣೆ ಇಲ್ಲ; ಗೋವಾ ಚುನಾವಣೆಗೆ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಅಭ್ಯರ್ಥಿಗಳ ಸಭೆಯನ್ನು ಕಾಂಗ್ರೆಸ್ ಕರೆದಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ನಾಮಪತ್ರ ಸಲ್ಲಿಕೆ ಮಾಡಿದ ಅಭ್ಯರ್ಥಿಗಳ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಬೇಕೆ?, ಬೇಡವೇ? ಎಂದು ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತದೆ. ಅದನ್ನು ಬಳಿಕ ಎಐಸಿಸಿಗೆ ಕಳುಹಿಸಿಕೊಡಲಿದ್ದು, ಬಳಿಕ ಸಿಎಂ ಅಭ್ಯರ್ಥಿ ಘೋಷಣೆ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
2017ರ ಚುನಾವಣೆಯಲ್ಲಿ ಕಾಂಗ್ರೆಸ್ ಗೋವಾದಲ್ಲಿ 17 ಸ್ಥಾನಗಳಲ್ಲಿ ಜಯಗಳಿಸಿತ್ತು. ಆದರೆ ಸರ್ಕಾರ ರಚನೆ ಮಾಡಲ ವಿಫಲವಾಗಿತ್ತು. 13 ಸ್ಥಾನಗಳಲ್ಲಿ ಗೆದ್ದ ಬಿಜೆಪಿ ಇತರ ಪಕ್ಷಗಳಗೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು.
ಗೋವಾ ವಿಧಾನಸಭೆ ಚುನಾವಣಾ ಪೂರ್ವ ಸಮೀಕ್ಷೆಗಳು ಬಿಜೆಪಿ ರಾಜ್ಯದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಿವೆ. ಆದರೆ ಯಾವುದೇ ಪಕ್ಷಕ್ಕೆ ಬಹುಮತ ದೊರೆಯುವುದಿಲ್ಲ ಎಂದು ಹೇಳಿವೆ.
ಬಿಜೆಪಿ ನಾಯಕ ಕಾಂಗ್ರೆಸ್ ಸೇರ್ಪಡೆ; ಗೋವಾ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಸುದತ್ತು ಕೊರಗಾಂವಕರ ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಸೇರಿದ್ದಾರೆ. ಮಾಪೂಸಾ ಕ್ಷೇತ್ರದಲ್ಲಿ ಪಕ್ಷ ತಮ್ಮನ್ನು ಕಡೆಗಣಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಸುದತ್ತು ಕೊರಗಾಂವಕರ ಬರಮಾಡಿಕೊಂಡು ಮಾತನಾಡಿದ ಉತ್ತರ ಗೋವಾದ ಕಾಂಗ್ರೆಸ್ ಅಧ್ಯಕ್ಷ ವಿಜಯ್ ಬೈಕೆ, "ಬಿಜೆಪಿ ಸರ್ಕಾರದ ಆಡಳಿತದಿಂದ ಜನರು ರೋಸಿ ಹೋಗಿದ್ದಾರೆ. ಈಗ ಜನರ ಮುಂದಿರುವ ಆಯ್ಕೆ ಕಾಂಗ್ರೆಸ್ ಪಕ್ಷವಾಗಿದೆ" ಎಂದು ಹೇಳಿದ್ದಾರೆ.












Click it and Unblock the Notifications