ಮಾನುಷಿ ಚಿಲ್ಲರ್ ಬಗ್ಗೆ ಶಶಿ ತರೂರ್ ವ್ಯಂಗ್ಯ: ಮಹಿಳಾ ಮಣಿಗಳ ಆಕ್ರೋಶ
ನವದೆಹಲಿ, ನವೆಂಬರ್ 20: 17 ವರ್ಷದ ನಂತರ ಭಾರತಕ್ಕೆ ವಿಶ್ವಸುಂದರಿ ಕಿರೀಟವನ್ನು ತಂದ ಹರ್ಯಾಣದ ಮಾನುಷಿ ಚಿಲ್ಲರ್ ಕುರಿತು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಶಶಿ ತರೂರ್ ಮಾಡಿದ ಟ್ವೀಟ್ ಗೆ ರಾಷ್ಟ್ರೀಯ ಮಹಿಳಾ ಆಯೋಗ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
'ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಶಶಿ ತರೂರ್ ಇಂಥ ಹೇಳಿಕೆ ನೀಡಿದ್ದು ಸರಿಯಲ್ಲ. ಅವರ ವಿರುದ್ಧ ಪ್ರಕರಣದ ದಾಖಲಿಸಬೇಕೆಂದುಕೊಂಡಿದ್ದೆವು. ಆದರೆ ಈ ಕುರಿತು ಅವರೇ ಕ್ಷಮೆ ಕೇಳಿರುವುದರಿಂದ ಸುಮ್ಮನಾಗಿದ್ದೇವೆ. ಇಂಥ ಹೇಳಿಕೆಗಳನ್ನು ನೀಡುವಾಗ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು' ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಎಚ್ಚರಿಕೆ ನೀಡಿದ್ದಾರೆ.

ಮಾನುಷಿ ಚಿಲ್ಲರ್ ಅವರನ್ನು ವಿಶ್ವ ಸುಂದರಿ ಎಂದು ಘೋಷಿಸುತ್ತಿದ್ದಂತೆಯೇ ಅವರನ್ನು ಅಭಿನಂದಿಸುವ ಬದಲು ಶಶಿ ತರೂರ್ ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದರು. "ನಮ್ಮ ನೋಟುಗಳನ್ನು ಅಪನಗದೀಕರಣಗೊಳಿಸುವುದು ಎಂಥ ತಪ್ಪಿನ ಕೆಲಸ! ನಮ್ಮ ಕರೆನ್ಸಿಗೆ ಜಾಗತಿಕ ಮಟ್ಟದಲ್ಲಿ ಬೆಲೆ ಇದೆ. ನೋಡಿ ಚಿಲ್ಲರೆ(ಚಿಲ್ಲರ್) ಕೂಡ ವಿಶ್ವಸುಂದರಿಯಾಗಬಹುದು" ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು.
ಈ ಟ್ವಿಟ್ಟರ್ ಗೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಡಿಲೀಟ್ ಸಹ ಮಾಡಿದ್ದರು. ಅವರ ಟ್ವಿಟ್ಟರ್ ಖಾತೆಯಲ್ಲಿ ಈ ಟ್ವಿಟ್ಟರ್ ಇಲ್ಲದಿದ್ದರೂ, ಅವರು ಅದನ್ನು ಡಿಲೀಟ್ ಮಾಡುವುದಕ್ಕೂ ಮೊದಲೇ ತೆಗೆದ ಸ್ಕ್ರೀನ್ ಶಾಟ್ ಮಾತ್ರ ಎಲ್ಲೆಡೆ ಹರಿದಾಡುತ್ತ, ಅವರನ್ನು ಗೇಲಿಮಾಡುತ್ತಿದೆ!












Click it and Unblock the Notifications