ಫೇಕ್ ಸ್ಟಿಂಗ್ ಆಪರೇಷನ್ ಮಾಡಿದವರನ್ನು ಬಿಡುವುದಿಲ್ಲ : ನಿರ್ಮಲಾ ಸೀತಾರಾಮನ್
ನವದೆಹಲಿ, ಮಾರ್ಚ್ 27 : ಅಪನಗದೀಕರಣದಿಂದ ಬಿಜೆಪಿ ನಾಯಕರು ಲಾಭ ಪಡೆದುಕೊಂಡಿದ್ದಾರೆ ಎಂದು ನಕಲಿ ಸ್ಟಿಂಗ್ ಆಪರೇಷನ್ ಮಾಡಿ, ಬಿಜೆಪಿಯ ಇಮೇಜನ್ನು ಹಾಳು ಮಾಡಲು ಯತ್ನಿಸಿದ ಸಂಸ್ಥೆಯ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಚ್ಚರಿಕೆ ನೀಡಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಅಪನಗದೀಕರಣದಿಂದ ಬಿಜೆಪಿ ಲಾಭ ಪಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕರಾದ ಕಪಿಲ್ ಸಿಬಲ್ ಮತ್ತು ಗುಲಾಮ್ ನಬಿ ಆಝಾದ್ ಅವರು ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ, ಸ್ಟಿಂಗ್ ಆಪರೇಷನ್ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು.
ಉಡುಪಿ ಶ್ರೀ ಕೃಷ್ಣನ ದರ್ಶನ ಪಡೆದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್
ಟಿಎನ್ಎನ್ ವರ್ಲ್ಡ್ ಎಂಬ ವೆಬ್ ಸೈಟ್ ಮೂಲಕ ಕಾಂಗ್ರೆಸ್ ಪಕ್ಷವೇ ಈ ಸ್ಟಿಂಗ್ ಆಪರೇಷನ್ ಮಾಡಿ, ವಿಡಿಯೋವನ್ನು ಸಾರ್ವಜನಿಕ ಮಾಡಿದೆ. ಇದೇ ವೆಬ್ ಸೈಟ್ ಇವಿಎಂನಲ್ಲಿರುವ ದೋಷದ ಬಗ್ಗೆ ಕಪಿಲ್ ಸಿಬಲ್ ಅವರು ಪತ್ರಿಕಾಗೋಷ್ಠಿ ನಡೆಸಿದ್ದನ್ನೂ ಜನವರಿಯಲ್ಲಿ ಪ್ರಸಾರ ಮಾಡಿತ್ತು. ಈ ವೆಬ್ ಸೈಟನ್ನು 2018ರ ಡಿಸೆಂಬರ್ ನಲ್ಲಿ ನೋಂದಾಯಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ವಿವರ ನೀಡಿದರು.
ಈ ವೆಬ್ ಸೈಟಿನ ನಿರ್ದೇಶಕ ರೋಮಾನಿಯನ್. ಕಳೆದ ವರ್ಷ ಡಿಸೆಂಬರ್ ನಲ್ಲಿ ರಿಜಿಸ್ಟರ್ ಆಗಿದ್ದ ವೆಬ್ ಸೈಟನ್ನು ಚುನಾವಣೆ ಮುಗಿದ ನಂತರ ಬಂದ್ ಮಾಡಲು ಕಾಂಗ್ರೆಸ್ ಯೋಜಿಸಿತ್ತೇನೋ. ಲೋಕಸಭೆ ಚುನಾವಣೆ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ರೂಪಿಸಿರುವ ಷಡ್ಯಂತ್ರವಿದು ಎಂದು ನಿರ್ಮಲಾ ಸೀತಾರಾಮನ್ ಅವರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಶೋಭಾಗೆ ನಿರ್ಮಲಾ ಸೀತಾರಾಮನ್ ಸಾಥ್;ಅಪಾರ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಕೆ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಲಹೆಯನ್ನು ಕೇಂದ್ರ ಸರಕಾರ ಪಡೆಯಲಿದೆ. ಈ ಷಡ್ಯಂತ್ರದ ಹಿಂದಿರುವವರನ್ನು ಬಿಜೆಪಿ ಬಿಡುವುದಿಲ್ಲ. ಲೋಕಸಭೆ ಚುನಾವಣೆ ಹತ್ತಿರ ಇರುವ ಸಂದರ್ಭದಲ್ಲಿ, ನಮ್ಮ ಪಕ್ಷದ ಇಮೇಜನ್ನು ಹಾಳು ಮಾಡಲು ಯತ್ನಿಸಿದವರು ವ್ಯಕ್ತಿಯೇ ಆಗಲಿ ಸಂಸ್ಥೆಯೇ ಆಗಲಿ ಅಂಥವರನ್ನು ಕೋರ್ಟಿಗೆ ಎಳೆದು ತರುತ್ತೇವೆ ಎಂದು ಹೇಳಲು ಇಚ್ಛಿಸುತ್ತೇನೆ ಎಂದಿದ್ದಾರೆ ನಿರ್ಮಲಾ.
ಇದು 'ಫೇಕ್' ಸ್ಟಿಂಗ್ ಆಪರೇಷನ್ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದರು. ಯುಪಿಎನ ನಕಲಿ ಸ್ಟಿಂಗ್ ಆಪರೇಷನ್ ಗಳು, ಸುಳ್ಳು ಪ್ರಚಾರಗಳು ಮುಂದುವರಿದಿವೆ. ಬಿಎಸ್ ಯಡಿಯೂರಪ್ಪ ವಿರುದ್ಧ ಆರೋಪಿಸಿ ಮಾಡಲಾಗಿದ್ದ ಭ್ರಷ್ಟಾಚಾರದ ದೂರು ಕೂಡ ಫೇಕ್. ಮಾಡಲು ಯಾವುದೇ ಕೆಲಸವಿಲ್ಲದಾಗ, ಆಡಿಕೊಳ್ಳಲು ಯಾವುದೇ ವಿಷಯವಿಲ್ಲದಾಗ ಇಂಥ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದೇ ಕಾಂಗ್ರೆಸ್ ಕೆಲಸ ಎಂದು ಜರಿದಿದ್ದರು.