ಬಿಜೆಪಿ ಹೊಡೆತಕ್ಕೆ ಕಂಗಾಲಾದ ಎನ್ಸಿಪಿ, ಕಾಂಗ್ರೆಸ್ನೊಂದಿಗೆ ವಿಲೀನ?
ನವದೆಹಲಿ, ಮೇ 31: ಬಿಜೆಪಿ ಹಾಗೂ ಎನ್ಡಿಎ ಮೈತ್ರಿಕೂಟದ ವಿರೋಧಪಕ್ಷಗಳು ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ಬಳಿಕ ಗಂಭೀರ ಆತ್ಮಾವಲೋಕನಕ್ಕೆ ಮುಂದಾಗಿವೆ. ಪಕ್ಷ ಸಂಘಟನೆ, ಉಳಿವಿನ ಕುರಿತು ಚಿಂತನ ಮಂಥನ ನಡೆಸುತ್ತಿವೆ. ಬಿಜೆಪಿಯ ಅಬ್ಬರದೆದುರು ಸೋಲಲು ಕಾರಣಗಳೇನು ಎಂಬುದನ್ನು ಪತ್ತೆಮಾಡುವ ನಿಟ್ಟಿನಲ್ಲಿ ಚರ್ಚೆಗಳನ್ನು ನಡೆಸಲಾಗುತ್ತಿದೆ.
ಇತ್ತ ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬದಲಾವಣೆಯ ಸೂಚನೆ ದೊರಕಿದೆ. ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಕಳೆದ ಕೆಲವು ದಿನಗಳಿಂದ ತಮ್ಮ ಪಕ್ಷದ ಬಹುತೇಕ ನಾಯಕರಿಂದ ದೂರವೇ ಉಳಿದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನವದೆಹಲಿಯಲ್ಲಿರುವ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸಕ್ಕೆ ತೆರಳಿ ಸುಮಾರು ಒಂದು ಗಂಟೆ ಮಾತುಕತೆ ನಡೆಸಿದರು. ಅವರ ಮುಖಾಮುಖಿಯಲ್ಲಿ ಎರಡೂ ಪಕ್ಷಗಳು ಪರಸ್ಪರ ವಿಲೀನಗೊಳ್ಳುವ ಸಾಧ್ಯತೆಗಳ ಕುರಿತು ಮಾತುಕತೆ ಆರಂಭವಾಗಿದೆ ಎಂದು ಹೇಳಲಾಗಿದೆ.
ಈ ರೀತಿಯ ಯಾವುದೇ ಪ್ರಸ್ತಾಪದ ಕುರಿತು ತಮ್ಮ ಪಕ್ಷ ಇನ್ನೂ ಚರ್ಚಿಸಬೇಕಿದೆ ಎಂದು ಎನ್ಸಿಪಿ ಹಿರಿಯ ಮುಖಂಡರು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ. ರಾಹುಲ್ ಗಾಂದಿ ಮತ್ತು ಶರದ್ ಪವಾರ್ ಅವರ ಭೇಟಿಯ ವೇಳೆಯಲ್ಲಿ ಈ ವಿಚಾರ ಪ್ರಸ್ತಾಪವಾಗಲಿಲ್ಲ ಎಂದೂ ಅವರು ಹೇಳಿದ್ದಾರೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಎರಡೂ ಪಕ್ಷಗಳು ಭಾರಿ ಸೋಲು ಕಂಡಿರುವುದರಿಂದ ಎರಡೂ ಪಕ್ಷಗಳ ವಿಲೀನ ಸಾಧ್ಯತೆಗಳಿಗೆ ಬಾಗಿಲು ತೆರೆಯಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
|
ವಿಧಾನಸಭೆ ಚುನಾವಣೆ ಬಗ್ಗೆ ಚರ್ಚೆ
'ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ದೆಹಲಿಯ ನನ್ನ ನಿವಾಸದಲ್ಲಿ ನನ್ನನ್ನು ಭೇಟಿ ಮಾಡಿದರು. ಮುಂಬರುವ ವಿಧಾನಸಭೆ ಚುನಾವಣೆಗಳು ಹಾಗೂ ಮಹಾರಾಷ್ಟ್ರದಲ್ಲಿನ ಬರ ಪರಿಸ್ಥಿತಿಯ ಕುರಿತ ವಿಚಾರಗಳಿಗೆ ಸಂಬಂಧಿಸಿದಂತೆ ನಾವು ಚರ್ಚಿಸಿದ್ದೇವೆ' ಎಂದು ಶರದ್ ಪವಾರ್ ಅವರು ಟ್ವೀಟ್ ಮಾಡಿದ್ದಾರೆ.

ಪ್ರಸ್ತಾಪಿಸಿದ್ದ ಎನ್ಸಿಪಿ ಮಾಜಿ ಮುಖಂಡ
ಇತ್ತೀಚೆಗಷ್ಟೇ ಎನ್ಸಿಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಮುಖಂಡ ತಾರೀಖ್ ಅನ್ವರ್, ತಾವು ಪಕ್ಷ ಬಿಡುವ ಮುನ್ನ ಪವಾರ್ ಅವರೊಂದಿಗೆ ಪಕ್ಷದ ವಿಲೀನದ ಬಗ್ಗೆ ಪ್ರಸ್ತಾಪಿಸಿದ್ದಾಗಿ ತಿಳಿಸಿದ್ದಾರೆ.
'ಪಕ್ಷ ತ್ಯಜಿಸುವ ಮುನ್ನ ಎನ್ಸಿಪಿಯನ್ನು ಕಾಂಗ್ರೆಸ್ ಜತೆ ವಿಲೀನ ಮಾಡುವಂತೆ ಶರದ್ ಪವಾರ್ ಅವರಿಗೆ ಹೇಳಿದ್ದೆ. ಬಳಿಕ ಇತರರ ಜತೆಗೆ ಚರ್ಚಿಸುವುದಾಗಿ ಪವಾರ್ ನನಗೆ ತಿಳಿಸಿದ್ದರು' ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್ ತ್ಯಜಿಸಿದ್ದ ಪವಾರ್
1998ರಲ್ಲಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನ ವಹಿಸಿಕೊಂಡಾಗ ಶರದ್ ಪವಾರ್ ಅವರು ಮುಖ್ಯವಾಗಿ ಸೋನಿಯಾ ಅವರ ವಿದೇಶಿ ಮೂಲದ ವಿಚಾರವಾಗಿ ಅಸಮಾಧಾನಗೊಂಡು ಪಕ್ಷದಿಂದ ಹೊರಬಂದಿದ್ದ ಶರದ್ ಪವಾರ್, 1999ರ ಮೇ ತಿಂಗಳಿನಲ್ಲಿ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ ಸ್ಥಾಪಿಸಿದ್ದರು. ಆಗ ಪವಾರ್ ಅವರೊಂದಿಗೆ ಅನ್ವರ್ ಮತ್ತು ದಿವಂಗತ ಪಿಎ ಸಂಗ್ಮಾ ಕೂಡ ಹೊರಬಂದಿದ್ದರು.
ಮೂಲಗಳ ಪ್ರಕಾರ ಪವಾರ್ ಮತ್ತು ರಾಹುಲ್ ಇಬ್ಬರೂ ಲೋಕಸಭೆ ಚುನಾವಣೆಯ ಸೋಲಿನ ಬಗ್ಗೆ ಚರ್ಚಿಸಿದ್ದರು. ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತ್ಯಜಿಸುವ ನಿರ್ಧಾರವನ್ನು ಪುನರ್ ಪರಿಶೀಲನೆ ನಡೆಸುವಂತೆ ರಾಹುಲ್ ಅವರಿಗೆ ಪವಾರ್ ಮನವಿ ಮಾಡಿದರು ಎಂದು ಹೇಳಲಾಗಿದೆ.

ಚುನಾವಣೆಯಲ್ಲಿ ಹೀನಾಯ ಸೋಲು
ಎನ್ಸಿಪಿ ಮತ್ತು ಕಾಂಗ್ರೆಸ್ ಮಹಾರಾಷ್ಟ್ರದಲ್ಲಿ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಸೀಟು ಹಂಚಿಕೊಂಡು ಸ್ಪರ್ಧಿಸಿದ್ದವು. ಮಹಾರಾಷ್ಟ್ರದ 48 ಸೀಟುಗಳ ಪೈಕಿ ಬಿಜೆಪಿ-ಶಿವಸೇನಾ ಮೈತ್ರಿಕೂಟ 41 ಸೀಟುಗಳಲ್ಲಿ ಗೆದ್ದಿದ್ದರೆ, ಎನ್ಸಿಪಿ ನಾಲ್ಕು ಸೀಟುಗಳಲ್ಲಿ ಗೆದ್ದಿತ್ತು. ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲಿ ಜಯಗಳಿಸಿತ್ತು.
ಎರಡು ದಿನಗಳ ಹಿಂದೆ ಎರಡೂ ಪಕ್ಷಗಳ ರಾಜ್ಯ ನಾಯಕರು ಮುಂಬೈನಲ್ಲಿ ಸಭೆ ನಡೆಸಿ ಸೋಲಿನ ಪರಾಮರ್ಶೆ ನಡೆಸಿದ್ದರು. ಆದರೆ, ಆ ಸಭೆಯಲ್ಲಿ ಪಕ್ಷಗಳ ವಿಲೀನದ ವಿಚಾರ ಚರ್ಚೆಗೆ ಬಂದಿರಲಿಲ್ಲ.












Click it and Unblock the Notifications