ಪತಿಯನ್ನು ಕೊಂದು 90 ನಿಮಿಷದಲ್ಲಿ ಸಾಕ್ಷ್ಯ ನಾಶಪಡಿಸಿದ್ದ ಅಪೂರ್ವ ತಿವಾರಿ
ನವದೆಹಲಿ, ಏ.24: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್ಡಿ ತಿವಾರಿ ಪುತ್ರ ರೋಹಿತ್ ತಿವಾರಿಯನ್ನು ಆತನ ಪತ್ನಿಯೇ ಕೊಲೆ ಮಾಡಿರುವ ಸಂಗತಿ ಬಯಲಿಗೆ ಬಂದಿದೆ.
ಕೇವಲ ಒಂದು ವಾರದೊಳಗೆ ಪೊಲೀಸರು ಕೊಲೆಗಾರರನ್ನು ಪತ್ತೆ ಹಚ್ಚಿದ್ದಾರೆ. ಕೊಲೆ ಮಾಡಿ ಕೇವಲ 90 ನಿಮಿಷಗಳಲ್ಲಿ ಎಲ್ಲಾ ದಾಖಲೆಗಳನ್ನು ಅಪೂರ್ವ ತಿವಾರಿ ನಾಶಪಡಿಸಿದ್ದರು ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
ಆಕೆಯನ್ನು ವಿಚಾರಣೆಗೆ ಒಳಪಡಿಸಿರುವ ವೇಳೆ ಈ ಮಾಹಿತಿಯನ್ನು ಅಪೂರ್ವ ನೀಡಿದ್ದಾಗಿ ಹೇಳಿದ್ದಾರೆ.ಫಾರೆನ್ಸಿಕ್ ರಿಪೋರ್ಟ್ ಪ್ರಕಾರ ಅಪೂರ್ವ ಅವರನ್ನು ಬಂಧಿಸಲಾಗಿದೆ. ಬಳಿಕ ಹೌದು ತಾನೇ ಪತಿಯನ್ನು ಕೊಲೆ ಮಾಡಿದ್ದು ವೈವಾಹಿಕ ಜೀವನದಲ್ಲಿ ಸಂತೃಪ್ತಿ ಇಲ್ಲದಿರುವುದೇ ಕೊಲೆಗೆ ಕಾರಣ ಎಂದು ಒಪ್ಪಿಕೊಂಡಿದ್ದರು.

ಮೊದಲು ಅವರು ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ಹೇಳಲಾಗಿತ್ತು. ಆದರೆ ವೈದ್ಯಕೀಯ ವರದಿಯಲ್ಲಿ ಇದು ಸಹಜ ಸಾವಲ್ಲ ಕೊಲೆ ಎನ್ನುವುದು ಬಹಿರಂಗವಾಗಿತ್ತು.
ಏಪ್ರಿಲ್ 16ರಂದು ಅಪೂರ್ವ ಅವರು ರೋಹಿತ್ ಇದ್ದ ಕೋಣೆಗೆ ಬಂದಿದ್ದರು. ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಕೇವಲ ಒಂದೂವರೆಗಂಟೆಯಲ್ಲಿ ಕೊಲೆ ಮಾಡಲು ಬಳಸಿದ್ದ ಎಲ್ಲಾ ಸಾಕ್ಷ್ಯವನ್ನು ನಾಶ ಪಡಿಸಿ, ಅವರಿಗೆ ಹೃದಯಾಘಾತವಾಗಿದೆ ಎಂದು ಹೇಳಿ ಅಪರಾಧ ತಂಡದ ಹಾದಿ ತಪ್ಪಿಸಿದ್ದರು.
ತಿವಾರಿ ಅವರು ಏಪ್ರಿಲ್ 12 ರಂದು ದೆಹಲಿಗೆ ಮತದಾನಕ್ಕಾಗಿ ತೆರಳಿದ್ದರು, ಏ.15ರಂದು ಮನೆಗೆ ವಾಪಸಾಗುವ ವೇಳೆ ಗೋಡೆಯನ್ನು ಹಿಡಿದುಕೊಂಡು ಮನೆಯೊಳಗೆ ತೆರಳಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಮರುದಿನ ರೋಹಿತ್ ಅವರ ತಾಯಿ ಆಸ್ಪತ್ರೆಯಲ್ಲಿದ್ದಾಗ ಅವರಿಗೆ ಒಂದು ಕರೆ ಬಂದಿತ್ತು, ರೋಹಿತ್ ಅವರ ಆರೋಗ್ಯ ಸರಿಯಿಲ್ಲ ಹಾಗೂ ಅವರ ಮೂಗಿನಿಂದ ರಕ್ತ ಬರುತ್ತಿದೆ ಎಂದು ಹೇಳಲಾಗಿತ್ತು. ತಕ್ಷಣವೇ ಅಂಬ್ಯುಲೆನ್ಸ್ ಕಳುಹಿಸಿದ್ದರೂ ಕೂಡ ಅಷ್ಟರಲ್ಲಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು.












Click it and Unblock the Notifications