ಯೋಗಿ ವಿಚಾರಣೆ ಏಕೆ ನಡೆಸಬಾರದು? 4 ವಾರದಲ್ಲಿ ವರದಿ ಕೇಳಿದ ಸುಪ್ರೀಂ
ನವದೆಹಲಿ, ಆಗಸ್ಟ್ 20 : ಗೋರಖ್ ಪುರ್ ನಲ್ಲಿ 2007ರಲ್ಲಿ ಮಾಡಿದ್ದ ಪ್ರಚೋದನಾಕಾರಿ ಭಾಷಣ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಚಾರಣೆಯನ್ನು ಏಕೆ ಮಾಡಬಾರದು ಎಂದು ನಾಲ್ಕು ವಾರದೊಳಗೆ ವಿವರಣೆ ನೀಡಬೇಕು ಎಂದು ಸೋಮವಾರದಂದು ಸುಪ್ರೀಂ ಕೋರ್ಟ್ ಉತ್ತರಪ್ರದೇಶ ಸರಕಾರಕ್ಕೆ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಹಾಗೂ ಡಿ.ಎಂ.ಚಂದ್ರಚೂಡ್ ಅವರನ್ನು ಒಳಗೊಂಡ ಪೀಠದಿಂದ ರಾಜ್ಯ ಸರಕಾರಕ್ಕೆ ಮತ್ತು ಗೋರಖ್ ಪುರ್ ಮ್ಯಾಜಿಸ್ಟೇಟ್ ಕೋರ್ಟ್ ಗೆ ನೋಟಿಸ್ ನೀಡಲಾಗಿದೆ.
ಗುಂಪು ಹತ್ಯೆಗಳಿಗೆ ಅನವಶ್ಯಕ ಪ್ರಾಮುಖ್ಯತೆ ಕೊಡಲಾಗುತ್ತಿದೆ: ಯೋಗಿ ಆದಿತ್ಯನಾಥ
ಸದ್ಯಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಹಾಗೂ ಆಗ ಗೋರಖ್ ಪುರ್ ಸಂಸದರಾಗಿದ್ದ ಯೋಗಿ ಆದಿತ್ಯನಾಥ್ ವಿರುದ್ಧ ವಿಚಾರಣೆ ನಡೆಸದಂತೆ ಅಲಹಾಬಾದ್ ಹೈ ಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲಾಗಿತ್ತು. ಅಂದ ಹಾಗೆ ಮುಂದಿನ ವಿಚಾರಣೆಯನ್ನು ನಾಲ್ಕು ವಾರಗಳ ನಂತರ ಸುಪ್ರೀಂ ಕೋರ್ಟ್ ಕೈಗೆತ್ತಿಕೊಳ್ಳಲಿದೆ.
ಕಳೆದ ವರ್ಷ ಸೆಷನ್ಸ್ ಕೋರ್ಟ್ ನೀಡಿದ್ದ ಆದೇಶಕ್ಕೆ ಅರ್ಜಿದಾರ ರಶೀದ್ ಖಾನ್ ಮೇಲ್ಮನವಿ ಸಲ್ಲಿಸಿದ್ದರು. ಯೋಗಿ ಆದಿತ್ಯನಾಥ್ ಮತ್ತು ಇತರರ ವಿರುದ್ಧ ವಿಚಾರಣೆ ನಡೆಸಲು ಮ್ಯಾಜಿಸ್ಟ್ರೇಟ್ ಒಪ್ಪಿಗೆ ನೀಡಿರಲಿಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ವಿಚಾರಣೆಗೆ ಬೇಕಾದ ಕಡ್ಡಾಯ ಒಪ್ಪಿಗೆಯನ್ನು ಉತ್ತರ ಪ್ರದೇಶ ಸರಕಾರ ನೀಡಿರಲಿಲ್ಲ.
2007ರ ಜನವರಿಯಲ್ಲಿ ಗೋರಖ್ ಪುರ್ ರೈಲು ನಿಲ್ದಾಣದ ವಿರುದ್ಧ ಕೋಮು ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪ ಯೋಗಿ ಆದಿತ್ಯನಾಥ್ ಮೇಲೆ ಇದ್ದು, ಈ ಬಗ್ಗೆ ಪೊಲೀಸರಲ್ಲಿ ದೂರು ದಾಖಲಾಗಿತ್ತು. ಆ ಭಾಷಣ ಮಾಡಿದ ನಂತರ ಉತ್ತರಪ್ರದೇಶದ ಪೂರ್ವ ಭಾಗದಲ್ಲಿರುವ ಈ ಪ್ರದೇಶದಲ್ಲಿ ಹಿಂಸಾಚಾರವಾಗಿತ್ತು.