ಮಂದಿರಗಳೇನು ಬಿಜೆಪಿಯ ಸ್ವತ್ತೆ?ನಾನು ಹೋದರೆ ತಪ್ಪೇನು?ರಾಹುಲ್ ಪ್ರಶ್ನೆ
ನವದೆಹಲಿ, ಅಕ್ಟೋಬರ್ 05: 'ದೇವಾಲಯಗಳೇನು ಬಿಜೆಪಿಯ ಸ್ವತ್ತೇ? ಧಾರ್ಮಿಕ ಸ್ಥಳಗಳಿಗೆ ನಾನು ಹೋದರೆ ತಪ್ಪೇನು?' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ನವದೆಹಲಿಯಲ್ಲಿ ಶುಕ್ರವಾರ ಹಿಂದುಸ್ಥಾನ್ ಟೈಮ್ಸ್ ಲೀಡರ್ ಶಿಪ್ ಸಮಿತಿಯಲ್ಲಿ ಪ್ರೇಕ್ಷಕರನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
"ಬಿಜೆಪಿ ಎಲ್ಲ ಕಡೆಯಲ್ಲೂ ಸರ್ವಾಧಿಕಾರಿಯಂತೆ ಮೆರೆಯುತ್ತಿದೆ. ಎಲ್ಲವೂ ತನ್ನದೇ ಸ್ವತ್ತು ಎಂದುಕೊಂಡಿದೆ. ಬಿಜೆಪಿಯವರು ಮಾತ್ರ ದೇವಾಲಯಕ್ಕೆ ಹೋಗಬೇಕೆ? ನಾನು ಹೋಗಬಾರದೆ? ದೇವಾಲಯಗಳೇನು ಅವರ ಸ್ವತ್ತೇ? ಹೀಗೆ ಎಲ್ಲದರಲ್ಲೂ ನಿರಂಕುಶ ಪ್ರಭುತ್ವ ಸಾಧಿಸುವುದು ಬಿಜೆಪಿಯವರ ಹುಟ್ಟುಗುಣ" ಎಂದು ರಾಹುಲ್ ಗಾಂಧಿ ಹರಿಹಾಯ್ದರು.

"ಎಲ್ಲ ಜ್ಞಾನವೂ ತಮಗೊಬ್ಬರಿಗೇ ಇದೆ ಎಂದು ಬಿಜೆಪಿ ಭಾವಿಸಿದಂತಿದೆ. ತಮಗೆ ಮಾತ್ರವೇ ಎಲ್ಲವೂ ಅರ್ಥವಾಗುತ್ತದೆ ಎಂಬು ಅದು ತಿಳಿದುಕೊಂಡಿದೆ. ಮಾತುಕತೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಬಹುದು ಎಂದರೆ ಅದು ನಂಬುವುದಿಲ್ಲ. ಈ ಹಿಂದೊಮ್ಮೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ನನ್ನನ್ನು ಭೇಟಿ ಯಾಗುವುದಕ್ಕೆ ಬಂದಿದ್ದರು. ಆಗ, ಕಾಶ್ಮೀರದಲ್ಲಿ ಗಭೀರ ಸಮಸ್ಯೆ ಇದೆ ಎಂದು ನಾನು ಹೇಳಿದೆ. ಅದಕ್ಕೆ ಅವರು 'ಹಾಗೇನೂ ಇಲ್ಲ' ಎಂದು ಹೇಳಿ ಮಾತು ನಿಲ್ಲಿಸಿಬಿಟ್ಟರು" ಎಂದು ರುಲ್ ಗಾಂಧಿ ನೆನಪಿಸಿಕೊಂಡರು.
'ನಮಗೂ, ಬಿಜೆಪಿಯವರಿಗೂ ಇರುವ ವ್ಯತ್ಯಾಸ ಇಷ್ಟೇ. ನಾವು ಜನರನ್ನು ನಂಬುತ್ತೇವೆ, ಜ್ಞಾನ ಎಲ್ಲರಲ್ಲಿಯೂ ಇದೆ ಎಂದು ನಾವು ಎಲ್ಲರನ್ನೂ ಗೌರವಿಸುತ್ತೇವೆ' ಎಂದು ಅವರು ಹೇಳಿದರು.












Click it and Unblock the Notifications