ಜುಲೈ 27ರಂದು ಬಿಜೆಪಿ ಸಂಸದೀಯ ಮಂಡಳಿ ಸಭೆ, ಮುಂದಿನ ಸಿಎಂ ಆಯ್ಕೆ?
ನವದೆಹಲಿ, ಜುಲೈ 26: ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ ಬೆನ್ನಲ್ಲೇ ಕರ್ನಾಟಕದ ಮುಂದಿನ ಸಿಎಂ ಯಾರಾಗಲಿದ್ದಾರೆ ಎನ್ನುವ ಚರ್ಚೆ ಆರಂಭವಾಗಿದೆ.
ಬಿಜೆಪಿ ಸಂಸದೀಯ ಸಭೆಯು ಜುಲೈ 27ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ, ನಾಳೆಯೇ ಮುಖ್ಯಮಂತ್ರಿ ಘೋಷಣೆ ಮಾಡಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಬಿಎಸ್ವೈ ರಾಜೀನಾಮೆ; ದೆಹಲಿಯಿಂದ ಬರಲಿದ್ದಾರೆ ಬಿಜೆಪಿ ವೀಕ್ಷಕರು
ಸಿಎಂ ಅಭ್ಯರ್ಥಿ ಸಂಭಾವ್ಯ ಹತ್ತಾರು ಹೆಸರುಗಳು ಕೇಳಿಬರುತ್ತಿವೆ. ಆದರೆ ಬಿಜೆಪಿ ಹೈಮಾಂಡ್ ಇದುವರೆಗೆ ಕರ್ನಾಟಕದ ಮುಂದಿನ ಸಿಎಂ ಯಾರು ಎಂದು ಘೋಷಣೆ ಮಾಡಿಲ್ಲ. ಬಿ ಎಸ್ ಯಡಿಯೂರಪ್ಪ ಅವರು ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ದೆಹಲಿ ಮಟ್ಟದಲ್ಲಿ ಸಕ್ರಿಯಗೊಂಡಿದೆ.
ಮುಂದೆ ಯಾರನ್ನು ಮುಖ್ಯಮಂತ್ರಿ ಮಾಡಬೇಕು? ಪ್ರಕ್ರಿಯೆ ಹೇಗಿರಬೇಕು ಎಂಬುದರತ್ತ ಮಾತುಕತೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ನಾಳೆ ಮಂಗಳವಾರ ಬೆಳಗ್ಗೆ 9.30 ಕ್ಕೆ ದೆಹಲಿಯಲ್ಲಿ ಬಿಜೆಪಿ ಸಂಸದೀಯ ಮಂಡಳಿ ಸಭೆ ಸೇರಲಿದೆ. ಜಿಎಂಸಿ ಬಾಲಯೋಗಿ ಆಡಿಟೋರಿಯಂ ನಲ್ಲಿ ಸಭೆ ನಡೆಯಲಿದೆ.
ಕರ್ನಾಟಕದ ಮುಖ್ಯಮಂತ್ರಿಯಾಗಿ ನಾಲ್ಕು ಬಾರಿ ಪ್ರಮಾಣ ವಚನ ಸ್ವೀಕರಿಸಿರುವ ಬಿ.ಎಸ್ ಯಡಿಯೂರಪ್ಪನವರು ಒಮ್ಮೆಯೂ ಪೂರ್ಣಾವಧಿಯಾಗಿ ಅಧಿಕಾರಿ ನಿರ್ವಹಿಸಲು ಸಾಧ್ಯವಾಗಿಲ್ಲ. ಇಂದಿಗೆ ಅವರು ಮುಖ್ಯಮಂತ್ರಿಯಾಗಿ ಎರಡು ವರ್ಷವಾಗಿತ್ತು. ಸಂಭ್ರಮಾಚರಣೆಯ ದಿನವೇ ಅವರು ರಾಜೀನಾಮೆ ಘೋಷಿಸಿದ್ದಾರೆ.
ಯಡಿಯೂರಪ್ಪನವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ಅರಿತೇ ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ರವರು ಆಂಧ್ರಪ್ರದೇಶಕ್ಕೆ ತೆರಳಿದ್ದವರು ವಾಪಸ್ ಬಂದಿದ್ದಾರೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ನಿರ್ಗಮನದ ಬೆನ್ನಲ್ಲೇ ಕರ್ನಾಟಕದ ಮುಂದಿನ ಸಿಎಂ ಯಾರು ಎಂಬ ಚರ್ಚೆ ಆರಂಭವಾಗಿದೆ. ಈ ಕುರಿತು ಯಡಿಯೂರಪ್ಪನವರು ಯಾವುದೇ ಸುಳಿವು ನೀಡಿಲ್ಲ. ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಅವರ ತಿಳಿಸಿದ್ದಾರೆ.